‘ಬಿಗ್ಬಾಸ್’ ಖ್ಯಾತಿಯ ನಟ ಶೈನ್ ಶೆಟ್ಟಿ ಹಾಗೂ ಅಂಕಿತಾ ಅಮರ್ ನಟಿಸಿರುವ ‘ಜಸ್ಟ್ ಮ್ಯಾರೀಡ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರತಂಡ ಸಿನಿಮಾದೊಳಗಿರುವ ಪಾತ್ರಗಳ ಪರಿಚಯ ಆರಂಭಿಸಿದೆ.
ಇತ್ತೀಚೆಗಷ್ಟೇ ನಟ ದೇವರಾಜ್ ಅವರ ‘ಪೂರ್ಣಚಂದ್ರ’ ಎಂಬ ಪಾತ್ರದ ಲುಕ್ ಬಿಡುಗಡೆ ಮಾಡಿದ್ದ ಚಿತ್ರತಂಡ ಇದೀಗ ನಟ ಅಚ್ಯುತ್ ಕುಮಾರ್ ಅವರ ಪಾತ್ರವನ್ನು ಪರಿಚಯಿಸಿದೆ. ಚಿತ್ರದಲ್ಲಿ ‘ಕರುಣಾಕರ’ ಎಂಬ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ‘ಒಮ್ಮೆ ಅಧಿಕಾರದ ಆಸೆಗೆ ಕಟ್ಟುಬಿದ್ದ ಮನುಷ್ಯ ತನ್ನ ಆಯುಷ್ಯ ಮುಗಿದರೂ ಅಧಿಕಾರದ ದಾಹವನ್ನು ಬಿಡಲಾರ’ ಎಂಬ ಅಡಿಬರಹವನ್ನು ಈ ಪಾತ್ರಕ್ಕೆ ನೀಡಲಾಗಿದೆ. ಈ ಮೂಲಕ ಮತ್ತೊಂದು ಭಿನ್ನ ಪಾತ್ರದ ಮೂಲಕ ಅಚ್ಯುತ್ ಅವರು ಪ್ರೇಕ್ಷಕರ ಎದುರಿಗೆ ಬರಲಿದ್ದಾರೆ.
ಎಬಿಬಿಎಸ್ ಸ್ಟುಡಿಯೊಸ್ ಲಾಂಛನದಲ್ಲಿ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್ ಬಾಬಿ ಅವರು ನಿರ್ಮಿಸಿರುವ, ಸಿ.ಆರ್.ಬಾಬಿ ನಿರ್ದೇಶನದ ಈ ಚಿತ್ರವನ್ನು ಕೆ.ಆರ್.ಜಿ. ಸ್ಟುಡಿಯೋಸ್ ವಿತರಣೆ ಮಾಡುತ್ತಿದೆ. ನಟ ಶ್ರೀಮನ್ ಅವರು ‘ಶಿಶಿಪಾಲ’ ಎಂಬ ಪಾತ್ರದಲ್ಲಿ ನಟಿಸಿದ್ದು, ಭಾರತ ಚಿತ್ರರಂಗದ ಹೆಸರಾಂತ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.