ಅಮರಾವತಿ: ತೆಲುಗು ಚಿತ್ರನಟ, ಜನಸೇನಾ ಪಕ್ಷದ ಮುಖ್ಯಸ್ಥ ಕೆ.ಪವನ್ ಕಲ್ಯಾಣ್ ಅವರಿಗೆ ಕೋವಿಡ್ ದೃಢಪಟ್ಟಿದೆ.
‘ಅಪೊಲೊ ಆಸ್ಪತ್ರೆಯ ತಜ್ಞ ವೈದ್ಯರು ಹಾಗೂ ಆಪ್ತ ವೈದ್ಯರು ಅವರ ಆರೋಗ್ಯದ ಮೇಲೆ ನಿಗಾ ಇರಿಸಿದ್ದಾರೆ. ಅವರ ಶ್ವಾಸಕೋಶದಲ್ಲಿ ಕಫ ತುಂಬಿದ್ದು, ಜ್ವರವೂ ಇದೆ. ಆದರೆ,ಪ್ರಸ್ತುತ ಅವರ ಆರೋಗ್ಯ ಸ್ಥಿರವಾಗಿದೆ’ ಎಂದು ಅವರ ರಾಜಕೀಯ ಕಾರ್ಯದರ್ಶಿ ಪಿ.ಹರಿಪ್ರಸಾದ್ ಶುಕ್ರವಾರ ತಿಳಿಸಿದರು.
ಏಪ್ರಿಲ್ 3ರಂದು ಉಪಚುನಾವಣೆ ಪ್ರಚಾರ ಮುಗಿಸಿಕೊಂಡು ಬಂದ ಪವನ್ ಕಲ್ಯಾಣ್, ಹೈದರಾಬಾದ್ನಲ್ಲಿರುವ ಫಾರ್ಮ್ಹೌಸ್ನಲ್ಲಿ ಪ್ರತ್ಯೇಕ ವಾಸದಲ್ಲಿದ್ದಾರೆ. ‘ಮೊದಲಿಗೆ ಕೋವಿಡ್ ಪರೀಕ್ಷೆ ಮಾಡಿಸಿದ ಸಂದರ್ಭದಲ್ಲಿ ನೆಗೆಟಿವ್ ಬಂದಿತ್ತು. ನಂತರದಲ್ಲೂ ಅವರಿಗೆ ಜ್ವರ ಹಾಗೂ ಮೈಕೈನೋವು ಮುಂದುವರಿದಿತ್ತು. ಎರಡನೇ ಬಾರಿ ಪರೀಕ್ಷೆ ಮಾಡಿಸಿದ ಸಂದರ್ಭದಲ್ಲಿ ಕೋವಿಡ್ ದೃಢಪಟ್ಟಿದೆ’ ಎಂದು ಹರಿಪ್ರಸಾದ್ ಹೇಳಿದರು.
ಬಾಲಿವುಡ್ನಲ್ಲಿ ತೆರೆಕಂಡಿದ್ದ ಅಮಿತಾಬ್ ಬಚ್ಚನ್ ನಟನೆಯ ‘ಪಿಂಕ್’ ಚಿತ್ರದ ರಿಮೇಕ್ ‘ವಕೀಲ್ ಸಾಬ್’ನಲ್ಲಿ, ಪವನ್ ಕಲ್ಯಾಣ್ ಪ್ರೇಕ್ಷಕರ ಮನಗೆದ್ದಿದ್ದು, ಚಿತ್ರವು ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ನೆರೆ ರಾಜ್ಯಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ‘ನಾನು ಆರೋಗ್ಯವಾಗಿ ಮತ್ತೆ ನನ್ನ ಅಭಿಮಾನಿಗಳು ಹಾಗೂ ಬೆಂಬಲಿಗರ ಮುಂದೆ ಬರಲಿದ್ದೇನೆ ಎಂದು ಪವನ್ ಅವರು ತಿಳಿಸಿದ್ದಾರೆ’ ಎಂದು ಹರಿಪ್ರಸಾದ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.