ADVERTISEMENT

ಪತ್ನಿ ಬಗ್ಗೆ ಮಾಸ್ಟರ್ ಹಿರಣ್ಣಯ್ಯ ಮಾತು: ‘ಬದುಕು ಆಕೆ ಕೊಟ್ಟ ಭಿಕ್ಷೆ’

​ಪ್ರಜಾವಾಣಿ ವಾರ್ತೆ
Published 2 ಮೇ 2019, 7:22 IST
Last Updated 2 ಮೇ 2019, 7:22 IST
   

‘ನಾನು ಕುಡಿಯುತ್ತಿದ್ದಾಗ ಮೃಗವಾಗಿದ್ದೆ. ಹೆಂಡತಿಗೆ ನೋವು ಕೊಡುತ್ತಿದ್ದೆ. ಕೊನೆಗೆ, ನನ್ನನ್ನು ಮನುಷ್ಯನನ್ನಾಗಿ ಮಾಡಿದ್ದೇ ನನ್ನ ಹೆಂಡತಿ. ಈ ಬದುಕು ಆಕೆ ಕೊಟ್ಟ ಭಿಕ್ಷೆ’

–ಕೆಲವು ವರ್ಷದ ಹಿಂದೆ ನಡೆದ ಟಿ.ವಿ. ಕಾರ್ಯಕ್ರಮವೊಂದರಲ್ಲಿ ಮಾಸ್ಟರ್‌ ಹಿರಣ್ಣಯ್ಯ ಪ್ರೇಕ್ಷಕರ ಮುಂದೆ ತಮ್ಮ ಬದುಕಿನ ಪುಟಗಳನ್ನು ತೆರೆದಿಟ್ಟಿದ್ದು ಹೀಗೆ.

ಬಾಲ್ಯದಲ್ಲಿಯೇ ಅವರಿಗೆ ಸಿನಿಮಾ ಮತ್ತು ನಾಟಕ ನೋಡುವ ಚಟ ಇತ್ತಂತೆ. ಮೈಸೂರಿನಲ್ಲಿದ್ದಾಗ ಅವರು ಮನೆಗಳಿಗೆ ಪತ್ರಿಕೆಗಳನ್ನು ಹಾಕುತ್ತಿದ್ದರಂತೆ. ಆಗ ಅವರಿಗೆ ಒಂದೂವರೆ ರೂಪಾಯಿ ಸಿಗುತ್ತಿತ್ತು. ಸಿನಿಮಾ ಮತ್ತು ನಾಟಕ ನೋಡವುದಕ್ಕಾಗಿ ಹಣ ಹೊಂದಿಸಲು ಆ ವೇಳೆ ಸಾಕಷ್ಟು ಕಷ್ಟಪಡುತ್ತಿದ್ದೆ’ ಎಂದು ಪ್ರೇಕ್ಷಕರ ಮುಂದೆ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದರು.

ADVERTISEMENT

ಹಿರಣ್ಣಯ್ಯ ರಂಗಭೂಮಿ ಪ್ರವೇಶಿಸುವುದು ಅವರ ತಂದೆಗೆ ಎಳ್ಳಷ್ಟೂ ಇಷ್ಟವಿರಲಿಲ್ಲವಂತೆ. ಕೊನೆಗೆ, ನಾಟಕವೇ ಅವರ ಉಸಿರಾಯಿತು. ನಾಟಕವೊಂದರಲ್ಲಿ ನಟಿಸುವಾಗ ತಂದೆಯಿಂದಲೇ ಅವರು ಅವಮಾನ ಅನುಭವಿಸಿದ್ದು ಉಂಟು. ಈ ಘಟನೆಯೇ ಅವರು ನಾಟಕದಲ್ಲಿ ಮುಂದುವರಿಸಲು ಬುನಾದಿಯಾಗಿದ್ದು ವಿಶೇಷ. ‘ತಂದೆಯ ಮಾತನ್ನು ಸವಾಲಾಗಿ ಸ್ವೀಕರಿಸಿ ಈ ವೃತ್ತಿಯಲ್ಲಿ ಮುಂದುವರಿದೆ’ ಎಂದು ಹೇಳಿಕೊಂಡಿದ್ದರು.

ತಂದೆಯ ನಿಧನದ ಬಳಿಕ ಅವರ ಪಯಣ ಬೆಂಗಳೂರಿಗೆ ಸಾಗಿತು. ಉದ್ಯಾನ ನಗರಿಗೆ ಬಂದಾಗ ಅವರ ಆರಂಭದ ಬದುಕು ಅಷ್ಟು ಸುಲಭವಾಗಿರಲಿಲ್ಲ. ಇಲ್ಲಿ ಬದುಕು ಕಟ್ಟಿಕೊಳ್ಳಲು ಸಾಕಷ್ಟು ಸವಾಲು ಎದುರಿಸಿದ್ದರಂತೆ. ಕೊನೆಗೆ, ಹಿರಣ್ಣಯ್ಯ ಅವರ ನೆರವಿಗೆ ಬಂದಿದ್ದು ಕಾದಂಬರಿಕಾರ ಅ.ನ. ಕೃಷ್ಣರಾಯರು. ಅವರ ಸಹಕಾರದಿಂದಲೇ ರಂಗಭೂಮಿಗೆ ಬೇಕಾದ ತಯಾರಿ ಆರಂಭಿಸಿದರಂತೆ.

ಕಿರುತೆರೆ, ಹಿರಿತೆರೆ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಿಗೆ ಹೋದರೆ ಜನರಿಗೆ ಹಿರಣ್ಣಯ್ಯ ಜೀವನದ ಪಾಠ ಹೇಳುತ್ತಿದ್ದರು.

‘ಮಕ್ಕಳ ಎಜುಕೇಷನ್‌, ಪ್ರೊಪೆಷನ್‌, ವೈಫ್‌ ಸೆಲೆಕ್ಷನ್‌ನಲ್ಲಿ ಬಾಯಿ ಹಾಕಬಾರದು’ ಎಂದು ಅವರು ಹೇಳಿದಾಗ ಜನರಿಂದ ಚಪ್ಪಾಳೆಯ ಸುರಿಮಳೆಯಾಗುತ್ತಿತ್ತು.

‘ಮಕ್ಕಳು ಮಾಡುವ ಕೆಲಸವನ್ನು ಕೇವಲ ಮೇಲುಸ್ತುವಾರಿ ಮಾಡಬೇಕು. ಆಗ ಅವರ ಬದುಕು ಕೂಡ ಸುಂದರವಾಗಿರುತ್ತದೆ’ ಎಂದು ಸಲಹೆ ನೀಡುತ್ತಿದ್ದರು.

ಕನ್ನಡ ಚಿತ್ರರಂಗದೊಂದಿಗೆ ಅವರದು ಅವಿನಾಭಾವ ಸಂಬಂಧ. ನಟ ದರ್ಶನ್‌ ನಟನೆಯ ‘ಗಜ’, ಸುದೀಪ್‌ ಅಭಿನಯದ ‘ನಂ. 75 ಶಾಂತಿ ನಿವಾಸ’, ‘ಕೇರ್‌ ಆಫ್‌ ಫುಟ್‌ಪಾತ್‌’ ಚಿತ್ರದಲ್ಲಿ ಅವರು ನಟಿಸಿದ್ದರು. ಧಾರಾವಾಹಿ ಮತ್ತು ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.