ನಿರ್ದೇಶಕಶಂಕರ್2005ರಲ್ಲಿ ‘ಜೂಟಾಟ’ ಸಿನಿಮಾ ಮಾಡಿದ್ದರು. ಈ ಚಿತ್ರದಲ್ಲಿ ಧ್ಯಾನ್ ನಾಯಕನಾಗಿ ನಟಿಸಿದ್ದರು. ಈಗ ಅದೇ ಹೆಸರಿನ ಕಾಮಿಡಿ ಮತ್ತು ಹಾರಾರ್ ಜಾನರ್ ಸಿನಿಮಾಕ್ಕೆ ನಿರ್ದೇಶಕ ನಾಗೇಶ್ ಕಾರ್ತಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಲಾಕ್ಡೌನ್ಗೂ ಮೊದಲೇ ಸೆಟ್ಟೇರಿದ್ದ ಈ ಚಿತ್ರ ಈಗಾಗಲೇ 26 ದಿನಗಳ ಶೂಟಿಂಗ್ ಪೂರ್ಣಗೊಳಿಸಿದೆ.
‘ಒಂದು ಹಾಡು ಮತ್ತು ಸಣ್ಣಪುಟ್ಟ ದೃಶ್ಯಗಳ ಚಿತ್ರೀಕರಣವಷ್ಟೇ ಬಾಕಿ ಇದೆ. ಸರ್ಕಾರ ಈಗ ಮತ್ತೆ ಲಾಕ್ಡೌನ್ ಹೇರದಿದ್ದರೆ ಎರಡು ದಿನಗಳಲ್ಲಿ ಶೂಟಿಂಗ್ ಪೂರ್ಣಗೊಳಿಸಿ, ಚಿತ್ರೀಕರಣೋತ್ತರ ಕೆಲಸಗಳನ್ನು ಕೈಗೆತ್ತಿಕೊಳ್ಳುತ್ತಿದ್ದೆವು’ ಎಂದು ನಿರ್ದೇಶಕ ನಾಗೇಶ್ ಕಾರ್ತಿ ‘ಪ್ರಜಾಪ್ಲಸ್’ ಜತೆಗೆ ಮಾತಿಗಾರಂಭಿಸಿದರು.
ಇದು ಕಾಮಿಡಿ– ಹಾರರ್ ಜಾನರ್ ಸಿನಿಮಾ. ಕಾಮಿಡಿ ಪ್ರಧಾನವಾಗಿದ್ದು, ಸ್ವಲ್ಪ ಹಾರಾರ್ ಅಂಶವೂ ಮಿಶ್ರಣವಾಗಿದೆ. ಕಾಮಿಡಿ ಮತ್ತು ಹಾರಾರ್ ಎಂದಾಕ್ಷಣ ದೆವ್ವವೇಮುಖ್ಯವಾಗಿರುತ್ತದೆ ಎನ್ನುವಂತಿಲ್ಲ. ದೆವ್ವವನ್ನು ಕಥೆಯ ಕೇಂದ್ರವಸ್ತುವನ್ನೂ ಮಾಡಿಲ್ಲ. ಅದೊಂದು ಭಾಗ ಅಷ್ಟೇ. ಇಂದಿನ ಯುವಜನತೆ ಮತ್ತು ಅವರ ಬದುಕಿಗೆ ಈ ಚಿತ್ರದ ಕಥೆ ಬೇಗ ಕನೆಕ್ಟ್ ಆಗಲಿದೆ. ಚಿತ್ರಕ್ಕೆ ನಿರ್ದಿಷ್ಟ ನಾಯಕನೂ ಇಲ್ಲ, ಕಥೆಯೇ ನಿಜವಾದ ನಾಯಕ. ಪ್ರಮುಖ ಪಾತ್ರಗಳಲ್ಲಿ ಗಿರಿ, ಅಶೋಕ್, ಮಡೆನೂರು ಮನು ಇದ್ದಾರೆ. ‘ಸೈಕೋ’ ಚಿತ್ರ ಖ್ಯಾತಿಯ ನಟಿ ಅನಿತಾ ಭಟ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಮೋಹನ್ ಜುನೇಜಾ, ತುಮಕೂರು ಮೋಹನ್, ಚಂದ್ರಪ್ರಭಾ, ನಿತ್ಯಾ ಅವರ ತಾರಾಬಳಗವಿದೆ ಎನ್ನುತ್ತಾರೆ ಕಾರ್ತಿ.
ಕಾರ್ತಿ ಅವರಿಗೆ ನಿರ್ದೇಶಕನಾಗಿ ಮೊದಲ ಸಿನಿಮಾ ಆಗಿದ್ದರೂ, ಕಳೆದ ಹತ್ತು ವರ್ಷಗಳಿಂದ ಸುಮಾರು 25 ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ದುಡಿದ ಅನುಭವ ಬೆನ್ನಿಗಿದೆ. ‘ಮೈತ್ರಿ’, ‘ಕರಿಯಾ 2’, ‘ದೇವ್ರಾಣೆ’, ‘ಕಾಂಚಾಣ’, ‘ಜಟ್ಟ’ ಚಿತ್ರಗಳಿಗೂಸಹಾಯಕ ನಿರ್ದೇಶಕನಾಗಿ ಅವರು ಕೆಲಸ ಮಾಡಿದ್ದಾರೆ.
ಚಿತ್ರಕ್ಕೆ ಸಿಎಂ ಪ್ರೊಡಕ್ಷನ್ ಸಂಸ್ಥೆ ಬಂಡವಾಳ ಹೂಡಿದೆ.ಈ ಚಿತ್ರದಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಮಹೇಶ್ ಚೈತನ್ಯ ಅವರದು.ಛಾಯಾಗ್ರಹಣ ಸುನೀತ್ ಹಲಗೇರಿ, ಸಂಗೀತ ಪ್ರದ್ಯೋತ್ತಮ್ ಅವರದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.