ಕೆ. ಬಾಲಚಂದರ್ ನಿರ್ದೇಶಿಸಿದ ತಮಿಳು ಚಿತ್ರ ‘ಪುನ್ನಗೈ ಮನ್ನನ್’ ಯಾರಿಗೆ ಗೊತ್ತಿಲ್ಲ ಹೇಳಿ. 1986ರಲ್ಲಿ ತೆರೆಕಂಡ ಇದರಲ್ಲಿ ಕಮಲಹಾಸನ್ ಮತ್ತು ರೇಖಾ ನಟಿಸಿದ್ದರು. ಈ ಚಿತ್ರದಲ್ಲೊಂದು ದೃಶ್ಯವಿದೆ. ಸಮಾಜದ ನಿಂದನೆಗೆ ತುತ್ತಾಗುವ ಪ್ರೇಮಿಗಳು ಬೇರ್ಪಡುವ ದೃಶ್ಯವದು. ಬೇರ್ಪಡುವುದಕ್ಕೂ ಮೊದಲು ಇಬ್ಬರೂ ಪರಸ್ಪರ ತುಟಿ ಚುಂಬಿಸಿಕೊಂಡು ಜಲಪಾತಕ್ಕೆ ಹಾರುತ್ತಾರೆ!
ಮೂವತ್ತ ನಾಲ್ಕು ವರ್ಷದ ಬಳಿಕ ಈ ಚಿತ್ರದಲ್ಲಿನ ‘ತುಟಿ ಚುಂಬನ’ ದೃಶ್ಯದ ಹಿಂದಿನ ರಹಸ್ಯ ಬಹಿರಂಗಗೊಂಡಿದೆ. ‘ಈ ಚುಂಬನಕ್ಕೆ ನನ್ನ ಒಪ್ಪಿಗೆಯೇ ಇರಲಿಲ್ಲ’ ಎಂದು ನಾಯಕಿ ರೇಖಾ ಅವರ ಬಹಿರಂಗ ಹೇಳಿಕೆಯೂ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಗೆ ಮುನ್ನುಡಿ ಬರೆದಿದೆ. ಮತ್ತೊಂದೆಡೆ ನೆಟ್ಟಿಗರು ರೇಖಾ ಅವರ ಬಳಿ ಕಮಲಹಾಸನ್ ಕ್ಷಮೆಯಾಚಿಸಬೇಕು ಎಂದು ಆಗ್ರಹ ಮೊಳಗಿಸಿದ್ದಾರೆ.
‘ಆ ಚಿತ್ರಕ್ಕೆ ಸುರೇಶ್ ಕೃಷ್ಣ ಮತ್ತು ವಸಂತ ಸಹ ನಿರ್ದೇಶಕರಾಗಿದ್ದರು. ಕಮಲಹಾಸನ್ ನನ್ನ ತುಟಿಗಳನ್ನು ಚುಂಬಿಸುವ ಬಗ್ಗೆ ನನಗೆ ಎಳ್ಳಷ್ಟೂ ಗೊತ್ತಿರಲಿಲ್ಲ. ಸ್ಕ್ರಿಪ್ಟ್ನಲ್ಲಿಯೂ ಆ ಬಗ್ಗೆ ಮಾಹಿತಿ ಇರಲಿಲ್ಲ. ಕಮಲಹಾಸನ್ ಏಕಾಏಕಿ ನನ್ನ ತುಟಿ ಚುಂಬಿಸಿದರು. ಬಳಿಕ ನಾನು ಸಹ ನಿರ್ದೇಶಕರ ಬಳಿ ಇದರ ಬಗ್ಗೆ ಕೇಳಿದೆ. ರಾಜನೊಬ್ಬ ಸಣ್ಣಮಗುವಿನಂತೆ ಮುತ್ತಿಟ್ಟಿದ್ದಾನೆ ಎಂದು ಅಂದುಕೊಳ್ಳಿ ಎಂದು ಉತ್ತರಿಸಿದರು. ಜನರು ಈ ದೃಶ್ಯದ ಬಗ್ಗೆ ನನಗೆ ಹಲವಾರು ಬಾರಿ ಪ್ರಶ್ನೆ ಕೇಳಿದ್ದಾರೆ. ಅವರ ಪ್ರಶ್ನೆಗೆ ಉತ್ತರಿಸಲು ಆಗುತ್ತಿರಲಿಲ್ಲ. ಆಗ ನನಗೂ ಬೇಸರವಾಗುತ್ತಿತ್ತು’ ಎಂದು ಹೇಳಿದ್ದಾರೆ ರೇಖಾ.
ಮತ್ತೊಂದೆಡೆ ಒಪ್ಪಿಗೆ ಇಲ್ಲದೆ ಕಮಲಹಾಸನ್ ನೀಡಿದ ಆ ‘ಮುತ್ತು’ ಚಿತ್ರದ ಆ ದೃಶ್ಯಕ್ಕೆ ಅನಿವಾರ್ಯವಾಗಿತ್ತು ಎಂದು ರೇಖಾ ಕೂಡ ನಂಬಿದ್ದರಂತೆ. ಕಮಲಹಾಸನ್ ಅವರು ರೇಖಾ ಅವರ ತುಟಿಗಳನ್ನು ಚುಂಬಿಸುತ್ತಿರುವ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.