ಹೈದರಾಬಾದ್: ಹೈದರಾಬಾದ್: ಕೆಲವು ಸ್ಥಳೀಯ ರಿಯಲ್ ಎಸ್ಟೇಟ್ ಕಂಪನಿಗಳು ಎಸಗಿದ ವಂಚನೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಇದೇ 28ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ತೆಲುಗು ನಟ ಮಹೇಶ್ ಬಾಬು ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ನೋಟಿಸ್ ನೀಡಿದೆ.
ಸಾಯಿ ಸೂರ್ಯ ಡೆವಲಪರ್ಸ್, ಸುರಾನಾ ಗ್ರೂಪ್ ಸೇರಿದಂತೆ ಇತರರಿಗೆ ಸಂಬಂಧಪಟ್ಟ ಪ್ರಕರಣ ಇದಾಗಿದೆ. ಈ ಸಂಬಂಧ ಇ.ಡಿ ಅಧಿಕಾರಿಗಳು, ಏಪ್ರಿಲ್ 16ರಂದು ಸಿಕಂದರಾಬಾದ್, ಜುಬಿಲಿ ಹಿಲ್ಸ್ ಮತ್ತು ಬೋವನಪಲ್ಲಿ ಸೇರಿದಂತೆ ಇತರ ಕಡೆಗಳಲ್ಲಿ ಶೋಧ ನಡೆಸಿತ್ತು.
ವಂಚನೆ ಆರೋಪ ಎದುರಿಸುತ್ತಿರುವ ಕಂಪನಿಗಳ ಪೂರ್ವಾಪರ ತಿಳಿಯದೆ ನಟ ಮಹೇಶ್ಬಾಬು ಅವರು ಈ ಕಂಪನಿಗಳ ರಿಯಲ್ ಎಸ್ಟೇಟ್ ಯೋಜನೆಗಳನ್ನು ಬೆಂಬಲಿಸಿರಬಹುದು. ಹೀಗಾಗಿ, ಅವರು ಈ ಹಗರಣದಲ್ಲಿ ಭಾಗಿಯಾಗದೆ ಇರಬಹುದಾದ ಕಾರಣ ಪ್ರಸ್ತುತ ಈ ಪ್ರಕರಣದ ತನಿಖೆಯಲ್ಲಿ ಅವರನ್ನು ಆರೋಪಿ ಎಂದು ಪರಿಗಣಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.
‘ಆರೋಪ ಎದುರಿಸುತ್ತಿರುವ ಕಂಪನಿಗಳಿಂದ ನಟ ಮಹೇಶ್ ಬಾಬು ಅವರು ನಗದು ಮತ್ತು ಚೆಕ್ ಮೂಲಕ ₹5.9 ಕೋಟಿ ಪಡೆದಿದ್ದಾರೆ. ಈ ವ್ಯವಹಾರದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಇ.ಡಿ ಮುಂದಾಗಿದೆ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.