ADVERTISEMENT

ಕಲಾವಿದನ ಹೊಸ ವೇಷ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 7:16 IST
Last Updated 16 ಜುಲೈ 2020, 7:16 IST
‘ಕಲಾವಿದ’ ಚಿತ್ರದ ಪೋಸ್ಟರ್‌
‘ಕಲಾವಿದ’ ಚಿತ್ರದ ಪೋಸ್ಟರ್‌   

‘ಕಲಾವಿದ’ ಇಪ್ಪತ್ತಮೂರು ವರ್ಷದ ಹಿಂದೆ ನಟ ವಿ. ರವಿಚಂದ್ರನ್ ನಿರ್ದೇಶಿಸಿ ನಾಯಕ ನಟನಾಗಿ ಅಭಿನಯಿಸಿದ ಚಿತ್ರ. ಇದಕ್ಕೆ ಅವರೇ ಬಂಡವಾಳ ಹೂಡಿದ್ದರು. ಹೀರಾ ರಾಜ್‌ಗೋಪಾಲ್ ರೋಜಾ, ಉಮಾಶ್ರೀ ಮತ್ತು ರಘುವರನ್ ನಟಿಸಿದ್ದ ಇದಕ್ಕೆ ಸಂಗೀತ ಸಂಯೋಜಿಸಿದ್ದು ಹಂಸಲೇಖ. ಈ ಚಿತ್ರದ ‘ಸಾವಿರಕ್ಕೆ ಒಬ್ಬ ಕಲಾವಿದ’, ‘ಅಂದಗಾರ ಅಳಿಮಯ್ಯ...’ ಹಾಡುಗಳು ಇಂದಿಗೂ ಸಿನಿಪ್ರಿಯರ ಮನದಲ್ಲಿ ಗುನುಗುತ್ತಿವೆ.

ಈಗ ಹೊಸಬರ ತಂಡವೊಂದು ‘ಕಲಾವಿದ’ ಹೆಸರಿನ ಚಿತ್ರ ನಿರ್ಮಿಸಿದ್ದು ಬಿಡುಗಡೆಗೆ ಸಿದ್ಧವಿದೆ. ರವಿಚಂದ್ರನ್ ನಿರ್ದೇಶಿಸಿದ ‘ಕಲಾವಿದ’ ಚಿತ್ರಕ್ಕೂ ಮತ್ತು ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಚಿತ್ರತಂಡದ ವಿವರಣೆ. ಈ ಚಿತ್ರಕ್ಕೆ ಆ್ಯಕ್ಷನ್ ಕಟ್‌ ಹೇಳಿರುವುದು ಶಿವಾನಂದ ಎಚ್.ಡಿ. ಇಪ್ಪತ್ತೈದಕ್ಕೂ ಹೆಚ್ಚು ಸಿನಿಮಾಗಳಿಗೆ‌ ಸಹಾಯಕ ಮತ್ತು ಸಹ ನಿರ್ದೇಶಕರಾಗಿ ದುಡಿದಿರುವ ಅವರಿಗೆ ನಿರ್ದೇಶಕನಾಗಿ ಇದು‌ ಮೊದಲ ಚಿತ್ರ.

ಚಿತ್ರದ ನಾಯಕ ಕ್ಯಾರಿಕೇಚರ್ ಆರ್ಟಿಸ್ಟ್. ಆತ ತನ್ನಲ್ಲಿರುವ ಭಾವನೆಗಳನ್ನು ಅಭಿವ್ಯಕ್ತಿಪಡಿಸುವುದು ಚಿತ್ರಗಳ ಮೂಲಕವೇ. ಆತ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಾನೆ. ಆದರೆ, ಆಕೆಯು ಅವನ ಪ್ರೀತಿಯನ್ನು ತಿರಸ್ಕರಿಸುತ್ತಾಳೆ. ಇದರಿಂದ ಆತ ಬೇಸರದ ಮಡುವಿಗೆ ಬೀಳುತ್ತಾನೆ. ಈ ನಡುವೆಯೇ ನಾಯಕ ಕಳ್ಳರಿಬ್ಬರು ಹೂಡುವ ಷಡ್ಯಂತ್ರಕ್ಕೆ‌ ಸಿಲುಕುತ್ತಾನೆ. ಕೊನೆಗೆ ಅದರಿಂದ ಹೊರಬರುವ ಆತನಿಗೆ ಪ್ರೇಯಸಿಯ ಪ್ರೀತಿ ದಕ್ಕುತ್ತದೆಯೇ ಎಂಬುದು ಈ ಚಿತ್ರದ ತಿರುಳು.

ADVERTISEMENT

‌ಪ್ರದೀಪ್ ಕುಮಾರ್ ಈ ಚಿತ್ರದ ನಾಯಕ. ವೃತ್ತಿಯಲ್ಲಿ ಅವರು ಮೆಕ್ಯಾನಿಕಲ್ ಎಂಜಿನಿಯರ್. ಬೆಳ್ಳಿತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಅವರಿಗೆ ಮೊದಲ ಚಿತ್ರ. ‘ದೊಡ್ಮನೆ ಸೊಸೆ’ ಧಾರಾವಾಹಿಯಲ್ಲಿ ನಟಿಸಿರುವ ಸಂಭ್ರಮ ನಾಯಕಿಯಾಗಿ
ನಟಿಸಿದ್ದಾರೆ.

ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ವಿವೇಕ್ ಚಕ್ರವರ್ತಿ ಮತ್ತು ಪೂರ್ಣಚಂದ್ರ ತೇಜಸ್ವಿ ಸಂಗೀತ‌ ಸಂಯೋಜಿಸಿದ್ದಾರೆ. ರುಮಿತ್ ಕೆ., ಸಂಜಿತ್ ಹೆಗ್ಡೆ, ಅನುರಾಧಾ ಭಟ್ ಮತ್ತು ಗಣೇಶ್ ಕಾರಂತ್ ಧ್ವನಿಯಾಗಿದ್ದಾರೆ. ಚಿದಾನಂದ್‌ ಎಚ್.ಡಿ. ಅವರ ಛಾಯಾಗ್ರಹಣವಿದೆ. ವೆಂಕಿ ಯು.ಡಿ.ವಿ. ಅವರ ಸಂಕಲನವಿದೆ. ಮಂಜುನಾಥ ಹೆಗಡೆ, ಅರುಣಾ ಬಾಲರಾಜ್, ಸುರೇಶ್, ವಠಾರ‌ ಮಲ್ಲೇಶ್ ತಾರಾಗಣದಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.