ತೆಲುಗಿನ ‘ಪ್ರಿನ್ಸ್’ ಖ್ಯಾತಿಯ ನಟ ಮಹೇಶ್ ಬಾಬು ತಮ್ಮ ಹುಟ್ಟುಹಬ್ಬದಂದು ಸಸಿ ನೆಡುವ ಮೂಲಕ ಜನ್ಮದಿನ ಆಚರಣೆಗೆ ಇದಕ್ಕಿಂತ ಮಹತ್ವದ ಮಾರ್ಗ ಬೇರೊಂದಿಲ್ಲ ಎಂದು ಬಣ್ಣಿಸಿದ್ದಾರೆ.
ತಮ್ಮ ಮನೆಯ ಗಾರ್ಡನ್ನಲ್ಲಿ ಗಿಡ ನೆಟ್ಟಿರುವ ವಿಡಿಯೊ ಅನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಮಹೇಶ್ ಬಾಬು, ಗ್ರೀನ್ ಇಂಡಿಯಾ ಚಾಲೆಂಜ್ ಅಭಿಯಾನವನ್ನು ಬೆಂಬಲಿಸಿದ್ದಾರೆ. ಈ ಚಾಲೆಂಜ್ ಅನ್ನು ಜೂನಿಯರ್ ಎನ್ಟಿಆರ್, ವಿಜಯ್ ಮತ್ತು ಶ್ರುತಿ ಹಾಸನ್ ಅವರಿಗೆ ದಾಟಿಸಿದ್ದಾರೆ.
ಆಂಧ್ರದ ರಾಜ್ಯಸಭಾ ಸದಸ್ಯ ಜೋಗಿನಿಪಲ್ಲಿ ಸಂತೋಷ್ ಕುಮಾರ್ ಆರಂಭಿಸಿದ ‘ಗ್ರೀನ್ ಇಂಡಿಯಾ ಚಾಲೆಂಜ್’ ಯಶಸ್ಸಿನತ್ತ ಸಾಗಿದೆ. ಗ್ರೀನ್ ಇಂಡಿಯಾ ಚಾಲೆಂಜ್ ಭಾಗವಾಗಿ ಸೆಲೆಬ್ರಿಟಿಗಳು ಗಿಡಗಳನ್ನ ನಡುವ ಮೂಲಕ ಮತ್ತೆ ಮೂವರಿಗೆ ಗಿಡಗಳನ್ನ ನೆಡುವಂತೆ ಪ್ರೇರೇಪಿಸಿ ಅಭಿಯಾನದ ದೀವಟಿಗೆ ದಾಟಿಸುತ್ತಿದ್ದಾರೆ.
ಭಾನುವಾರವಷ್ಟೇ ನಟಮಹೇಶ್ ಬಾಬು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಕೊರೊನಾ ಸೋಂಕು ಹರಡದಂತೆ ಒಬ್ಬರಿಗೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಂಡು, ಸುರಕ್ಷಿತವಾಗಿರಿ ಎಂದು ಹುಟ್ಟುಹಬ್ಬದ ವೇಳೆ ತಮ್ಮ ಅಭಿಮಾನಿಗಳಲ್ಲಿ ವಿನಂತಿ ಕೂಡ ಮಾಡಿಕೊಂಡಿದ್ದರು.
ಸವಾಲು ಪೂರೈಸಿದ ಆಶಿಕಾ ರಂಗನಾಥ್:
ಇನ್ನು‘ಗ್ರೀನ್ ಇಂಡಿಯಾ ಚಾಲೆಂಜ್’ಗೆ ಕೈಜೋಡಿಸಿದ ಮತ್ತೊಬ್ಬ ಕನ್ನಡದ ನಟಿ ಆಶಿಕಾ ರಂಗನಾಥ್ ಆ.5ರಂದು ತಮ್ಮ ಹುಟ್ಟುಹಬ್ಬದ ನಿಮಿತ್ತ ಮನೆಯ ಮುಂದೆ ಗಿಡ ನೆಟ್ಟು ಪರಿಸರ ಕಾಳಜಿ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
‘ಗ್ರೀನ್ ಇಂಡಿಯಾ ಚಾಲೆಂಜ್’ಭಾಗವಾಗಿ ತೆಲುಗು ನಟಿ ಸಮಂತಾ ಅಕ್ಕಿನೇನಿ ಅವರು ಗಿಡ ನೆಡುವಸವಾಲನ್ನು ಕನ್ನಡದ ನಟಿ ರಶ್ಮಿಕಾ ಮಂದಣ್ಣಗೆ ದಾಟಿಸಿದ್ದರು. ಗಿಡವೊಂದನ್ನು ನೆಟ್ಟು ನೀರೆರೆದು, ಆ ಸವಾಲನ್ನು ನಟಿಯರಾದ ರಾಶಿ ಖನ್ನಾ, ಕಲ್ಯಾಣಿ ಪ್ರಿಯದರ್ಶನ್ ಮತ್ತು ಆಶಿಕಾ ರಂಗನಾಥ್ ಅವರಿಗೆ ದಾಟಿಸಿದ್ದರು. ರಶ್ಮಿಕಾ ಸವಾಲು ಪೂರೈಸಿರುವ ಆಶಿಕಾ ರಂಗನಾಥ್ ರಶ್ಮಿಕಾ ಮಂದಣ್ಣಗೆ ಧನ್ಯವಾದ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.