‘ಒಂದ್ ಕಥೆ ಹೇಳ್ಲಾ’ ಎಂದು ಕೇಳುತ್ತ ನಿರ್ದೇಶಕ ಜಿ. ಗಿರೀಶ್ ಅವರು ಹೇಳಹೊರಟಿರುವುದು ಐದು ಕಥೆಗಳನ್ನು! ಅಂದರೆ, ಇವರ ಚಿತ್ರದಲ್ಲಿ ಒಟ್ಟು ಐದು ಕಥೆಗಳು ಇವೆ. ಶುಕ್ರವಾರದಿಂದ ಅವರು ಅಷ್ಟೂ ಕಥೆಗಳನ್ನು ತೆರೆಯ ಮೇಲೆ ತೋರಿಸಲಿದ್ದಾರೆ.
‘ಒಂದ್ ಕಥೆ ಹೇಳ್ಲಾ’ ಚಿತ್ರ ನಿರ್ಮಾಣ ಆಗಿದ್ದು ಕ್ರೌಡ್ ಫಂಡಿಂಗ್ ಮೂಲಕ. ಇದರ ನಿರ್ಮಾಣಕ್ಕೆ ಕೈಜೋಡಿಸಿದವರ ಸಂಖ್ಯೆ ಇಪ್ಪತ್ತು. ಇದು ‘ದಕ್ಷಿಣ ಭಾರತದ ಮೊಟ್ಟಮೊದಲ ಹಾರರ್ ಕಥೆಗಳ ಗುಚ್ಛ’ ಎಂದು ಚಿತ್ರತಂಡ ಹೇಳಿಕೊಂಡಿದೆ.
ಸಿನಿಮಾ ಬಗ್ಗೆ ಮಾಹಿತಿ ನೀಡಲು ಗಿರೀಶ್ ಅವರು ತಮ್ಮ ತಂಡದ ಜೊತೆ ಸುದ್ದಿಗೋಷ್ಠಿ ನಡೆಸಿದ್ದರು. ‘ಇದರಲ್ಲಿನ ಐದೂ ಕಥೆಗಳಲ್ಲಿ ಒಂದಕ್ಕೊಂದು ಸಂಬಂಧ ಇಲ್ಲ ಅಂತಲ್ಲ. ಆದರೆ, ವೀಕ್ಷಕರಿಗೆ ಪ್ರತಿ ಇಪ್ಪತ್ತು ನಿಮಿಷಗಳಿಗೆ ಒಮ್ಮೆ ಹೊಸ ಅನುಭವ ಸಿಗುತ್ತಿರುತ್ತದೆ’ ಎಂದರು ಗಿರೀಶ್. ಆದರೆ, ಐದೂ ಕಥೆಗಳ ನಡುವಿನ ಸಂಬಂಧ ಏನು, ಚಿತ್ರದ ಕೊನೆಯಲ್ಲಿ ಐದೂ ಕಥೆಗಳು ಒಂದಾಗುತ್ತವೆಯೇ ಎಂಬ ಕುತೂಹಲ ತಣಿಸಲು ಮುಂದಾಗಲಿಲ್ಲ!
‘ನವ ದಂಪತಿ ಬೆಂಗಳೂರಿನಿಂದ ದೂರದಲ್ಲಿರುವ ಒಂದು ಮನೆಗೆ ಹೋಗುತ್ತಾರೆ. ಅಲ್ಲಿ ಅವರು ಹೇಗೆ ಸಿಕ್ಕಿಹಾಕಿಕೊಳ್ಳುತ್ತಾರೆ ಎಂಬುದು ನಮ್ಮ ಕಥೆ’ ಎಂದರು ಈ ಚಿತ್ರದಲ್ಲಿ ಅಭಿನಯಿಸಿರುವ ರಮಾಕಾಂತ್.
ಚಿತ್ರವನ್ನು ಅರವತ್ತಕ್ಕೂ ಹೆಚ್ಚಿನ ಮಂದಿರಗಳಲ್ಲಿ ಬಿಡುಗಡೆ ಮಾಡುವ ಉದ್ದೇಶ ನಿರ್ಮಾಪಕರದ್ದು. ಚಿತ್ರದ ಎಲ್ಲ ಉಪಕಥೆಗಳು ಹಾರರ್ ಅಂಶ ಹೊದ್ದುಕೊಂಡಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.