ADVERTISEMENT

ಅಂಡು ಬಗ್ಗಿಸಿಕೊಂಡು ಕನ್ನಡ ಸಿನಿಮಾ ನೋಡಿ: ನಟ‌ ದರ್ಶನ್

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 8:44 IST
Last Updated 4 ಫೆಬ್ರುವರಿ 2020, 8:44 IST
ದರ್ಶನ್ (ಸಂಗ್ರಹ ಚಿತ್ರ)
ದರ್ಶನ್ (ಸಂಗ್ರಹ ಚಿತ್ರ)   

ಬೆಂಗಳೂರು: ‘ಕನ್ನಡದಲ್ಲಿಯೂ ಒಳ್ಳೆಯ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಕನ್ನಡಿಗರು ಅಂಡು ಬಗ್ಗಿಸಿಕೊಂಡು ಈ ಸಿನಿಮಾಗಳನ್ನು ನೋಡಿದಾಗಲಷ್ಟೇ ಕನ್ನಡ ಚಿತ್ರರಂಗದ ಉಳಿವು ಸಾಧ್ಯ’ ಎಂದು ‘ಚಾಲೆಂಜಿಂಗ್ ಸ್ಟಾರ್’ದರ್ಶನ್ ಹೇಳಿದರು.

ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಪ್ರಜ್ವಲ್ ದೇವರಾಜ್ ನಟನೆಯ ‘ಜಂಟಲ್ ಮನ್’ ಚಿತ್ರದ ಆಡಿಯೊ ಬಿಡುಗಡೆಗೊಳಿಸಿದ ಬಳಿಕ ಮಾತನಾಡಿದ ಅವರು, ‘ಪರಭಾಷೆಯ ಸಿನಿಮಾಗಳಿಗಷ್ಟೇ ಪ್ರೋತ್ಸಾಹ ಕೊಡಬೇಡಿ. ಕನ್ನಡ ಸಿನಿಮಾಗಳನ್ನು ನೋಡಿ ಪ್ರೋತ್ಸಾಹಿಸಬೇಕು’ ಎಂದು ಕೋರಿದರು.

ತೆಲುಗು, ತಮಿಳಿನಲ್ಲಿ ದೊಡ್ಡ ಸಿನಿಮಾ ಮಾಡುತ್ತಾರೆಂದು ಎಂದು‌ ನನಗೂ ಹಲವು‌ ಜನರು ಹೇಳುತ್ತಾರೆ. ನಮ್ಮವರಿಗೆ ಬೆನ್ನುತಟ್ಟುವ‌‌ ಕೆಲಸ ಮಾಡುವ ತನಕ ನಾವು ಉದ್ಧಾರ ಆಗುವುದಿಲ್ಲ ಎಂದರು.

ADVERTISEMENT

ಸಂಚಾರಿ ವಿಜಯ್ ಬಹಳ ದೊಡ್ಡ‌ನಟ. ಅವರು ನಟಿಸಿದ ‘ನಾನು ಅವನಲ್ಲ ಅವಳು’ ಸಿನಿಮಾ ನೋಡಿ ಫಿದಾ ಆದೆ. ಅಂತಹ ಸಿನಿಮಾ ಪರಭಾಷೆಯಲ್ಲಿ ನಿರ್ಮಾಣವಾದರೆ ನಾವು ಅವರಿಗೆ ಪ್ರೋತ್ಸಾಹ ನೀಡುತ್ತೇವೆ. ಅವರಿಗೆ ದುಡ್ಡು ಕೊಟ್ಟು ಕಳುಹಿಸುತ್ತೇವೆ. ನಿಜವಾಗಿಯೂ ಇದು ಅಸಹ್ಯ ಅನಿಸುತ್ತದೆ. ನಮ್ಮವರ ಪ್ರತಿಭೆ ನೋಡಿಯೂ ಅವರನ್ನು ‌ದೂರಸರಿಸುವುದು ಸರಿಯಲ್ಲ ಎಂದು ಹೇಳಿದರು.

ಇತ್ತೀಚೆಗೆ‌ ತಮಿಳಿನ ಕಲಾವಿದರೊಬ್ಬರ ಹೇಳಿಕೆ ಗಮನಿಸಿದೆ. ಇಲ್ಲಿ ಅವರ ಹೆಸರು ಪ್ರಸ್ತಾಪಿಸುವುದಿಲ್ಲ. ಅವರು ಸಂಚಾರಿ ವಿಜಯ್ ಅವರಷ್ಟು ದೊಡ್ಡನಟರೂ ಅಲ್ಲ. ಅಂತಹವರಿಗೆ ಕನ್ನಡಿಗರು ಪ್ರೋತ್ಸಾಹ ‌ನೀಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಧ್ಯಮಗಳು ಕೂಡ‌ ಪರಭಾಷೆಯ ಸಿನಿಮಾಗಳು, ಕಲಾವಿದರ ಬಗ್ಗೆ ಸಾಕಷ್ಟು‌ ಬರೆಯುತ್ತಿವೆ. ಸುದ್ದಿ ಪ್ರಸಾರ ಮಾಡುತ್ತಿವೆ. ಆದರೆ, ನಮ್ಮಂತೆ ಅವರು‌ ನಿಮಗೆ ಸಂದರ್ಶನಕ್ಕೆ ಸಿಗುತ್ತಾರೆಯೇ ಎಂದು‌‌ ಪ್ರಶ್ನಿಸಿದರು.

‘ಜಂಟಲ್‌ಮನ್’ ಉತ್ತಮ ಚಿತ್ರ. ಮಾನವ‌ ಕಳ್ಳಸಾಗಣೆ ಮತ್ತು ಸ್ಲೀಪಿಂಗ್ ಬ್ಯೂಟಿ‌ ಸಿಂಡ್ರೋಮ್(ಹದಿನೆಂಟು ಗಂಟೆಗಳ ಕಾಲ ನಿದ್ದೆ‌ ಮಾಡುವ ರೋಗ) ವಿಷಯವಿಟ್ಟುಕೊಂಡು‌ ಈ ಸಿನಿಮಾ ಮಾಡಲಾಗಿದೆ. ಇಂತಹ ಸಿನಿಮಾಗಳಿಗೆ‌ ಕನ್ನಡಿಗರು ಪ್ರೋತ್ಸಾಹ‌ ನೀಡಬೇಕು ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.