ADVERTISEMENT

ರಾಣಾ ಚಿತ್ರದ ಮುಹೂರ್ತದಲ್ಲಿ ಉಪೇಂದ್ರ ಆ್ಯಕ್ಷನ್‌ ಕಟ್‌

ಶ್ರೇಯಸ್ ಮಂಜು- ನಂದಕಿಶೋರ್ ಸಂಯೋಜನೆಯ ಚಿತ್ರ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 13:40 IST
Last Updated 7 ಜುಲೈ 2021, 13:40 IST
ಶ್ರೇಯಸ್‌ ಕೆ.ಮಂಜು ಜತೆ ರೀಷ್ಮಾ ನಾಣಯ್ಯ ಮತ್ತು ರಜನಿ ಭಾರದ್ವಾಜ್
ಶ್ರೇಯಸ್‌ ಕೆ.ಮಂಜು ಜತೆ ರೀಷ್ಮಾ ನಾಣಯ್ಯ ಮತ್ತು ರಜನಿ ಭಾರದ್ವಾಜ್   

ಗುಜ್ಜಲ್ ಪುರುಷೋತ್ತಮ್ ನಿರ್ಮಾಣ ಮಾಡುತ್ತಿರುವ ಶ್ರೇಯಸ್ ಮಂಜು ನಾಯಕನಾಗಿ ನಟಿಸಲಿರುವ ನೂತನ ಸಿನಿಮಾ ರಾಣಾ ಸೆಟ್ಟೇರಿದೆ. ಇತ್ತೀಚೆಗಷ್ಟೇ ಶೀರ್ಷಿಕೆ ಅನಾವರಣ ಮಾಡಿಕೊಂಡಿದ್ದ ಸಿನಿಮಾ, ಇದೀಗಗವಿಪುರಂನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಸರಳವಾಗಿ ಮುಹೂರ್ತ ಮುಗಿಸಿಕೊಂಡಿದೆ. ರಿಯಲ್ ಸ್ಟಾರ್ ಉಪೇಂದ್ರ ಅವರು ಮೊದಲ ದೃಶ್ಯಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಗುಜ್ಜಲ್ ಅವರ ತಾಯಿ ಕ್ಲಾಪ್ ಮಾಡಿ ತಂಡಕ್ಕೆ ಶುಭಕೋರಿದರು.

ಚಿತ್ರದ ನಿರ್ದೇಶಕ ನಂದಕಿಶೋರ್‌. ಗುಜ್ಜಲ್‌ ನಿರ್ಮಾಣಕ್ಕೆ ನಂದಕಿಶೋರ್‌ ಕೈ ಜೋಡಿಸುತ್ತಿರುವುದು ಇದೇ ಮೊದಲು. ಮಾಸ್‌ ಆ್ಯಕ್ಷನ್‌ ಸಿನಿಮಾ ಇದು ಎಂದರು ನಂದಕಿಶೋರ್‌.

ನಟ ಶ್ರೇಯಸ್ ಮಾತನಾಡಿ, ‘ರಾಣದಲ್ಲಿ ತುಂಬ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಪಡ್ಡೆಹುಲಿಯಲ್ಲಿ ಕಾಮಿಡಿ ಫನ್ ಇತ್ತು. ವಿಷ್ಣು ಪ್ರಿಯ ಚಿತ್ರದಲ್ಲಿ ಸೌಮ್ಯ ಸ್ವಭಾವದ ಪಾತ್ರವಿದೆ. ಇದೀಗ ರಾಣದಲ್ಲಿ ಸಂಪೂರ್ಣ ಚೇಂಜ್ ಓವರ್ ಇದೆ. ಬಾಡಿ ಬಿಲ್ಡ್ ಮಾಡಿಕೊಳ್ಳುತ್ತಿದ್ದೇನೆ. ಆ್ಯಕ್ಷನ್ಗೆ ಸಾಕಷ್ಟು ಪ್ರಾಮುಖ್ಯತೆ ಇರುವುದರಿಂದ ಅದಕ್ಕಾಗಿ ತಯಾರಿ ನಡೆಸಿದ್ದೇನೆ’ ಎನ್ನುತ್ತಾರೆ.

ADVERTISEMENT

ಇನ್ನು ಪುತ್ರನ ಚಿತ್ರದ ಬಗ್ಗೆ ಕೆ.ಮಂಜು ಸಹ ಪ್ರತಿಕ್ರಿಯಿಸಿ ‘ಒಳ್ಳೆ ಕಥೆ ಸಿಕ್ಕಿದೆ. ಗುಜ್ಜರ್ ಅವರು ಮೊದಲಿಂದಲೂ ನನಗೆ ಸ್ನೇಹಿತರು. ಯಾವುದಾದರೂ ಸಿನಿಮಾ ಇದ್ದರೆ ನೀಡಿ ಎಂದಿದ್ದರು. ಅದರಂತೆ ನಂದಕಿಶೋರ್ ಮತ್ತು ಶ್ರೇಯಸ್ ಕಾಂಬಿನೇಷನ್ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಚಿತ್ರ ನಿರ್ಮಾಣದಲ್ಲಿ ಗುಜ್ಜರ್ ಅವರಿಗೆ ಕೃಷ್ಣನಂತೆ ಅವರೊಂದಿಗೆ ಬೆನ್ನಿಗೆ ನಿಲ್ಲುತ್ತೇನೆ’ ಎಂದರು.

ಇನ್ನು ಈ ಚಿತ್ರದಲ್ಲಿ ಶ್ರೇಯಸ್‌ ಅವರಿಗೆ ಇಬ್ಬರು ನಾಯಕಿಯರು. ರೀಷ್ಮಾ ನಾಣಯ್ಯ ಮತ್ತು ರಜನಿ ಭಾರದ್ವಾಜ್ ಮೊದಲ ಬಾರಿ ನಂದಕಿಶೋರ್ ಮತ್ತು ಶ್ರೇಯಸ್ ಜತೆ ಕೆಲಸ ಮಾಡುತ್ತಿದ್ದಾರೆ. ತುಂಬ ಮುದ್ದಾದ ಪಾತ್ರವನ್ನು ನೀಡಿದ್ದಾರೆ. ನಂದಕಿಶೋರ್ ಅವರ ಜೊತೆಗೆ ಕೆಲಸ ಮಾಡಬೇಕೆಂಬ ಆಸೆ ಇತ್ತು. ಅದೀಗ ಈ ಸಿನಿಮಾ ಮೂಲಕ ಈಡೇರಿದೆ ಎಂದು ಮನದಾಳವನ್ನು ನಟಿ ರೀಷ್ಮಾ ನಾಣಯ್ಯ ಹೇಳಿಕೊಂಡರು.

ಪೊಗರು ಬಳಿಕ ನಂದಕಿಶೋರ್ ಜತೆಗೆ ಚಂದನ್ ಶೆಟ್ಟಿ ಅವರ ಸಂಗೀತ ನಿರ್ದೇಶನ ಇಲ್ಲಿಯೂ ಮುಂದುವರಿಯುತ್ತಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿರಲಿದ್ದು, ಮಾಸ್ ಶೈಲಿಯಲ್ಲಿ ಮೂಡಿಬರಲಿವೆಯಂತೆ.

‘ಮುಂದಿನ ವಾರದಿಂದ ಚಿತ್ರದ ಶೂಟಿಂಗ್ ಬೆಂಗಳೂರಿನಲ್ಲಿ ನಡೆಯುತ್ತದೆ. ಬಳಿಕ ಉತ್ತರ ಕರ್ನಾಟಕ ಭಾಗದಲ್ಲಿ ಕೆಲ ದಿನ ನಡೆಯಲಿದೆ. ಒಟ್ಟಾರೆ 40-45 ದಿನದ ಶೂಟಿಂಗ್ ಪ್ಲಾನ್ ಹಾಕಿದ್ದೇವೆ. ಬಹುತೇಕ ಹೊಸಬರೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಲನ್ ಪಾತ್ರಕ್ಕೆ ಬಾಡಿ ಬಿಲ್ಡರ್ ರಾಘವೇಂದ್ರ ಅವರನ್ನು ವಿಲನ್ ಪಾತ್ರದ ಮೂಲಕ ಪರಿಚಯಿಸುತ್ತಿದ್ದೇವೆ’ ಎಂದರು ನಂದಕಿಶೋರ್.

ಶೇಖರ್ ಚಂದ್ರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಪ್ರಶಾಂತ್ ರಾಜಪ್ಪ ಸಂಭಾಷಣೆ, ರವಿ ವರ್ಮಾ ಸಾಹಸ ನಿರ್ದೇಶನ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.