ADVERTISEMENT

‘ಮಹಾಲಯ’ ಚಿತ್ರಕ್ಕೆ ಶ್ರೀಮುರಳಿ ಕ್ಲ್ಯಾಪ್‌

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 0:54 IST
Last Updated 14 ಅಕ್ಟೋಬರ್ 2025, 0:54 IST
‘ಮಹಾಲಯ’ ಚಿತ್ರಕ್ಕೆ ಕ್ಲ್ಯಾಪ್‌ ಮಾಡಿದ ನಟ ಶ್ರೀಮುರಳಿ 
‘ಮಹಾಲಯ’ ಚಿತ್ರಕ್ಕೆ ಕ್ಲ್ಯಾಪ್‌ ಮಾಡಿದ ನಟ ಶ್ರೀಮುರಳಿ    

ಮೋಹನ್‌ ಮಾಯಣ್ಣ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ‘ಮಹಾಲಯ’ ಸಿನಿಮಾದ ಚಿತ್ರೀಕರಣಕ್ಕೆ ನಟ ಶ್ರೀಮುರಳಿ ಕ್ಲ್ಯಾಪ್‌ ಮಾಡುವ ಮೂಲಕ ಇತ್ತೀಚೆಗೆ ಚಾಲನೆ ನೀಡಿದರು. 

ಪರ್ಪಲ್ ರಾಕ್ ಸ್ಟುಡಿಯೋಸ್ ಮೂಲಕ ಯತೀಶ್ ವೆಂಕಟೇಶ್ ಹಾಗೂ ಗಣೇಶ್ ಪಾಪಣ್ಣ ಸೇರಿ ಈ ಸಿನಿಮಾ ನಿರ್ಮಿಸುತ್ತಿದ್ದು, ಶ್ರೀಮುರಳಿ ನಟನೆಯ ‘ಬಘೀರ’ ಸಿನಿಮಾದ ನಿರ್ದೇಶಕ ಡಾ.ಸೂರಿ ಕ್ರಿಯೇಟಿವ್ ಹೆಡ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಸಿನಿಮಾ ಕುರಿತು ಮಾತನಾಡಿದ ಮೋಹನ್‌ ಮಾಯಣ್ಣ, ‘ನಾನು ಎ.ಹರ್ಷ ಅವರ ಜೊತೆಗೆ ‘ಸೀತಾರಾಮ ಕಲ್ಯಾಣ’, ‘ಭಜರಂಗಿ–2’ ಚಿತ್ರಗಳಲ್ಲಿ ಕೆಲಸ ಮಾಡಿದ್ದೆ. ನಾಲ್ಕೈದು ಕಿರುಚಿತ್ರಗಳನ್ನು‌ ನಿರ್ದೇಶಿಸಿದ್ದೇನೆ. ಅದನ್ನು ನೋಡಿ ನಿರ್ಮಾಪಕರು ಇಂಥ ದೊಡ್ಡ ಅವಕಾಶ ನೀಡಿದ್ದಾರೆ. 1990ರ ಸಮಯದಲ್ಲಿ ನಡೆಯುವ ಕಥೆ ಇದಾಗಿದೆ’ ಎಂದರು. 

ADVERTISEMENT

‘ಇದು ನಮ್ಮ ಪರ್ಪಲ್ ರಾಕ್ ಸಂಸ್ಥೆಯ ಐದನೇ ಚಿತ್ರ. ಎಲ್ಲಾ ವರ್ಗದ ಪ್ರೇಕ್ಷಕರಿಗೂ ಅರ್ಥವಾಗುವಂಥ ವಿಭಿನ್ನ ಕಾಂಟೆಂಟ್ ಈ ಚಿತ್ರದಲ್ಲಿದೆ. ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಸುವ ಯೋಜನೆಯಿದೆ. ರಷ್ಯಾದ ಅರ್ಮೇನಿಯಾದಲ್ಲಿ ಸುಮಾರು 10 ದಿನಗಳ‌ ಕಾಲ ಚಿತ್ರೀಕರಣ, ನಂತರ ಬೆಂಗಳೂರು, ಆನಂತರ ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಚಿತ್ರೀಕರಣ ಸೇರಿ 40 ರಿಂದ 50 ದಿನಗಳ ಕಾಲ ಚಿತ್ರೀಕರಣ ನಡೆಸಲಿದ್ದೇವೆ. ಈ ಚಿತ್ರಕ್ಕೆ ಕಥೆಯೇ ನಾಯಕ. 20ಕ್ಕೂ ಹೆಚ್ಚು ಪ್ರಮುಖಪಾತ್ರಗಳಿದ್ದು, ಆ ಪಾತ್ರಗಳಲ್ಲಿ ಜನಪ್ರಿಯ ಕಲಾವಿದರು ಅಭಿನಯಿಸಲಿದ್ದಾರೆ. ಆಡಿಷನ್ ಮೂಲಕವೂ ಕಲಾವಿದರ ಆಯ್ಕೆ ನಡೆಯಲಿದೆ’ ಎನ್ನುತ್ತಾರೆ ಗಣೇಶ್ ಪಾಪಣ್ಣ. 

‘ನಮ್ಮ ಚಿತ್ರಕ್ಕಾಗಿ ಅರ್ಮೇನಿಯಾದಿಂದ ಕಲಾವಿದರನ್ನು ಕರೆತರುತ್ತಿದ್ದೇವೆ. ಮೂರು ಭಾಗಗಳಲ್ಲಿ ಸಿನಿಮಾದ ಕಥೆ ಸಾಗುತ್ತದೆ. ಅದರ ಒಂದು ಭಾಗದಲ್ಲಿ ಈ ಕಲಾವಿದರು ಇರುತ್ತಾರೆ’ ಎಂದರು ಯತೀಶ್‌ ವೆಂಕಟೇಶ್‌. ಪವನ್ ಸಾಯಿಕುಮಾರ್ ಛಾಯಾಚಿತ್ರಗ್ರಹಣ, ಭುವನ್ ಚಂದ್ ಸಂಗೀತ ನಿರ್ದೇಶನ, ರವಿ ಸಂತೆಹಕ್ಲು ಕಲಾ ನಿರ್ದೇಶನ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.