ತಮಿಳಿನ ‘ಕೊಲಮಾವು ಕೋಕಿಲ’, ‘ಕೈದಿ’ ಹಾಗೂ ‘ಬಿಗಿಲ್’ನಂತಹ ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಅರುಣ್ ಅಲೆಕ್ಸಾಂಡರ್ ನಿನ್ನೆ ಹೃದಯಾಘಾತದಿಂದ ಮರಣ ಹೊಂದಿದ್ದಾರೆ. ಅವರಿಗೆ 48 ವರ್ಷ ವಯಸ್ಸಾಗಿತ್ತು. ಅವರ ಸಾವು ಇಡೀ ತಮಿಳು ಚಿತ್ರರಂಗಕ್ಕೆ ಶಾಕ್ ನೀಡಿದೆ. ಕಾಲಿವುಡ್ನ ಖ್ಯಾತ ನಟ–ನಟಿಯರು ಸಂತಾಪ ಸೂಚಿಸಿದ್ದಾರೆ. ಅವರು ವಿಜಯ್ ನಟನೆಯ ಇನ್ನಷ್ಟೇ ಬಿಡುಗಡೆಯಾಗಲಿರುವ ‘ಮಾಸ್ಟರ್’ ಚಿತ್ರದಲ್ಲೂ ಮುಖ್ಯ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ.
ಕಂಠದಾನ ಕಲಾವಿದರೂ ಆಗಿರುವ ಅರುಣ್ ಅನೇಕ ಹಾಲಿವುಡ್ನ ತಮಿಳು ಅವತರಣಿಕೆಯ ಸಿನಿಮಾಗಳಿಗೆ ದನಿ ನೀಡಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದ ಕೈದಿಯಲ್ಲಿ ಖಳನಾಯಕ ಪಾತ್ರ ಮಾಡಿದ್ದರು. ಬಿಗಿಲ್ನಲ್ಲಿ ಮಿನಿಸ್ಟರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.
ನಿರ್ದೇಶಕ ಲೋಕೇಶ್ ಕನಕರಾಜ್, ರತ್ನ ಕುಮಾರ್, ಕವಿನ್ ಸೇರಿದಂತೆ ಕಾಲಿವುಡ್ನ ಖ್ಯಾತನಾಮರು ಈ ನಟ ಸಾವಿಗೆ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ.
‘ಅರುಣ್ ಸಾವಿನ ಸುದ್ದಿ ಕೇಳಿ ಕಣ್ಣೀರು ತಡೆಯಲು ಸಾಧ್ಯವಾಗುತ್ತಿಲ್ಲ’ ಎಂದು ಬರೆದುಕೊಂಡಿದ್ದಾರೆ ಲೋಕೇಶ್. ರತ್ನ ಕುಮಾರ್ ಹಾಗೂ ಕವಿನ್ ‘ಜೀವನ ನಿಜಕ್ಕೂ ಕೆಟ್ಟದ್ದು’ ಎಂದು ಬರೆದುಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.