
ಸುಚೇಂದ್ರಪ್ರಸಾದ ಚಿತ್ರಕಥೆ-ಸಂಭಾಷಣೆ ಜತೆಗೆ ನಿರ್ದೇಶನ ಮಾಡಿರುವ ‘ಪದ್ಮಗಂಧಿ’ ಚಿತ್ರ ಶೀಘ್ರದಲ್ಲಿ ತೆರೆಗೆ ಬರಲಿದೆ. ಕನ್ನಡ, ಸಂಸ್ಕ್ರತ ಭಾಷೆಗಳಲ್ಲಿ ಚಿತ್ರ ಸಿದ್ಧಗೊಂಡಿದ್ದು, ಹಿಂದಿಗೆ ಡಬ್ ಆಗಿದೆ. ಎಸ್.ಆರ್.ಲೀಲಾ ಕಥೆ ಬರೆದು, ನಿರ್ಮಾಣ ಮಾಡಿದ್ದಾರೆ.
‘ಸಿನಿಮಾವು ಆದಿಯಿಂದ ಅಂತ್ಯದವರೆಗೂ ಪದ್ಮಗಂಧಿಯ ಪರಿಮಳ ಪಸರಿಸುತ್ತದೆ. ದೈವೀಕ ಗಂಧ ಮೆತ್ತಿಕೊಂಡಿರುವ ಕಮಲದ ಹೂವಿನ ಬಗ್ಗೆಯೇ ಕಥೆ ಇದೆ. ಕಮಲ ಕುರಿತ ವಿಚಾರಗಳನ್ನು ಸಂಶೋಧಿಸಿ ಸನ್ನಿವೇಶಗಳಲ್ಲಿ ಕಟ್ಟಿಕೊಡಲಾಗಿದೆ. ಕಮಲ ಯಾಕೆ ರಾಷ್ಟ್ರೀಯ ಪುಷ್ಪವಾಯ್ತು, ಒಂದು ಪಕ್ಷಕ್ಕೆ ಲಾಂಛನವಾಯ್ತು, ಬ್ರಹ್ಮ ಯಾಕೆ ಇದರ ಮೇಲೆ ಕುಳಿತುಕೊಳ್ಳುತ್ತಾನೆ, ಆಯುರ್ವೇದಕ್ಕೆ ಇದು ಯಾಕೆ ಬೇಕು? ಎಂದು ನೋಡುತ್ತ ಹೋದಾಗ ಕಮಲಕ್ಕೆ 36 ಸಾವಿರಕ್ಕೂ ಹೆಚ್ಚು ಪರ್ಯಾಯ ನಾಮಗಳಿವೆ ಎನ್ನುವುದನ್ನು ಕೇಳಿ ಅಚ್ಚರಿಯಾಯ್ತು. ಪದ್ಮ ಸಂಬಂಧಿ ಎಂಬ ಅರ್ಥದಲ್ಲಿ ಈ ಸಿನಿಮಾ ಮಾಡಲಾಗಿದೆ’ ಎನ್ನುತ್ತಾರೆ ಸುಚೇಂದ್ರಪ್ರಸಾದ.
ವಿದ್ಯಾರ್ಥಿಯಾಗಿ ಮಹಾಪದ್ಮ, ಗುರುಮಾತೆ ಪಾತ್ರದಲ್ಲಿ ಉಡುಪಿಯ ಪರಿಪೂರ್ಣ ಚಂದ್ರಶೇಖರ್ ಇವರೊಂದಿಗೆ ಶತಾವಧಾನಿ ಆರ್.ಗಣೇಶ್, ಗೌರಿ ಸುಬ್ರಹ್ಮಣ್ಯ, ಪ್ರೇಮಾ, ಹೇಮಂತ್ಕುಮಾರ್, ಆಚಾರ್ಯ ಮೃತ್ಯುಂಜಯ ಶಾಸ್ತ್ರಿ, ಜಿ.ಎಲ್.ಭಟ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.
ಡಾ.ದೀಪಕ್ ಪರಮಶಿವನ್ ಸಂಗೀತ, ಮನು ಯಪ್ಲಾರ್-ನಾಗರಾಜ್ ಅದ್ವಾನಿ-ಗಿರಿಧರ್ ದಿವಾನ್ ಛಾಯಾಚಿತ್ರಗ್ರಹಣ, ಎನ್.ನಾಗೇಶ್ ನಾರಾಯಣಪ್ಪ ಸಂಕಲನವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.