ADVERTISEMENT

‘ಖನನ’ಗೆ 50 ದಿನದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 4 ಜುಲೈ 2019, 19:30 IST
Last Updated 4 ಜುಲೈ 2019, 19:30 IST
ಕಾರ್ತಿಕ್‌ ಚಂದ್ರ, ಆರ್ಯವರ್ಧನ್‌ ಮತ್ತು ರಾಹುಲ್‌ ಈರಯ್ಯ
ಕಾರ್ತಿಕ್‌ ಚಂದ್ರ, ಆರ್ಯವರ್ಧನ್‌ ಮತ್ತು ರಾಹುಲ್‌ ಈರಯ್ಯ   

‘ಖನನ’ ಚಿತ್ರ 50 ದಿನಗಳನ್ನು ಪೂರೈಸಿದ್ದರಿಂದ ಚಿತ್ರತಂಡದಲ್ಲಿ ಉತ್ಸಾಹ ಇಮ್ಮಡಿಸಿತ್ತು. ಖುಷಿಯಿಂದಲೇ ತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು. ಪರದೆ ಮೇಲೆ ಚಿತ್ರದ ತುಣುಕುಗಳನ್ನು ತೋರಿಸಿ ಮಾತಿಗೆ ಇಳಿಯಿತು.

ಯುವ ನಟ ಆರ್ಯವರ್ಧನ್‌ ಈ ಚಿತ್ರದ ನಾಯಕ. ‘ಮೊದಲ ಚಿತ್ರದಲ್ಲಿಯೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದಕ್ಕೆ ಸಂತಸವಾಗಿದೆ’ ಎಂದರು. ಎರಡನೇ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿರುವುದನ್ನು ಹೇಳಲು ಅವರು ಮರೆಯಲಿಲ್ಲ. ಇನ್ನೂ ಹೆಸರಿಡದ ಆ ಚಿತ್ರವನ್ನು ನಿರ್ದೇಶಿಸುತ್ತಿರುವುದು ರಾಹುಲ್‌ ಈರಯ್ಯ. ಒಂದು ದಶಕದಿಂದ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕನಾಗಿ ದುಡಿದ ಅನುಭವ ರಾಹುಲ್‌ ಅವರಿಗಿದೆ. ಒಂದೂವರೆ ವರ್ಷದಿಂದ ಅವರು ಈ ಚಿತ್ರದ ಕಥೆ ಹೆಣೆಯುತ್ತಿದ್ದಾರಂತೆ.

‘ಚಿತ್ರದಲ್ಲಿ ಇಬ್ಬರು ನಾಯಕರಿದ್ದಾರೆ. ಅದರಲ್ಲಿ ಆರ್ಯವರ್ಧನ್‌ ಕೂಡ ಒಬ್ಬರು. ಇದು ಮರ್ಡರ್‌ ಮಿಸ್ಟರಿ ಚಿತ್ರ. ಶೀಘ್ರವೇ, ಶೀರ್ಷಿಕೆ ಅಂತಿಮಗೊಳಿಸಲಾಗುವುದು’ ಎಂದು ವಿವರಿಸಿದರು ರಾಹುಲ್‌.‌‌

ADVERTISEMENT

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್. ಜೈರಾಜ್‌, ‘ಹೊಸಬರು ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಆದರೆ, ಪೂರ್ವ ತಯಾರಿ ಮಾಡಿಕೊಂಡು ಬರುತ್ತಿಲ್ಲ. ಇದರಿಂದ ನಿರ್ಮಾಪಕರು ನಷ್ಟ ಅನುಭವಿಸುವಂತಾಗಿದೆ’ ಎಂದು ವಿಷಾದಿಸಿದರು.

‘ಚಿತ್ರ ನಿರ್ಮಾಣಕ್ಕೂ ಮೊದಲು ಹಳೆಯ ನಿರ್ದೇಶಕರು ಮತ್ತು ನಿರ್ಮಾಪಕರೊಟ್ಟಿಗೆ ಚರ್ಚಿಸುವುದು ಒಳಿತು. ಪೋಸ್ಟರ್‌ಗಳಿಗೆ ನಿರ್ಬಂಧ ವಿಧಿಸಲಾಗಿದೆ. ಇದರಿಂದ ಸಿನಿಮಾ ಪ್ರಚಾರಕ್ಕೆ ತೊಡಕಾಗಿದೆ. ಈ ಕುರಿತು ಬಿಬಿಎಂಪಿ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸುತ್ತೇನೆ’ ಎಂದು ಭರವಸೆ ನೀಡಿದರು. ಖನನ ಚಿತ್ರದ ನಿರ್ಮಾಪಕ ಬಿ. ಶ್ರೀನಿವಾಸ್‌ ರಾವ್ ಮತ್ತು ನಿರ್ದೇಶಕ ರಾಧಾ ಖುಷಿ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.