ADVERTISEMENT

ಬಾಲಿವುಡ್‌ನಲ್ಲಿ ಕೋಮುವಾದ.. ರೆಹಮಾನ್ ಪೂರ್ವಾಗ್ರಹ ಪೀಡಿತ ವ್ಯಕ್ತಿ ಎಂದ ಕಂಗನಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಜನವರಿ 2026, 8:05 IST
Last Updated 18 ಜನವರಿ 2026, 8:05 IST
   

ನವದೆಹಲಿ: ಕಳೆದ 8 ವರ್ಷಗಳಲ್ಲಿ ಬಾಲಿವುಡ್‌ನಲ್ಲಿ ನನಗೆ ಅಷ್ಟಾಗಿ ಕೆಲಸಗಳು ಸಿಗುತ್ತಿಲ್ಲ. ಈ ಬದಲಾವಣೆಗೆ ಕೋಮುವಾದದ ಕಾರಣ ಇರಬಹುದು ಎಂದು ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ನಟಿ, ಸಂಸದೆ ಕಂಗನಾ ರನೌತ್, ರೆಹಮಾನ್ ಅವರನ್ನು ಪೂರ್ವಾಗ್ರಹ ಪೀಡಿತ, ದ್ವೇಷಪೂರಿತ ವ್ಯಕ್ತಿ ಎಂದು ಕರೆದಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಕಂಗನಾ, 'ಪ್ರೀತಿಯ ಎ.ಆರ್. ರೆಹಮಾನ್ ಅವರೇ, ನಾನು ಬಿಜೆಪಿಗೆ ಬೆಂಬಲ ನೀಡುತ್ತಿದ್ದೇನೆ ಎಂಬ ಕಾರಣಕ್ಕೆ ಚಿತ್ರರಂಗದಲ್ಲಿ ಪಕ್ಷಪಾತ ಆಗುತ್ತದೆ. ಆದರೂ ನಾನು ನಿಮ್ಮಷ್ಟು ಪೂರ್ವಾಗ್ರಹ ಪೀಡಿತ ಮತ್ತು ದ್ವೇಷಪೂರಿತ ವ್ಯಕ್ತಿಯನ್ನು ನೋಡಿಲ್ಲ' ಎಂದು ಬರೆದುಕೊಂಡಿದ್ದಾರೆ.

ನಾನು ನಿರ್ದೇಶಿಸಿದ್ದ 'ಎಮರ್ಜೆನ್ಸಿ' ಸಿನಿಮಾದ ಕಥೆಯನ್ನು ನಿಮಗೆ ಹೇಳಬೇಕು ಎಂದುಕೊಂಡಿದ್ದೆ. ಕಥೆ ಕೇಳುವುದು ಬಿಡಿ, ನೀವು ನನ್ನನ್ನು ಭೇಟಿಯಾಗಲು ಸಹ ನಿರಾಕರಿಸಿದ್ದೀರಿ. ಸಿನಿಮಾದ ಭಾಗ ಆಗಲು ನಿಮಗೆ ಇಷ್ಟ ಇರಲಿಲ್ಲ ಅಂತ ನನಗೆ ಯಾರೋ ಹೇಳಿದರು. ವಿಪರ್ಯಾಸವೆಂದರೆ, ಎಲ್ಲ ವಿಮರ್ಶಕರು ಎಮರ್ಜೆನ್ಸಿ ಸಿನಿಮಾವನ್ನು 'ಮಾಸ್ಟರ್​ಪೀಸ್' ಎಂದು ಕರೆದರು.

ADVERTISEMENT

ನಿಷ್ಪಕ್ಷಪಾತವಾಗಿದೆ ಎಂಬ ಕಾರಣಕ್ಕೆ ವಿರೋಧ ಪಕ್ಷದ ಮುಖಂಡರು ಕೂಡ ಎಮರ್ಜೆನ್ಸಿ ಚಿತ್ರವನ್ನು ಹೊಗಳಿದರು. ಆದರೆ ನೀವು ನಿಮ್ಮ ದ್ವೇಷದಿಂದ ಕುರುಡರಾಗಿದ್ದೀರಿ. ನನಗೆ ವಿಷಾದವಿದೆ. ನಿಮ್ಮನ್ನು ಕಂಡರೆ ನನಗೆ ಅಯ್ಯೋ ಎನಿಸುತ್ತದೆ ಎಂದೂ ಕಂಗನಾ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಎ.ಆರ್. ರೆಹಮಾನ್ ಹೇಳಿದ್ದೇನು?

ಕಳೆದ 8 ವರ್ಷಗಳಲ್ಲಿ ಬಾಲಿವುಡ್‌ನಲ್ಲಿ ನನಗೆ ಅಷ್ಟಾಗಿ ಕೆಲಸಗಳು ಸಿಗುತ್ತಿಲ್ಲ. ಈ ಬದಲಾವಣೆಗೆ ಕೋಮುವಾದದ ಕಾರಣ ಇರಬಹುದು ಎಂದು ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಹೇಳಿದ್ದಾರೆ. ನೇರವಾಗಿ ಇದು ನನಗೆ ಅನುಭವಕ್ಕೆ ಬಂದಿಲ್ಲ ಎಂದೂ ಅವರು ಹೇಳಿದ್ದರು. ಬಿಬಿಸಿ ಏಷಿಯನ್ ನೆಟ್ವರ್ಕ್ ಸಂದರ್ಶನದಲ್ಲಿ ಮಾತನಾಡಿರುವ ಅವರು, ಅಂತಹ ಅನುಭವಗಳು ನನಗೆ ಪರೋಕ್ಷವಾಗಿ ಆಗಿವೆ ಎಂದಿದ್ದರು.

ಯಾವುದೇ ಅವಕಾಶಗಳನ್ನು ನಾನು ಹುಡುಕಿಕೊಂಡು ಹೋಗುವುದಿಲ್ಲ. ನನಗೆ ಬರುವ ಕೆಲಸಗಳನ್ನು ಶ್ರದ್ಧೆ ಇಟ್ಟು ಮಾಡುತ್ತೇನೆ. ಕೆಲಸ ಹುಡುಕಿ ಹೊರಟರೆ ಅದು ನಮಗೆ ಕೆಟ್ಟದಾಗಬಹುದು ಎಂದಿದ್ದರು. 1990ರ ದಶಕದಲ್ಲಿ ಹಿಂದಿ ಸಿನಿಮಾಗಳಿಗಾಗಿ ಕೆಲಸ ಮಾಡುತ್ತಾ ವೃತ್ತಿ ಜೀವನ ಆರಂಭಿಸಿದಾಗ ಪೂರ್ವಾಗ್ರಹದ ವರ್ತನೆ ಅನುಭವಕ್ಕೆ ಬಂದಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಖಂಡಿತಾ ಇಲ್ಲ ಎಂದು ಹೇಳಿದ್ದರು.

'ಬಹುಶಃ ಇಂತಹುದೆಲ್ಲ ನನ್ನ ಗಮನಕ್ಕೆ ಬರದೇ ಇರಬಹುದು. ದೇವರು ಇದನ್ನೆಲ್ಲಾ ಮರೆಮಾಡಿರಬಹುದು. ನಾನು ಅಂತಹ ಯಾವುದನ್ನೂ ಅನುಭವಿಸಲಿಲ್ಲ, ಆದರೆ, ಕಳೆದ ಎಂಟು ವರ್ಷಗಳಲ್ಲಿ, ಆಗಿರುವ ಬದಲಾವಣೆಗಳು ಬಹುಶಃ, ಕೋಮು ಧೋರಣೆಯಿಂದಲೇ ಸಂಭವಿಸಿರಬಹುದು’ ಎಂದು ಅವರು ವಿವರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.