ADVERTISEMENT

ನಿಯಮ ಉಲ್ಲಂಘಿಸಿ ಪಾರ್ಟಿ: ನಟ ದರ್ಶನ್‌, ನಿರ್ಮಾಪಕ ರಾಕ್‌ಲೈನ್ ವಿಚಾರಣೆಗೆ ಹಾಜರು

​ಪ್ರಜಾವಾಣಿ ವಾರ್ತೆ
Published 12 ಜನವರಿ 2024, 11:19 IST
Last Updated 12 ಜನವರಿ 2024, 11:19 IST
   

ಬೆಂಗಳೂರು: ಕಾಟೇರ ಸಿನಿಮಾ ಯಶಸ್ಸು ಸಂಭ್ರಮಿಸಲು ಒರಾಯನ್‌ ಮಾಲ್‌ ಬಳಿಯ ‘ಜೆಟ್‌ಲ್ಯಾಗ್‌ ಪಬ್‌’ನಲ್ಲಿ ನಿಯಮ ಉಲ್ಲಂಘಿಸಿ, ಮುಂಜಾನೆವರೆಗೆ ಪಾರ್ಟಿ ಆಯೋಜಿಸಿದ್ದ ಪ್ರಕರಣದಲ್ಲಿ ನಟ ದರ್ಶನ್‌ ಸೇರಿದಂತೆ ಚಿತ್ರರಂಗದ ಎಂಟು ಮಂದಿ ಸುಬ್ರಹ್ಮಣ್ಯ ನಗರ ಪೊಲೀಸ್‌ ಠಾಣೆಗೆ ಶುಕ್ರವಾರ ವಿಚಾರಣೆಗೆ ಹಾಜರಾದರು.

ನಟ ದರ್ಶನ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಕಾಟೇರ ಸಿನಿಮಾದ ನಿರ್ದೇಶಕ ತರುಣ್ ಸುಧೀರ್, ನಟ ‘ನೀನಾಸಂ’ ಸತೀಶ್, ಡಾಲಿ ಧನಂಜಯ್, ಅಭಿಷೇಕ್ ಅಂಬರೀಷ್‌ ವಿಚಾರಣೆಗೆ ಹಾಜರಾದರು.

ನಿಯಮ ಉಲ್ಲಂಘಿಸಿ ಜ.3ರಂದು ಪಾರ್ಟಿ ನಡೆಸಿದ್ದ ಆರೋಪದ ಮೇರೆಗೆ ಜ.7ರಂದು ಪೊಲೀಸರು ನೋಟಿಸ್‌ ಜಾರಿ ಮಾಡಿದ್ಧರು. ಜ.8ರಂದು ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿತ್ತು. ಆದರೆ, ದರ್ಶನ್‌ ಹಾಗೂ ತರುಣ್‌ ಸುಧೀರ್‌ ಸಿನಿಮಾದ ಪ್ರಚಾರಕ್ಕೆ ದುಬೈಗೆ ತೆರಳಿದ್ದರಿಂದ ವಿಚಾರಣೆಗೆ ಬಂದಿರಲಿಲ್ಲ. ಶುಕ್ರವಾರ ಎಲ್ಲರೂ ಒಮ್ಮೆಲೇ ವಿಚಾರಣೆಗೆ ಬಂದರು. ಠಾಣೆಯಲ್ಲಿ ಹೇಳಿಕೆ ಪಡೆದುಕೊಳ್ಳಲಾಗುತ್ತಿದೆ.

ADVERTISEMENT

‘ಜ.3ರಂದು ಒರಾಯನ್‌ ಮಾಲ್‌ನಲ್ಲಿ ಚಿತ್ರರಂಗದ ಗಣ್ಯರಿಗೆ ಸಿನಿಮಾದ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ಅದಾದ ಮೇಲೆ ನಿರ್ಮಾಪಕ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ ಜಗದೀಶ್ ಮಾಲೀಕತ್ವದ ಜೆಟ್‌ಲ್ಯಾಗ್ ಪಬ್‌ನಲ್ಲಿ ಪಾರ್ಟಿ ಆಯೋಜನೆಗೊಂಡಿತ್ತು. ರಾತ್ರಿ 1 ಗಂಟೆವರೆಗೆ ಮಾತ್ರ ಪಾರ್ಟಿಗೆ ಅವಕಾಶವಿತ್ತು. ಆದರೆ, ರಾತ್ರಿ 8 ಗಂಟೆಗೆ ಆರಂಭವಾದ ಪಾರ್ಟಿ ಜ.4ರ ಮುಂಜಾನೆ 3.30ರವರೆಗೆ ನಡೆದಿತ್ತು. ಈ ವೇಳೆ ಪಾರ್ಟಿಯಲ್ಲಿ ಪಾಲ್ಗೊಂಡ ಎಲ್ಲರಿಗೂ ಮುಂಜಾನೆವರೆಗೆ ಮದ್ಯ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.