
ಸಚಿನ್ ಚಲುವರಾಯಸ್ವಾಮಿ, ಸಂಗೀತಾ ಭಟ್ ಜೋಡಿಯಾಗಿ ನಟಿಸಿರುವ ‘ಕಮಲ್ ಶ್ರೀದೇವಿ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಶ್ರೀದೇವಿ ಕೊಲೆ ಸುತ್ತ ನಡೆಯುವ ಈ ಕಥೆಗೆ ವಿ.ಎ ಸುನೀಲ್ ಕುಮಾರ್ ನಿರ್ದೇಶನವಿದೆ.
ಸಂಗೀತಾ ಭಟ್ ಚಿತ್ರದಲ್ಲಿ ವೇಶ್ಯೆಯಾಗಿ ಕಾಣಿಸಿಕೊಂಡಿದ್ದು ಆಕೆಯ ಕೊಲೆ ತನಿಖೆಯೇ ಚಿತ್ರದ ಕಥಾಹಂದರ. ಆಕೆ ನಿಜವಾಗಿಯೂ ಕೊಲೆಯಾಗಿದ್ದಾಳಾ ಅಥವಾ ಇಲ್ಲವೇ ಎಂಬುದೇ ಚಿತ್ರದಲ್ಲಿನ ಕುತೂಹಲಕಾರಿ ಸಂಗತಿ ಎಂದು ಟ್ರೇಲರ್ನಿಂದ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.
ಸ್ವರ್ಣಾಂಬಿಕ ಪಿಚ್ಚರ್ಸ್ ಬ್ಯಾನರ್ನಡಿಯಲ್ಲಿ ಬಿ.ಕೆ ಧನಲಕ್ಷ್ಮೀ ನಿರ್ಮಿಸಿದ್ದು, ರಾಜವರ್ಧನ್ ಸಹ ನಿರ್ಮಾಣವಿದೆ. ಕಿಶೋರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ರಮೇಶ್ ಇಂದಿರಾ ಪ್ರಮುಖ ಪಾತ್ರದಲ್ಲಿದ್ದಾರೆ.
‘ವೇಶ್ಯೆಯಾಗಿ ಸಂಗೀತಾ ಭಟ್ ಅಭಿನಯ ಗಮನ ಸೆಳೆಯುತ್ತದೆ. ಅವರು ಎಲ್ಲಾ ಪ್ರಶಸ್ತಿಗಳಿಗೂ ಅರ್ಹ ಎಂಬಂತೆ ನಟಿಸಿದ್ದಾರೆ. ಸೆ.19ರಂದು ಚಿತ್ರ ತೆರೆಗೆ ಬರಲಿದೆ’ ಎಂದರು ರಾಜವರ್ಧನ್.
‘ಇದು ಗೆಲ್ಲುವ, ನಿಲ್ಲುವ ಕಂಟೆಂಟ್ ಹೊಂದಿರುವ ಸಿನಿಮಾ. ಇಲ್ಲಿನ ಕಾಡುವ ಪಾತ್ರಗಳೇ ಚಿತ್ರದ ಜೀವಾಳ. ಖಂಡಿತವಾಗಿಯೂ ಇದೊಂದು ಗುಣಮಟ್ಟದ ಸಿನಿಮಾ. ಚಿತ್ರಮಂದಿತರಗಳಲ್ಲಿಯೇ ನೋಡಿ ಹರಸಿ’ ಎಂದರು ಸಚಿನ್.
‘ಶ್ರೀದೇವಿ ಸಂಕಟ ನನ್ನ ವೃತ್ತಿ ಬದುಕಿಗೆ ತಿರುವು. ಈ ಪಾತ್ರ ರಿಸ್ಕ್ ಆದರೂ, ವೃತ್ತಿಪರತೆ ಮೀರಿಲ್ಲ. ಎಲ್ಲಿಯೂ ಮುಜುಗರ ಮೂಡಿಸದಂತೆ ವೇಶ್ಯೆ ಪಾತ್ರ ನಿಭಾಯಿಸಿದ್ದೇನೆ’ ಎಂದರು ಸಂಗೀತಾ ಭಟ್. 
ಚಿತ್ರಕ್ಕೆ ಕೀರ್ತನ್ ಸಂಗೀತ, ನಾಗೇಶ್ ವಿ. ಆಚಾರ್ಯ ಛಾಯಾಚಿತ್ರಗ್ರಹಣ, ಜ್ಞಾನೇಶ್ ಬಿ. ಮಠದ್ ಸಂಕಲನವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.