‘ಕಾಮಿಡಿ ಕಿಲಾಡಿಗಳು’ ಮೂಲಕ ಹಾಸ್ಯ ನಟನಾಗಿ ಗುರುತಿಸಿಕೊಂಡವರು ಶಿವರಾಜ್ ಕೆ.ಆರ್.ಪೇಟೆ. ನಾಯಕ ನಟನಾಗಿ ಅಭಿನಯಿಸಿರುವಇವರ ಮೊದಲ ಚಿತ್ರ ‘ನಾನು ಮತ್ತು ಗುಂಡ’ ತೆರೆಗೆ ಬರಲು ಸಿದ್ಧವಾಗಿದೆ.
ಚಿತ್ರದ ಟ್ರೇಲರ್ ಅನ್ನು ನಿರ್ಮಾಪಕ ಉದಯ್ ಮೆಹತಾ ಅವರು ಚಾಮರಾಜಪೇಟೆ ಕಲಾವಿದರ ಸಂಘದಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಿ, ಚಿತ್ರ ತಂಡಕ್ಕೆ ಶುಭ ಹಾರೈಸಿದರು.
ರಘು ಹಾಸನ್ ನಿರ್ಮಾಣದ ಚಿತ್ರಕ್ಕೆ ಶ್ರೀನಿವಾಸ್ ತಮ್ಮಯ್ಯ ಆ್ಯಕ್ಷನ್ ಕಟ್ ಹೇಳಿದ್ದಾರೆ. ತಾರಾಗಣದಲ್ಲಿ ಜಿ.ಗೋವಿಂದೇಗೌಡ, ಜಿಮ್ ರವಿ, ರಾಕ್ಲೈನ್ ಸುಧಾಕರ್ ಇದ್ದಾರೆ. ರೋಹಿತ್ ರಮನ್ ಸಾಹಿತ್ಯದ ನಾಲ್ಕು ಹಾಡುಗಳಿಗೆ ಕಾರ್ತಿಕ್ ಶರ್ಮಾ ಸಂಗೀತ ಸಂಯೋಜಿಸಿದ್ದಾರೆ.
ಕಥೆ ವಿವೇಕನಂದಾ ಅವರದ್ದು. ಶರತ್ ಚಕ್ರವರ್ತಿ ಸಂಭಾಷಣೆ ಬರೆದಿದ್ದಾರೆ. ಛಾಯಾಗ್ರಹಣ ಚಿದಾನಂದ, ಸಂಕಲನ ಕೆ.ಎಂ.ಪ್ರಕಾಶ್ ಹಾಗೂ ಕುಂಗುಫು ಚಂದ್ರು ಅವರ ಸಾಹಸವಿದೆ.
ಸಿನಿಮಾದ ಸಂಭಾಷಣೆಯು ಹಾಸನ ಭಾಷೆಯ ಧಾಟಿಯಲ್ಲಿದೆಯಂತೆ. ಕೆಲವು ದೃಶ್ಯಗಳಲ್ಲಿ ಶ್ವಾನವು ದೈವ ಕೃಪೆ ಎಂಬಂತೆ ಸಹಜ ಅಭಿನಯ ನೀಡಿದ್ದು,ಡಬ್ಬಿಂಗ್ ಕೂಡ ಮಾಡಿದೆಯಂತೆ. ಸಕಲೇಶಪುರ, ಹಾಸನ, ಅರಸಿಕೆರೆಯಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ.
ಸಿನಿಮಾದ ಗುಂಡನ ಪಾತ್ರನಾಯಿಯದ್ದು. ಲ್ಯಾಬ್ರೆಡಾರ್ ನಾಯಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದೆ.‘ಒಂದು ಮರೆಯದ ಕಥೆ’ ಎಂಬಅಡಿಬರಹದ ಈ ಸಿನಿಮಾ, ನಾಯಕ ಹಾಗೂ ನಾಯಿ ನಡುವಿನ ಭಾವನಾತ್ಮಕ ಸಂಬಂಧ, ದಂಪತಿಯೊಬ್ಬರ ಬದುಕಿನಲ್ಲಿ ಶ್ವಾನ ಎಷ್ಟು ಮಹತ್ವದ್ದಾಗಿತ್ತು, ಪ್ರೀತಿಸುವ ಪ್ರಾಣಿಗಳು ವ್ಯಕ್ತಿಗಳ ಬದುಕಿನ ಏನೆಲ್ಲ ಪಾತ್ರ ವಹಿಸುತ್ತವೆ, ಅವು ದೂರವಾದಾಗ ಎಷ್ಟೆಲ್ಲ ನೋವು ಅನುಭವಿಸಬೇಕಾಗುತ್ತದೆ ಎನ್ನುವುದನ್ನು ಎಳೆಎಳೆಯಾಗಿ ಬಿಡಿಸಿಟ್ಟಿದೆ.
ಹೆಂಡತಿ ಪಾತ್ರದಲ್ಲಿ ಅಭಿನಯಿಸಿರುವ ನಾಯಕಿ ಸಂಯುಕ್ತ ಹೊರನಾಡು ಅವರು ನಿಜ ಬದುಕಿನಲ್ಲೂ ಪ್ರಾಣಿಪ್ರಿಯೆಯಂತೆ. ಗುಂಡ ಹೆಸರಿನ ನಾಯಿ ಕೂಡ ಅವರ ಮನೆಯಲ್ಲಿ ಇತ್ತಂತೆ. ಅದು ಅಗಲಿದಾಗ ಸಂಯುಕ್ತ ಅನುಭವಿಸಿದ ನೋವು ಕೂಡ ಈ ಸಿನಿಮಾದ ದೃಶ್ಯದಲ್ಲಿ ಬಂದಿವೆಯಂತೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.