
ಬಹುತೇಕ ಹೊಸಬರಿಂದಲೇ ಕೂಡಿರುವ ‘ಜನರಿಂದ ನಾನು ಮೇಲೆ ಬಂದೆ’ ಚಿತ್ರ ಇತ್ತೀಚೆಗಷ್ಟೇ ಲೀಲಾವತಿ ದೇಗುಲದಲ್ಲಿ ಸೆಟ್ಟೇರಿದೆ. ವಿನೋದ್ರಾಜ್ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ನವಿಲುಗರಿ ನವೀನ್ ನಿರ್ದೇಶನದ ಚಿತ್ರಕ್ಕೆ ಮಂಜುನಾಥ್ ಬಂಡವಾಳ ಹೂಡಿದ್ದಾರೆ.
‘ನಾಲ್ಕು ವರ್ಷಗಳ ಹಿಂದೆ ಚೆನ್ನೈ ಮತ್ತು ಮಂಗಳೂರಿನಲ್ಲಿ ನಡೆದ ಘಟನೆಗಳೆ ಚಿತ್ರಕಥೆಯಾಗಿದೆ. ಡಾನ್ಸ್ ಆಧಾರಿತ ಕಥೆಯಾಗಿದ್ದು, ಸ್ಲಂನಲ್ಲಿ ಜೀವನ ಸಾಗಿಸುತ್ತಾ ನೃತ್ಯಗಾರ ಆಗಬೇಕೆಂದು ಕಷ್ಟಪಡುವ ಹುಡುಗ ಚಿತ್ರದ ನಾಯಕ. ಇನ್ನೊಬ್ಬ ನಾಯಕ ಶಿಕ್ಷಣ ಅರ್ಧಕ್ಕೆ ಬಿಟ್ಟು, ಡಾನ್ಸೇ ಪ್ರಪಂಚ ಅಂದುಕೊಂಡಿರುವ ವಿದ್ಯಾವಂತ. ಒಂದು ಹಂತದಲ್ಲಿ ಭೇಟಿಯಾಗುವ ಇಬ್ಬರ ಗುರಿ ಒಂದೇ ಆಗಿರುತ್ತದೆ. ಮುಂದೆ ಜನರಿಂದ ಇವರಿಗೆ ಯಾವ ರೀತಿ ಪ್ರೋತ್ಸಾಹ ಸಿಗುತ್ತದೆ? ಗುರಿ ತಲುಪುತ್ತಾರಾ? ಎಂಬುದನ್ನು ಒಂದಷ್ಟು ಕಮರ್ಷಿಯಲ್ ಅಂಶಗಳೊಂದಿಗೆ ಹೇಳಲು ಹೊರಟಿದ್ದೇವೆ’ ಎನ್ನುತ್ತಾರೆ ನಿರ್ದೇಶಕರು.
ಗಂಧರ್ವರಾಜ್ ಶಂಕರ್ ನಾಯಕ. ನಿರ್ದೇಶಕರೇ ಮತ್ತೊಬ್ಬ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಆನೇಕಲ್ನ ಸೌಂದರ್ಯ ಮತ್ತು ಮೈಸೂರಿನ ಕೃತಿಕಾ ದಿವಾಕರ್ ನಾಯಕಿಯರು. ಪ್ರಣವ್ ಸತೀಶ್ ಸಂಗೀತ, ಜಿ.ವಿ.ರಮೇಶ್ ಛಾಯಾಚಿತ್ರಗ್ರಹಣ, ಗೌತಮ್ ಗೌಡ ಸಂಕಲನ ಚಿತ್ರಕ್ಕಿದೆ. ಬೆಂಗಳೂರು, ಮೈಸೂರು, ಚೆನ್ನೈ, ಮಂಗಳೂರು ಮುಂತಾದೆಡೆ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.