ಮುಂದಿನ ಭಾನುವಾರ ಎಂದರೆ ಡಿ.29ಕ್ಕೆ ಯೋಗರಾಜ್ ಭಟ್ ನಿರ್ದೇಶನದ ‘ಮುಂಗಾರು ಮಳೆ’ ಸಿನಿಮಾ ಬಿಡುಗಡೆಯಾಗಿ 18 ವರ್ಷವಾಗಲಿದೆ. ಅದೇ ದಿನದಂದು ಯೋಗರಾಜ್ ಭಟ್ ಅವರ ನಿರ್ದೇಶನದ ಹೊಸ ಚಿತ್ರ ‘ಮನದ ಕಡಲು’ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಲಿದೆ.
‘ಮುಂಗಾರು ಮಳೆ’ ಚಿತ್ರವನ್ನು ನಿರ್ಮಾಣ ಮಾಡಿದ್ದ ಇ.ಕೃಷ್ಣಪ್ಪ ಅವರೇ ‘ಮನದ ಕಡಲು’ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಇದು ಯೋಗರಾಜ್ ಭಟ್ ಅವರ ಹದಿನಾರನೇ ಸಿನಿಮಾ. ಚಿತ್ರದ ಮೊದಲ ಹಾಡು ‘ಹೂ ದುಂಬಿ’ಗೆ ಯೋಗರಾಜ್ ಭಟ್ ಸಾಹಿತ್ಯವಿದ್ದು, ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಸಂಜಿತ್ ಹೆಗಡೆ ಧ್ವನಿಯಾಗಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ಸುಮುಖ ನಟಿಸಿದ್ದು, ನಾಯಕಿಯರಾಗಿ ರಾಶಿಕಾ ಶೆಟ್ಟಿ ಹಾಗೂ ಅಂಜಲಿ ಅನೀಶ್ ಬಣ್ಣಹಚ್ಚಿದ್ದಾರೆ. ದತ್ತಣ್ಣ, ರಂಗಾಯಣ ರಘು, ಶಿವಧ್ವಜ್ ತಾರಾಬಳಗದಲ್ಲಿದ್ದಾರೆ.
‘ಮನದ ಕಡಲು’ ಚಿತ್ರದ ಆರಂಭ, ಮಧ್ಯಂತರ ಹಾಗೂ ಅಂತ್ಯ ಕಡಲಿನ ಮೇಲೆ ಇದೆ. ಆದಿವಾಸಿಗಳ ನಾಯಕನಾಗಿ ರಂಗಾಯಣ ರಘು ನಟಿಸಿದ್ದಾರೆ. ಕರ್ನಾಟಕ, ಮಹಾರಾಷ್ಟ್ರದ ಹದಿಮೂರು ಜಿಲ್ಲೆಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಮೊದಲ ಬಾರಿ ಮಹಾರಾಷ್ಟ್ರದ ಮುರುಡ್ ಜಂಜೀರ ಎಂಬ ಸಮುದ್ರದ ಮಧ್ಯದ ಕೋಟೆಯಲ್ಲಿ ಶೂಟಿಂಗ್ ನಡೆಸಲಾಗಿದೆ. ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಛಾಯಾಚಿತ್ರಗ್ರಹಣವಿದೆ. ಜಯಂತ ಕಾಯ್ಕಿಣಿ ಎರಡು ಹಾಡುಗಳನ್ನು ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.