ತಮಿಳಿನ ಕಿರುತೆರೆ ನಟಿ ಕಸ್ತೂರಿ ಶಂಕರ್ ಸೂಪರ್ ಸ್ಟಾರ್ ರಜನಿಕಾಂತ್ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಫೇಸ್ಬುಕ್ ಹಾಗೂ ಟ್ವಿಟರ್ನಲ್ಲಿ ರಜನಿ ಆರೋಗ್ಯ ಕುರಿತು ಅನುಮಾನ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದು, ನಾನು ರಜನಿಯ ಆರೋಗ್ಯ ಕಾಳಜಿಯಿಂದಲೇ ಈ ಪೋಸ್ಟ್ ಮಾಡಿದ್ದು ಅಭಿಮಾನಿಗಳು ನನ್ನ ಮೇಲೆ ಕೋಪ ಮಾಡಿಕೊಳ್ಳಬಾರದು ಎಂದಿದ್ದಾರೆ.
ರಜನಿಯ ಆರೋಗ್ಯ ತಪಾಸಣೆ ಮಾಡಲು ಭಾರತದಲ್ಲಿ ಸಮರ್ಥ ವೈದ್ಯರು ಇಲ್ಲವೇ? ಎಂದು ಕಸ್ತೂರಿ ಶಂಕರ್ ಪ್ರಶ್ನೆ ಮಾಡಿದ್ದಾರೆ. ಕೋವಿಡ್ ಸಮಯದಲ್ಲಿ ಭಾರತದಿಂದ ಆಗಮಿಸುವ ವಿಮಾನಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದ್ದರು ಕೇಂದ್ರ ಸರ್ಕಾರದ ವಿಶೇಷ ಅನುಮತಿ ಪಡೆದು ಹೋಗಿದ್ದು ಯಾಕೆ? ಈ ಬಗ್ಗೆ ಯೋಚಿಸಿದರೆ ನನಗೆ ಅನುಮಾನಗಳು ಕಾಡುತ್ತವೆ ಎಂದು ಹೇಳಿದ್ದಾರೆ.
ಸಾಮಾನ್ಯ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಎಂದು ಹೇಳಿಕೆ ನೀಡಿರುವ ರಜನಿ ಕುಟುಂಬದವರು ಹೃದಯ ಸಂಬಂಧಿ ರೋಗಗಳಿಗೆ ಹೆಚ್ಚು ಜನಪ್ರಿಯವಾಗಿರುವ ಮೆಯೋ ಕ್ಲಿನಿಕ್ಗೆ ಹೋಗಿದ್ದು ಯಾಕೆ ಎಂದಿದ್ದಾರೆ. ಭಾರತೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರಕದಂತಹ ಸ್ಥಿತಿ ರಜನಿ ಅವರಿಗೇನಾಗಿದೆ? ಎಂದು ಕಸ್ತೂರಿ ಶಂಕರ್ ಬಹಿರಂಗವಾಗಿಯೇ ಅನುಮಾನ ವ್ಯಕ್ತಪಡಿಸಿದ್ದಾರೆ.
ನನ್ನ ಬಗ್ಗೆ ಕೋಪ ಮಾಡಿಕೊಳ್ಳದೇರಜನಿ ಅಭಿಮಾನಿಗಳುಈ ಎಲ್ಲಾ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಮನವಿ ಮಾಡಿದ್ದಾರೆ. ಎಲ್ಲರಂತೆ ರಜನಿಕಾಂತ್ ಆರೋಗ್ಯವಾಗಿರಬೇಕು ಎಂದು ನಾನು ಬಯಸುತ್ತೇನೆ. ಆದರೆ ಜಯಲಲಿತಾ ಆಸ್ಪತ್ರೆಯಲ್ಲಿದ್ದಾಗ ಅವರಿಗೆ ಏನಾಗಿದೆ ಎಂಬುದನ್ನು ತಿಳಿಯಲು ಆಗ ಜನರು ಬಯಸಿದ್ದರು. ಕೊನೆಯವರೆಗೂ ಅದು ಗೌಪ್ಯವಾಗಿಯೇ ಉಳಿಯಿತು. ಈಗ ರಜನಿಕಾಂತ್ಗೆ ಏನಾಗಿದೆ ಎಂದು ತಿಳಿಯಲು ನಾನು ಬಯಸುತ್ತೇನೆ, ಅವರ ಅಭಿಮಾನಿಯಾಗಿ ರಜನಿ ಸದಾ ಆರೋಗ್ಯವಾಗಿರಬೇಕು ಎಂಬುದೇ ನನ್ನ ಆಸೆ ಎಂದು ಕಸ್ತೂರಿ ಶಂಕರ್ ಪೋಸ್ಟ್ ಮಾಡಿದ್ದಾರೆ.
ಕಸ್ತೂರಿ ಶಂಕರ್ ಅವರ ಈ ಪೋಸ್ಟ್ಗೆ ಕೆಲವರು ರಜನಿಗೆ ಏನೂ ಆಗಲ್ಲ, ನೀವು ಗಾಬರಿಯಾಗುವ ಅಗತ್ಯ ಇಲ್ಲ ಎಂದು ಕಮೆಂಟ್ ಹಾಕಿದ್ದಾರೆ. ಮತ್ತೆ ಕೆಲವರು ನೀವು ಹೇಳಿದ್ದು ನಿಜ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.