ಬೆಂಗಳೂರು: ಕ್ಯಾ ಚಾಯೇರೆ ತೇರೆ ಕೊ? ದುನಿಯಾ...ಹೀಗೆಂದು ಜಗತ್ತನೇ ಆವರಿಸುವ ಕನಸು ಕಾಣುವ ಆ ಹುಡುಗನ (ಯಶ್) ಹುಟ್ಟಿನೊಂದಿಗೆ ಶುರುವಾಗುವ ಕೆ.ಜಿ.ಎಫ್ ಸಿನಿಮಾದ ಟ್ರೇಲರ್ ಅಭಿಮಾನಿಗಳ ನಿರೀಕ್ಷೆಯನ್ನೂ ಇನ್ನಷ್ಟು ಹೆಚ್ಚಿಸಿದೆ.
ಹೊಂಬಾಳೆ ಪ್ರೊಡಕ್ಷನ್ಸ್ನಡಿ ವಿಜಯ್ ಕಿರಗಂದೂರು ನಿರ್ಮಿಸಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಚಿತ್ರ ‘ಕೆಜಿಎಫ್’. ಕನ್ನಡ, ಹಿಂದಿ, ತೆಲುಗು, ಮಲಯಾಳ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ತಯಾರಾಗಿರುವ ಬಹುಕೋಟಿ ವೆಚ್ಚದ ಈ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲ ಮೂಡಿಸುವಲ್ಲಿ ಟ್ರೇಲರ್ ಯಶಸ್ವಿಯಾಗಿದೆ.
ಟ್ರೇಲರ್ನಲ್ಲಿರುವ ಸಂಭಾಷಣೆಗಳು ಸಿನಿಮಾ ಬಗೆಗಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿವೆ.‘ಎಲ್ಲಾ ಅದ್ಭುತ ಕಥೆಗಳಿಗೂ ವಿಧಿಯೇ ಅಂತ್ಯ ಬರೆದಿರುತ್ತದೆ’ ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಟ್ರೇಲರ್ನಲ್ಲಿ ಮಾಸ್ ಅಭಿಮಾನಿಗಳ ಮನಗೆಲ್ಲುವ ಡೈಲಾಗ್ಗಳ ಸರಪಟಾಕಿಯೇ ಇದೆ.
ಹಿರಿಯ ನಟ ಅನಂತ್ನಾಗ್ ಅವರ ಹಿನ್ನೆಲೆ ಧ್ವನಿಯಲ್ಲಿ ದೃಶ್ಯಗಳಿಗೆ ಮತ್ತಷ್ಟು ಕಿಕ್ ನೀಡಿದೆ.ರವಿ ಬಸ್ರೂರ್ ಅವರ ಹಿನ್ನೆಲೆ ಸಂಗೀತ ಟ್ರೇಲರ್ನ ಮತ್ತೊಂದು ಹೈಲೆಟ್.
‘ಮುಂಬೈ ನಿಮ್ಮಪ್ಪಂದ..? ಅನ್ನೋ ಎದುರಾಳಿ ಪ್ರಶ್ನೆಗೆ, ಅಲ್ಲ.. ನಿಮ್ಮಪ್ಪಂದು.. ಮತ್ತೆ ನಿಮ್ಮ ಅಪ್ಪ ನಾನೇ’ ಹೀಗೆಂದು ಡೈಲಾಗ್ ಹೊಡೆಯುತ್ತಾ ಯಶ್ ಕಾಣಿಸಿಕೊಳ್ಳುತ್ತಾರೆ.1951ರ ಮುಂಬೈನ ರೌಡಿಸಂ ಕಥೆಗಳನ್ನು ಇಲ್ಲಿ ಚಿತ್ರಿಸಲಾಗಿದೆ. ಅಲ್ಲಿಂದ ನೇರವಾಗಿ ಕೋಲಾರ ಗಣಿಗೆ ಸಾಗುವ ಸಿನಿಮಾ, ಗಣಿಯ ಧೂಳಿನಲ್ಲಿ ಅಡಗಿದ್ದ ನೋವಿನ ಕಥೆಗಳನ್ನು ಬಿಚ್ಚಿಟ್ಟಿದೆ.
ಚಿತ್ರವನ್ನು ಮೆಜೆಂತಾ ಕಲರ್ ಥೀಮ್ನಲ್ಲಿ ಚಿತ್ರಿಸಲಾಗಿದೆ. ಭುವನ್ ಗೌಡರ ಛಾಯಾಗ್ರಹಣದ ಚಾಕಚಕ್ಯತೆ, ಫ್ರೇಮ್ ವರ್ಕ್, ಆ್ಯಂಗಲ್ಗಳು ಹಾಲಿವುಡ್ ಸಿನಿಮಾವನ್ನು ಮೀರಿಸುವಂತಿದೆ.
ಬಹುತಾರಾಗಣ ಅಷ್ಟೇ ಅಲ್ಲದೆ,ಸಾವಿರಾರು ಸಹ ಕಲಾವಿದರು, ತಂತ್ರಜ್ಞರು ಕೆಲಸ ಮಾಡಿದ್ದಾರೆ. ಚಿತ್ರದಲ್ಲಿ ಬಳಸಲಾಗಿರುವ ರೆಟ್ರೋ ಸ್ಟೈಲ್ ಕಾರುಗಳು, ಬೈಕ್ಗಳು ಅಬ್ಬಬ್ಬಾ..ನೋಡುಗರಲ್ಲಿ ಸಿನಿಮಾ ದಾಹವನ್ನು ಹೆಚ್ಚಿಸಿದೆ. ಬರೋಬ್ಬರಿ ಎರಡು ವರ್ಷಗಳಿಂದ ಚಿತ್ರೀಕರಣ ನಡೆಸಿ ಕೊನೆಗೂ ತೆರೆಗೆ ಬರಲು ಸಿದ್ಧವಾಗಿರುವ ‘ಕೆ.ಜಿ.ಎಫ್ ಸಿನಿಮಾದಲ್ಲಿ ಅಂತಹದ್ದೇನಿದೆ?’ ಎನ್ನುವ ಜನರ ಪ್ರಶ್ನೆಗೆ ಟ್ರೇಲರ್ ಉತ್ತರವಾಗಿದೆ.
ಸುಮಾರು ಒಂದುವರೆ ಗಂಟೆಯಲ್ಲಿ1 ಲಕ್ಷ ಲೈಕ್ ಮತ್ತು ಸಾಕಷ್ಟು ಕಮೆಂಟ್ ಪಡೆದ ಕನ್ನಡ ಮೊದಲ ಸಿನಿಮಾದ ಟ್ರೇಲರ್ ಎಂಬ ಖ್ಯಾತಿಗೆ ಕೆ.ಜಿ.ಎಫ್ ಪಾತ್ರವಾಗಿದೆ.
ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾಗೆ ಭುವನ ಗೌಡ ಅವರ ಛಾಯಾಗ್ರಹಣವಿದೆ.ಯಶ್ ಜೊತೆ ಶ್ರೀನಿಧಿ ಶೆಟ್ಟಿ, ಅನಂತ್ ನಾಗ್, ಮಾಳವಿಕಾ, ನಾಗಾಭರಣ, ಬಿ.ಸುರೇಶ್, ಅಯ್ಯಪ್ಪ, ನೀನಾಸಂ ಅಶ್ವಥ್, ಅಚ್ಯುತ್ ಕುಮಾರ್, ರಾಮ್, ಅವಿನಾಶ್, ಲಕ್ಕಿ, ಹರೀಶ್ ರಾಯ್, ದಿನೇಶ್ ಮಂಗಳೂರ್, ಮುನಿ ಸೇರಿದಂತೆ ಇನ್ನೂ ಹಲವರ ತಾರಾಗಣ ಚಿತ್ರಕ್ಕಿದೆ.
ಪಂಚ ಭಾಷೆಯಲ್ಲಿ ಸಿದ್ಧವಾಗಿರುವಕೆ.ಜಿ.ಎಫ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದರಬಗ್ಗೆ ಬಾಲಿವುಡ್ ನಟ ಫರಾನ್ ಅಕ್ತರ್ ಟ್ವೀಟ್ ಮಾಡಿದ್ದಾರೆ.
ಕೆಜಿಎಫ್: ಬರಲಿದೆಯೇ ಇನ್ನೊಂದು ಭಾಗ?
ಬೆಂಗಳೂರು:'ಕನ್ನಡಿಗನೊಬ್ಬ ನಿರ್ಮಾಣ ಮಾಡಿರುವ ಅತಿದೊಡ್ಡ ಬಜೆಟ್ನ ಸಿನಿಮಾ' ಎಂದು ಹೇಳಿಕೊಂಡಿರುವ, ನಟ ಯಶ್ ಅವರ ಮಹತ್ವಾಕಾಂಕ್ಷೆಯ 'ಕೆಜಿಎಫ್'ನ ಟ್ರೇಲರ್ ಬಿಡುಗಡೆ ಆಗಿದೆ. ಚಿತ್ರವನ್ನು ಐದು ಭಾಷೆಗಳಲ್ಲಿ ಸಿದ್ಧಪಡಿಸಲಾಗಿದ್ದು, ಡಿಸೆಂಬರ್ 21ರಂದು ತೆರೆಗೆ ಬರಲಿದೆ.
ಇದರ ಜೊತೆಯಲ್ಲೇ, ಇನ್ನೊಂದು ಅಚ್ಚರಿ ಹಾಗೂ ಪ್ರಶ್ನೆಯನ್ನು ಇದು ಸಿನಿಮಾ ಪ್ರೇಮಿಗಳಲ್ಲಿ ಹುಟ್ಟುಹಾಕಿದೆ. ಎರಡು ನಿಮಿಷ, ನಲವತ್ತನಾಲ್ಕು ಸೆಕೆಂಡ್ಗಳಷ್ಟು ಇರುವ ಈ ಟ್ರೇಲರ್ನ ಕೊನೆಯ ಭಾಗದಲ್ಲಿ 'ಚಾಪ್ಟರ್ 1' ಎನ್ನುವ ಒಕ್ಕಣಿಕೆ ಬರುತ್ತದೆ. ಅಂದರೆ, ಕೆಜಿಎಫ್ ಸಿನಿಮಾದ ಇನ್ನೂ ಒಂದು ಭಾಗ ನಿರ್ದೇಶಕರ ಮನಸ್ಸಿನಲ್ಲಿ ಇದೆಯೇ, ಈ ಸಿನಿಮಾ ನಂತರ ಅದು ಕೂಡ ತೆರೆಯ ಮೇಲೆ ಮೂಡಿಬರಲಿದೆಯೇ ಎಂಬ ಪ್ರಶ್ನೆಯನ್ನು ಈ ಟ್ರೇಲರ್ ಹುಟ್ಟುಹಾಕಿದೆ.
ಬೆಂಗಳೂರಿನ ಒರಾಯನ್ ಮಾಲ್ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಈ ಸಿನಿಮಾದ ಕನ್ನಡ, ಹಿಂದಿ, ಮಲಯಾಳ, ತೆಲುಗು ಮತ್ತು ತಮಿಳು ಭಾಷೆಗಳ ಟ್ರೇಲರ್ ಬಿಡುಗಡೆ ಮಾಡಲಾಯಿತು. ಕನ್ನಡದ ಟ್ರೇಲರ್ ಬಿಡುಗಡೆ ಮಾಡಿದ್ದು ಹಿರಿಯ ನಟ ಅಂಬರೀಷ್.
ಟ್ರೇಲರ್ ಗಮನಿಸಿ ಹೇಳುವುದಾದರೆ, ಈ ಸಿನಿಮಾ ಕಥೆ 1958ರಿಂದ ಆರಂಭವಾಗುತ್ತದೆ. ಟ್ರೇಲರ್ನಲ್ಲಿರುವ ದೃಶ್ಯಗಳು ಕೂಡ ಸರಿದುಹೋಗಿರುವ ಕಾಲವೊಂದನ್ನು ನೆನಪಿಗೆ ತಂದುಕೊಡುತ್ತವೆ. ಆಕ್ರೋಶ, ಕಿಚ್ಚು, ಹಟ ಸಾಧಿಸುವ ಅಂಶಗಳು ಸಿನಿಮಾದಲ್ಲಿ ಇರಲಿವೆ ಎಂಬ ಸೂಚನೆಯನ್ನೂ ನೀಡುತ್ತವೆ.
'ಭಾವನೆಗಳಿಗೆ ಒಳಗಾಗಬೇಡ, ಇಲ್ಲಿ ಅದಕ್ಕೆ ಬೆಲೆ ಇಲ್ಲ' ಎನ್ನುವ ಮಾತು, 'ಬರೀ ಒಂದು ಬೊಗಸೆ ರಕ್ತ ನೋಡಿಯೇ ಇಷ್ಟೊಂದು ಹೆದರುತ್ತ ಇದ್ದೀಯಾ ಅಂದರೆ, ಇನ್ನು ರಕ್ತ ನದಿಯಾಗಿ ಹರಿಯುವ ಮೊದಲೇ ನೀನು ಇಲ್ಲಿಂದ ಹೊರಟುಬಿಡು...' ಎನ್ನುವ ಮಾತು ಸಿನಿಮಾ ಹೂರಣ ಏನಿರಬಹುದು ಎಂಬುದನ್ನು ಸೂಚ್ಯವಾಗಿ ಹೇಳುತ್ತವೆ.
ಟ್ರೇಲರ್ಅನ್ನು (www.youtube.com/watch?v=qXgF-iJ_ezE) ಯೂಟ್ಯೂಬ್ ಮೂಲಕ ಈಗಾಗಲೇ9.15 ಲಕ್ಷ ಬಾರಿ ವೀಕ್ಷಿಸಲಾಗಿದೆ!
ಕೆಜಿಎಫ್ನಬಜೆಟ್ ಎಷ್ಟು?
ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ತಯಾರಾಗಿರುವ, ಯಶ್ ಅಭಿನಯದ 'ಕೆಜಿಎಫ್' ಚಿತ್ರದ ಬಜೆಟ್ ಎಷ್ಟು ಎಂಬುದು ಸಿನಿಮಾ ವೀಕ್ಷಕರು ಕೌತುಕದಿಂದ ಕೇಳುತ್ತಿರುವ ಪ್ರಶ್ನೆ. ಆದರೆ, ಈ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಈ ಪ್ರಶ್ನೆಯನ್ನು ಜಾಣತನದಿಂದ ತಪ್ಪಿಸಿಕೊಂಡಿದ್ದಾರೆ!
ಕೆಜಿಎಫ್ ಚಿತ್ರದ ಟ್ರೇಲರ್ ಬಿಡುಗಡೆ ನಂತರ ವಿಜಯ್ ಅವರು ಸುದ್ದಿಗಾರರ ಜೊತೆ ಮಾತುಕತೆಗೆ ಸಿಕ್ಕಿದ್ದರು. 'ಈ ಚಿತ್ರಕ್ಕಾಗಿ ನೀವು ಹೂಡಿಕೆ ಮಾಡಿರುವ ಹಣ ಎಷ್ಟು' ಎಂದು ಪತ್ರಕರ್ತರು ಪ್ರಶ್ನಿಸಿದಾಗ ವಿಜಯ್ ಚೂಟಿ ಉತ್ತರ ನೀಡಿದರು.
'ಈ ಸಿನಿಮಾಕ್ಕಾಗಿ ನಾವೆಲ್ಲ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ಚಿತ್ರಕ್ಕಾಗಿ ಕೆಲಸ ಮಾಡಿರುವ ಪ್ರತಿ ವ್ಯಕ್ತಿಯ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹಾಗಾಗಿ, ಸಿನಿಮಾ ಬಜೆಟ್ ಎಷ್ಟು ಎಂಬುದನ್ನು ಕೇಳಬೇಡಿ' ಎಂದು ಉತ್ತರಿಸಿದರು ವಿಜಯ್. 'ಇಡೀ ತಂಡ ಮಾಡಿರುವ ಕೆಲಸದ ಮುಂದೆ ಬಜೆಟ್ ಏನೂ ಅಲ್ಲ' ಎಂಬ ಮಾತನ್ನೂ ಸೇರಿಸಿದರು.
'ನಟ ಯಶ್ ಅವರು ವಿಜಯ್ ನನ್ನ ಅಣ್ಣ ಎಂದು ಯಾವಾಗಲೂ ಹೇಳುತ್ತಿರುತ್ತಾರೆ. ಹಾಗಾಗಿ, ಅಣ್ಣನೊಬ್ಬ ತಮ್ಮನ ಸಿನಿಮಾಕ್ಕಾಗಿ ಹಣ ಹೂಡಿಕೆ ಮಾಡುವುದು ದೊಡ್ಡದೇನೂ ಅಲ್ಲ. ನಾನು ಸಂಬಂಧಗಳಿಗೆ ಗೌರವ ಕೊಡುತ್ತೇನೆಯೇ ವಿನಾ ಅವುಗಳ ಬೆಲೆ ನಿರ್ಧರಿಸಲು ಹೋಗುವುದಿಲ್ಲ' ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.