‘ಘೂಸಖೋರ್ ಪಂಡಿತ್’
ನವದೆಹಲಿ: ‘ನೀರಜ್ ಪಾಂಡೆ ಅವರ ನಿರ್ದೇಶನದ, ನಟ ಮನೋಜ್ ಬಾಜಪೇಯಿ ನಟನೆಯ ವಿವಾದಿತ ‘ಘೂಸಖೋರ್ ಪಂಡಿತ್’ (ಘೂಸಖೋರ್ ಪಂಡತ್) ಸಿನಿಮಾದ ಹೆಸರು ಬದಲಾವಣೆಗೆ ನಿರ್ಮಾಪಕರು ಸಮ್ಮತಿಸಿದ್ದು ಈ ಕುರಿತ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಿಲೇವಾರಿಗೊಳಿಸಿದೆ.
ವಿವಾದಿತ ಹೆಸರಿನ ಸಿನಿಮಾ ಬಿಡುಗಡೆ ತಡೆಹಿಡಿಯುವಂತೆ ‘ಭಾರತೀಯ ಬ್ರಾಹ್ಮಣ ಸಮಾಜ’ದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಅತುಲ್ ಮಿಶ್ರಾ ಅರ್ಜಿ ಸಲ್ಲಿಸಿದ್ದರು.
ಸಿನಿಮಾದ ಹೆಸರು ಬದಲಾವಣೆಗೆ ನಿರ್ಮಾಪಕರು ಸಮ್ಮತಿಸಿದ್ದರಿಂದ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಅರ್ಜಿಯನ್ನು ವಿಲೇವಾರಿ ಮಾಡಿತು.
ಸಿನಿಮಾಗೆ ಬೇರೆ ಹೆಸರು ಇಡಬೇಕು ಎಂದು ಪೀಠ ತಾಕೀತು ಮಾಡಿ, ‘ಯಾವ ಹೆಸರು ಇಡಲಿದ್ದೀರಿ ಎನ್ನುವ ಬಗ್ಗೆ ಪ್ರಮಾಣಪತ್ರ ಸಲ್ಲಿಸಿ. ಶೀರ್ಷಿಕೆ ಬದಲಾವಣೆ ಬಗ್ಗೆ ನಮಗೆ ಮಾಹಿತಿ ನೀಡುವವರೆಗೂ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ’ ಎಂದು ಈ ಹಿಂದೆ ಎಚ್ಚರಿಸಿತ್ತು.
ಹೆಸರು ಬದಲಾವಣೆಗೆ ನಾವು ನಿರ್ಧರಿಸಿದ್ದು, ಆದರೆ, ಇನ್ನೂ ಹೊಸ ಹೆಸರನ್ನು ಅಂತಿಮಗೊಳಿಸಿಲ್ಲ. ಯಾವುದೇ ಸಂಘರ್ಷ ಉದ್ಭವಿಸದಂತೆ ಹೆಸರು ಇಡಲಾಗುವುದು ಎಂದು ನಿರ್ದೇಶಕ ನೀರಜ್ ಪಾಂಡೆ ಸುಪ್ರೀಂಕೋರ್ಟ್ಗೆ ತಿಳಿಸಿದ್ದಾರೆ.
ಸಿನಿಮಾಗೆ ಇಂಥ ಹೆಸರಿಟ್ಟು ಸಮಾಜದ ಒಂದು ವರ್ಗದ ಜನರನ್ನು ಅವಹೇಳನ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್ ಗುರುವಾರ ಆಕ್ರೋಶ ವ್ಯಕ್ತಪಡಿಸಿದೆ.
‘ಘೂಸಖೋರ್ ಪಂಡಿತ್’ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಗೆ ಸಿದ್ದವಾಗಿದೆ. ಪಂಡಿತ್ ಸಮುದಾಯಕ್ಕೆ ಅವಹೇಳನ ಮಾಡುವ ರೀತಿಯಲ್ಲಿ ಟೈಟಲ್ ನೀಡಲಾಗಿತ್ತು ಎಂದು ಆರೋಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.