ಬೆಂಗಳೂರು:‘ಕೆಜಿಎಫ್’– ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿದ ಚಿತ್ರ. ಇದರ ಮೊದಲ ಭಾಗದ ಕಥೆಯ ಎಳೆ ಹೊಳೆದಿದ್ದು ಕೆಜಿಎಫ್ನ ಗಣಿಯಲ್ಲಿ. ಚಾಪ್ಟರ್ 2ರಲ್ಲಿ ರಾಜಕೀಯದ ಕಥೆ ಬೆಸೆಯುವ ಸೂಚನೆಯೊಂದಿಗೆ ಮೊದಲ ಅಧ್ಯಾಯ ಮುಗಿಸಿದ್ದರು ನಿರ್ದೇಶಕ ಪ್ರಶಾಂತ್ ನೀಲ್.
‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಶೂಟಿಂಗ್ ಭರ್ಜರಿಯಾಗಿ ನಡೆದಿದೆ. ಬಿಗ್ ಬಜೆಟ್ ಮತ್ತು ಅದ್ದೂರಿ ಮೇಕಿಂಗ್ ಮೂಲಕ ಮತ್ತೊಂದು ಹೊಸ ದಾಖಲೆ ಬರೆಯಲು ಚಿತ್ರತಂಡ ಮುಂದಾಗಿದೆ. ಯಶ್ ನಾಯಕ ನಟರಾಗಿದ್ದ ಈ ಚಿತ್ರ ಏಕಕಾಲಕ್ಕೆ ಕನ್ನಡ ಸೇರಿದಂತೆ ಐದು ಭಾಷೆಯಲ್ಲಿ ತೆರೆಕಂಡು ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಸದ್ದು ಮಾಡಿತ್ತು.
ಈ ನಡುವೆಯೇ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ‘ಅಧೀರ’ ಪೋಸ್ಟರನ್ನು ಬಿಡುಗಡೆಗೊಳಿಸಿ ಜನರಲ್ಲಿ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿಸಿತ್ತು. ಬಾಲಿವುಡ್ ನಟ ಸಂಜಯ್ ದತ್ ಅವರ ಪೋಸ್ಟರ್ ಬಿಡುಗಡೆಗೊಳಿಸಿ ಈ ಕುತೂಹಲಕ್ಕೆ ಉತ್ತರ ನೀಡಿದೆ.ಹೊಂಬಾಳೆ ಫಿಲ್ಮ್ಸ್ಟ್ವಿಟರ್ ಖಾತೆಯಲ್ಲಿ ಪೋಸ್ಟರ್ ರಿಲೀಸ್ ಆಗಿದೆ. ಸಂಜಯ್ ದತ್ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.ಅಂದಹಾಗೆ ಇಂದು ಸಂಜಯ್ದತ್ ಅವರ ಜನ್ಮದಿನ (ಜುಲೈ 29). ಅವರಿಗೆ ಚಿತ್ರತಂಡ ಶುಭಾಶಯ ಕೋರಿದೆ.
2018ರಲ್ಲಿ ಬಿಡುಗಡೆಯಾದ ಯಶ್ ನಾಯಕ ನಟನಾಗಿರುವ ಕೆ.ಜಿ.ಎಫ್–ಚಾಪ್ಟರ್ 1 ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಕಂಡಿತು. ದೇಶದ ಪ್ರಮುಖ ಭಾಷೆಗಳಲ್ಲಿ ಡಬ್ ಆಗಿಯೂ ಯಶ ಗಳಿಸಿತು. ಕನ್ನಡ ಚಿತ್ರರಂಗದಲ್ಲಿ ನಡೆದ ಪ್ರಯೋಗವು ಬಾಲಿವುಡ್ನಲ್ಲಿಯೂ ಪೈಪೋಟಿ ನೀಡಿತು. ಮೊದಲ ಭಾಗದಲ್ಲಿ ಮುಖ ತೋರದೇ ಅಧೀರ ಪಾತ್ರವನ್ನು ಕಟ್ಟಿದ್ದ ನಿರ್ದೇಶಕ, ಚಾಪ್ಟರ್ 2ರಲ್ಲಿ ಸಂಜಯ್ ದತ್ ಮೂಲಕ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಇದೇ 26ರಂದು ಅಧೀರನ ಪೋಸ್ಟರ್ವೊಂದು ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಹಿಂದಕ್ಕೆ ಕೈಮುಷ್ಠಿ ಕಟ್ಟಿರುವ ಚಿತ್ರ ಮಾತ್ರ ಕಂಡಿತ್ತು. ಸಂಜಯ್ ದತ್ ಅವರ 60ನೇ ಜನುಮದಿನದ ಪ್ರಯುಕ್ತ ಪೋಸ್ಟರ್ ಹೊರಬಂದಿದ್ದು, ಸಂಜಯ್ ದತ್ ಸಹ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಕೆಜಿಎಫ್ ಮೂಲಕ ದತ್ ದಕ್ಷಿಣ ಭಾರತದ ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ.
ಯಾರು ಈ ಅಧೀರ?
ಸೂರ್ಯವರ್ಧನ್ ‘ಕೆಜಿಎಫ್ ಚಾಪ್ಟರ್ 1’ ಚಿತ್ರದ ಪ್ರಮುಖ ಖಳನಾಯಕ. ಅವನ ಸಹೋದರನೇ ಈ ಅಧೀರ. ಮೊದಲ ಭಾಗದಲ್ಲಿ ಅಧೀರನ ಮುಖವನ್ನು ತೋರಿಸಿರಲಿಲ್ಲ. ಸೂರ್ಯವರ್ಧನ್ನ ಸಾವಿನ ಬಳಿಕ ಅಧಿಕಾರದ ಗದ್ದುಗೆ ಏರುವುದು ಗರುಡ. ಈತನನ್ನು ಸುಫಾರಿ ಪಡೆದ ರಾಕಿ ಭಾಯ್ ಕೊಲೆ ಮಾಡುತ್ತಾನೆ. ಎರಡನೇ ಅಧ್ಯಾಯದಲ್ಲಿ ಅಧೀರನ ಪ್ರವೇಶವಾಗಲಿದೆ. ಆತ ‘ನರಾಚಿ’ ಎಂಬ ಗಣಿಯಲ್ಲಿ ಹೇಗೆ ಹವಾ ಎಬ್ಬಿಸಲಿದ್ದಾನೆ ಎನ್ನುವ ಕುತೂಹಲ ಮೂಡಿದೆ.
‘ಅಧೀರ’ನ ಪಾತ್ರವೂ ಸಂಜಯ್ ದತ್ ಮೂಲಕ ಎರಡನೇ ಅಧ್ಯಾಯದಲ್ಲಿ ಮತ್ತೊಂದು ಸಂಚಲನ ಸೃಷ್ಟಿಯಾಗಲಿದೆ ಎಂದು ಚಿತ್ರತಂಡ ಸುಳಿವು ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.