
ಬಹುತೇಕ ಹೊಸಬರಿಂದಲೇ ಕೂಡಿರುವ ‘ನೆನಪಾದಳು ಶಾಕುಂತಲೆ’ ಚಿತ್ರದ ಫಸ್ಟ್ಲುಕ್ ಪೋಸ್ಟರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಪೌರಾಣಿಕ ಕಾವ್ಯ ಹಾಗೂ ಆಧುನಿಕ ಕಾಲದ ಪ್ರೇಮವನ್ನು ಒಟ್ಟಾಗಿಸುವ ಕಥೆ ಹೊಂದಿರುವ ಚಿತ್ರಕ್ಕೆ ವಿನಯ್ ಚಂದ್ರಹಾಸ ಆ್ಯಕ್ಷನ್ ಕಟ್ ಹೇಳಿದ್ದಾರೆ.
‘ಈ ಚಿತ್ರವು ಪಾರ್ಥಸಾರಥಿ ಎಂಬ ಸ್ಟಾರ್ಟ್ಅಪ್ ಸಂಸ್ಥಾಪಕನ ಕಥೆಯನ್ನು ಹೊಂದಿದೆ. ತನ್ನ ಮೊದಲ ಪ್ರೀತಿಯ ನೋವಿನಿಂದ ಹೊರಬರಲು ಹಂಬಲಿಸುವ ನಾಯಕ, ಸಾಂತ್ವನ ಹುಡುಕುತ್ತಾ ತನ್ನ ಅಕ್ಕನ ಊರಿಗೆ ಪ್ರಯಾಣಿಸುತ್ತಾನೆ. ಅಲ್ಲಿನ ಒಂದು ಹಳೆಯ ಗ್ರಂಥಾಲಯದಲ್ಲಿ ಆತನಿಗೆ ಓರ್ವ ಯುವತಿಯ ಪರಿಚಯವಾಗುತ್ತದೆ. ಆಕೆಯ ಸಾನ್ನಿಧ್ಯ ಆತನ ಜೀವನದ ದಿಕ್ಕನ್ನೇ ಬದಲಿಸುತ್ತದೆ. ಪ್ರಾಚೀನ ಕಾಲದ ದುಷ್ಯಂತ-ಶಕುಂತಲೆಯರ ಗಾಂಧರ್ವ ವಿವಾಹದ ಸಾದೃಶ್ಯವನ್ನು ಹೊತ್ತ ಈ ಕಥೆಯು, ನೆನಪು ಮತ್ತು ಹಂಬಲಗಳ ನಡುವೆ ಸಾಗುವ ಸುಂದರ ಕಾವ್ಯದಂತಿದೆ’ ಎಂದಿದ್ದಾರೆ ನಿರ್ದೇಶಕ.
ವಿರಾಜ್ ಕೊಲಾಟ್ಲು ಅವರಿಗೆ ಕಾವ್ಯ ಭಗವಂತ್ ಜೋಡಿಯಾಗಿದ್ದಾರೆ. ವಿಸ್ಮಯ ಕೆ. ಚಿತ್ರಕ್ಕೆ ಬಂಡವಾಳ ಹೂಡಿದ್ದು, ಪ್ರಸನ್ನಕುಮಾರ್ ಎಂ.ಎಸ್. ಸಂಗೀತ, ವಿಶಾಲ್ ಕುಮಾರ್ ಗೌಡ ಛಾಯಾಚಿತ್ರಗ್ರಹಣ, ಮಧು ತುಂಬಕೆರೆ ಸಂಕಲನವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.