
ಚೊಚ್ಚಲ ನಿರ್ದೇಶನದ ಸಿನಿಮಾ ‘ಶಾಖಾಹಾರಿ’ ಮೂಲಕ ಗಮನಸೆಳೆದ ಸಂದೀಪ್ ಸುಂಕದ್ ತಮ್ಮ ಮುಂದಿನ ಸಿನಿಮಾ ‘ಪಬ್ಬಾರ್’ ತೆರೆಗೆ ತರಲು ಸಜ್ಜಾಗಿದ್ದಾರೆ. ಸಂಕ್ರಾಂತಿಗೆ ಸಿನಿಮಾದ ನಾಯಕ ಧೀರೆನ್ ಆರ್.ರಾಜ್ಕುಮಾರ್ ಪಾತ್ರದ ಪರಿಚಯವನ್ನು ಚಿತ್ರತಂಡ ಮಾಡಿದೆ.
‘ಶಿವ 143’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಧೀರೆನ್ ಇದೀಗ ಗೀತಾ ಪಿಕ್ಚರ್ಸ್ ನಿರ್ಮಾಣದ ‘ಪಬ್ಬಾರ್’ನಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾವನ್ನು ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜ್ಕುಮಾರ್ ನಿರ್ಮಾಣ ಮಾಡಿದ್ದಾರೆ. ಭಿನ್ನವಾಗಿ ನಾಯಕನ ಪಾತ್ರವನ್ನು ಸಂದೀಪ್ ಪರಿಚಯಿಸಿದ್ದಾರೆ. ಇದೊಂದು ಕ್ರೈಂ, ಅಡ್ವೆಂಚರಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ಹಿಮಾಚಲ ಪ್ರದೇಶದ ಶಿಮ್ಲಾ ಬಳಿಯ ‘ಪಬ್ಬಾರ್’ ನದಿ ಈ ಚಿತ್ರದ ಕಥೆಯ ಕೇಂದ್ರಬಿಂದುವಾಗಿದೆ. ಹೀಗಾಗಿಯೇ ಚಿತ್ರಕ್ಕೆ ‘ಪಬ್ಬಾರ್’ ಎಂಬ ಶೀರ್ಷಿಕೆ ಇಡಲಾಗಿದೆ.
ಚಿತ್ರದ ನಾಯಕ ಪೊಲೀಸ್ ಅಧಿಕಾರಿಯಾಗಿದ್ದು, ಆತನ ಎರಡು ಪಯಣಗಳು ಕಥೆಯಲ್ಲಿದೆ. ಒಂದು ಪ್ರಕರಣಕ್ಕೆ ಸಂಬಂಧಿಸಿದ್ದು, ಇನ್ನೊಂದು ಆತನ ವೈಯಕ್ತಿಕ ಪಯಣ ಎಂದಿದ್ದಾರೆ ಸಂದೀಪ್. ‘ಟಗರು ಪಲ್ಯ’ ಖ್ಯಾತಿಯ ನಟಿ ಅಮೃತ ಪ್ರೇಮ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ಆಯುರ್ವೇದ ಟೀಚರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ವಿಶ್ವಜಿತ್ ರಾವ್ ಛಾಯಾಚಿತ್ರಗ್ರಹಣ ಹಾಗೂ ಮಯೂರ್ ಅಂಬೆಕಲ್ಲು ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ರಾಮಕೃಷ್ಣ, ಭರತ್ ಜಿ.ಬಿ, ಶ್ರೀಹರ್ಷ ಗೋಭಟ್ ತಾರಾಬಳಗದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.