‘ಗೂಳಿಹಟ್ಟಿ’ ಖ್ಯಾತಿಯ ಮಹೇಶ್ ಸಿದ್ದು ನಾಯಕನಾಗಿ ನಟಿಸುತ್ತಿರುವ ‘ಭೈರಾ’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ನಟ ಪ್ರೇಮ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಅಕುಲ್.ಎನ್ ಸಿನಿಮಾಕ್ಕೆ ಕಥೆ ಬರೆದು, ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. 200ಕ್ಕೂ ಹೆಚ್ಚು ಚಿತ್ರಗಳಿಗೆ ನೃತ್ಯ ಸಂಯೋಜಕರಾಗಿ ಕೆಲಸ ಮಾಡಿರುವ ಇವರ ನಿರ್ದೇಶನದ ನಾಲ್ಕನೇ ಚಿತ್ರವಿದು.
‘ಬೆಂಗಲೂರಿನ ಸ್ಥಳೀಯ ರೌಡಿಗಳ ಚಟುವಟಿಕೆಗಳ ಕುರಿತಾದ ಕಥೆ ಹೊಂದಿರುವ ಚಿತ್ರವಿದು. ರೌಡಿಗಳ ಕೆಂಗಣ್ಣಿಗೆ ಬಿದ್ದ ಅಮಾಯಕ ಹುಡುಗ ಯಾವ ರೀತಿ ಸಿಡಿದೇಳುತ್ತಾನೆ ಎನ್ನುವುದರ ಸುತ್ತ ಕಥೆ ಸಾಗುತ್ತದೆ. ಜತೆಗೆ ಸುಂದರ ಪ್ರೇಮಕಥೆ, ಅಮ್ಮನ ಬಾಂಧವ್ಯದ ಮನಕಲುಕುವ ಸನ್ನಿವೇಶಗಳಿವೆ. ಬೆಂಗಳೂರು ಸುತ್ತಮುತ್ತ, ಅದರಲ್ಲೂ ಹೆಚ್ಚಾಗಿ ಕಲಾಸಿಪಾಳ್ಯ, ಓಕಳಿಪುರ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗುವುದು’ ಎಂದರು ನಿರ್ದೇಶಕರು.
ಖುಷಿ ಕನಸು ಕ್ರಿಯೇಶನ್ಸ್ ಅಡಿಯಲ್ಲಿ ಅಮಿತ್ ಪೂಜಾರಿ ಬಂಡವಾಳ ಹೂಡುತ್ತಿದ್ದಾರೆ. ಶ್ವೇತಾ ಸುರೇಂದ್ರ ನಾಯಕಿ. ಜಾಕ್ ಜಾಲಿಜಾಲಿ, ಯಶ್ ಶೆಟ್ಟಿ, ರವಿಕಾಳೆ, ವರ್ಧನ್, ಸಂಪತ್ಕುಮಾರ್, ಕಾಕ್ರೋಚ್ ಸುಧಿ ಮುಂತಾದವರು ಚಿತ್ರದಲ್ಲಿದ್ದಾರೆ.
ಭರ್ಜರಿ ಚೇತನ್, ಅನಿರುದ್ದ್ ಶಾಸ್ತ್ರೀ, ನಾಗಾರ್ಜುನ ಶರ್ಮ ಸಾಹಿತ್ಯದ ಗೀತೆಗಳಿಗೆ ಮಂಜು ಮಹದೇವ್ ಸಂಗೀತ ಸಂಯೋಜಿಸಿದ್ದಾರೆ. ಎಸ್.ಹಾಲೇಶ್ ಛಾಯಾಚಿತ್ರಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.