ಯೋಗರಾಜ್ ಭಟ್ಟರ ಹೊಸ ಚಿತ್ರ ‘ಪಂಚತಂತ್ರ’ ಪೂರ್ಣಗೊಂಡಿದೆ. ಆಮೆ–ಮೊಲದ ಕಥೆಯನ್ನು ಹೊಸ ಜಮಾನದ ಪೀಳಿಗೆಗಳ ನಡುವಿನ ಅಂತರದ ಕಥೆಯಾಗಿ ಹೇಳಹೊರಟಿರುವ ಅವರ ಪ್ರಯತ್ನ ಗೆಲ್ಲುತ್ತದೆ ಎಂಬ ವಿಶ್ವಾಸದಲ್ಲಿಯೂ ಅವರಿದ್ದಾರೆ.
ಚಿತ್ರವನ್ನು ಸರಿಯಾದ ರೀತಿಯಲ್ಲಿ, ಸರಿಯಾದ ಸಮಯಕ್ಕೆ ಬಿಡುಗಡೆ ಮಾಡಬೇಕು ಎನ್ನುವ ಆಲೋಚನೆ ತಂಡದ್ದು. ಮೊದಲಿಗೆ ನವೆಂಬರ್ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಯೋಜಿಸಿದ್ದ ಭಟ್ಟರು ಇದೀಗ ಮನಸ್ಸು ಬದಲಾಯಿಸಿ ಡಿಸೆಂಬರ್ ಅಂತ್ಯಕ್ಕೆ ಬರುವ ಆಲೋಚನೆಯಲ್ಲಿದ್ದಾರಂತೆ. ಇದಕ್ಕೆ ಇನ್ನೊಂದು ಕಾರಣವೂ ಇದೆ.
ಅವರು ನಿರ್ದೇಶಿಸಿದ್ದ ‘ಮುಂಗಾರು ಮಳೆ’ ಚಿತ್ರ ಬಿಡುಗಡೆಯಾಗಿದ್ದು ಡಿಸೆಂಬರ್ ತಿಂಗಳ ಕೊನೆಯ ಶುಕ್ರವಾರ. ಇದು ಲಕ್ಕಿ ದಿನ ಎನ್ನುವುದು ಹಲವರ ನಂಬಿಕೆ. ಈ ನಂಬಿಕೆಯನ್ನೇ ನೆಚ್ಚಿಕೊಂಡು ಸುನಿ ನಿರ್ದೇಶನದ, ಗಣೇಶ್ ನಾಯಕನಾಗಿ ನಟಿಸಿದ್ದ ‘ಚಮಕ್’ ಚಿತ್ರವನ್ನು ಕಳೆದ ವರ್ಷ ಕೊನೆಯಲ್ಲಿ ತೆರೆಗೆ ತರಲಾಗಿತ್ತು. ಆ ಸಿನಿಮಾವೂ ಬಾಕ್ಸ್ ಆಫೀಸಿನಲ್ಲಿ ಗೆದ್ದಿತು.
ಈ ಎಲ್ಲ ಕಾರಣಗಳಿಂದ ಭಟ್ಟರು ‘ಪಂಚತಂತ್ರ’ ಚಿತ್ರವನ್ನೂ ಈ ವರ್ಷದ ಕೊನೆಯ ಶುಕ್ರವಾರ ಬಿಡುಗಡೆ ಮಾಡುವ ಯೋಚನೆಯಲ್ಲಿದ್ದಾರೆ ಎಂಬುದು ಮೂಲಗಳ ಸುದ್ದಿ.
ಮಾಸ್ತಿ ಮತ್ತು ಕಾಂತರಾಜ್ ಕತೆ ಬರೆದಿರುವ ‘ಪಂಚತಂತ್ರ’ ಚಿತ್ರದಲ್ಲಿ ವಿಹಾನ್ ಮತ್ತು ಸೋನಲ್ ಮೊಂತೆರೊ ನಾಯಕ– ನಾಯಕಿಯಾಗಿ ನಟಿಸಿದ್ದಾರೆ. ಅಕ್ಷರಾ ಗೌಡ, ರಂಗಾಯಣ ರಘು, ಕರಿಸುಬ್ಬು ಮುಂತಾದವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಸುಜ್ಞಾನ್ ಛಾಯಾಗ್ರಹಣ, ಹರಿಕೃಷ್ಣ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಸದ್ಯವೇ ಚಿತ್ರದ ಆಡಿಯೊ ಬಿಡುಗಡೆ ಮಾಡುವ ಸಿದ್ಧತೆಯಲ್ಲಿ ಚಿತ್ರತಂಡವಿದೆ.ಒಂದೊಮ್ಮೆ ಡಿಸೆಂಬರ್ ಕೊನೆಯ ವಾರಕ್ಕೆ ‘ಪಂಚತಂತ್ರ’ ಬಿಡುಗಡೆಯಾಗಿ ಯಶಸ್ವಿಯಾದರೆ ವರ್ಷದ ಕೊನೆಯ ಶುಕ್ರವಾರ ಕುರಿತ ಲಕ್ಕಿ ನಂಬಿಕೆಗೆ ಇನ್ನಷ್ಟು ಪುಷ್ಟಿ ದೊರೆತಂತಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.