‘ಎಲ್ಲಿಗೆ ಪಯಣ ಯಾವುದೋ ದಾರಿ...’
–‘ಸಿಪಾಯಿ ರಾಮು’ ಸಿನಿಮಾದ ಈ ಹಾಡನ್ನು ಯಾರೊಬ್ಬರು ಮರೆಯಲು ಸಾಧ್ಯವಿಲ್ಲ. ಬದುಕಿನ ಬಗ್ಗೆ ಬೇಸರ ಮೂಡಿ ಪಯಣದ ಹಾದಿ ಹಿಡಿದ ಎಲ್ಲರ ಮನದಲ್ಲೂ ಗುನುಗುವ ಹಾಡಿದು. ಆರ್.ಎನ್. ಜಯಗೋಪಾಲ್ ಬರೆದ ಈ ಹಾಡಿಗೆ ಸಂಗೀತ ಸಂಯೋಜಿಸಿದ್ದು ಉಪೇಂದ್ರ ಕುಮಾರ್. ಪಿ.ಬಿ. ಶ್ರೀನಿವಾಸ್ ಇದಕ್ಕೆ ಧ್ವನಿಯಾಗಿದ್ದರು. ಈ ಹಾಡಿನ ಶೀರ್ಷಿಕೆ ಇಟ್ಟುಕೊಂಡೇ ಈಗ ಗಾಂಧಿನಗರದಲ್ಲಿ ಸಿನಿಮಾವೊಂದು ನಿರ್ಮಾಣವಾಗಿದೆ.
ಕನ್ನಡ ಚಿತ್ರರಂಗದಲ್ಲಿ ಹಳೆಯ ಸುಮಧುರ ಹಾಡುಗಳ ಮೊದಲ ಸಾಲನ್ನು ಶೀರ್ಷಿಕೆಯಾಗಿಟ್ಟುಕೊಂಡು ನಿರ್ಮಾಣಗೊಳ್ಳುತ್ತಿರುವ ಸಿನಿಮಾಗಳಿಗೆ ಕೊರತೆ ಇಲ್ಲ. ಈ ಸಾಲಿಗೆ ‘ಎಲ್ಲಿಗೆ ಪಯಣ ಯಾವುದೋ ದಾರಿ’ ಸಿನಿಮಾ ಹೊಸ ಸೇರ್ಪಡೆ.
ಇದನ್ನು ನಿರ್ದೇಶಿಸುತ್ತಿರುವುದು ಕಿರಣ್ ಸೂರ್ಯ.ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯನ್ನು ಅವರೇ ಹೊತ್ತಿದ್ದಾರೆ. ಕಾಶಿನಾಥ್ ಅವರ ಪುತ್ರ ಅಭಿಮನ್ಯು ಕಾಶಿನಾಥ್ ಈ ಚಿತ್ರದ ನಾಯಕ. ಅವರಿಗೆ ಸ್ಪೂರ್ತಿ ಉಡಿಮನೆ ಜೋಡಿಯಾಗಿದ್ದಾರೆ.ಅಂದಹಾಗೆ ಶೂಟಿಂಗ್ ಸ್ಥಳದಲ್ಲಿ ಭಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದ್ದು, ಸ್ಪೂರ್ತಿ ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ.
‘ಎಲ್ಲಿಗೆ ಪಯಣ...’ ಎಂದು ಕನವರಿಸುತ್ತಲೇ ಚಿತ್ರತಂಡ ಮಡಿಕೇರಿ ಹಾಗೂ ವಿರಾಜಪೇಟೆಯ ಸುತ್ತಮುತ್ತ ಮೊದಲ ಹಂತದ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. ನಲವತ್ತಕ್ಕೂ ಹೆಚ್ಚು ದಿನಗಳ ಚಿತ್ರೀಕರಣ ನಡೆದಿದೆ. ಈ ತಿಂಗಳ ಅಂತ್ಯಕ್ಕೆ ಎರಡನೇ ಹಂತದ ಚಿತ್ರೀಕರಣ ನಡೆಸುವ ಯೋಚನೆಯಲ್ಲಿದೆ.
ಸುದರ್ಶನ್ ಆರ್ಟ್ಸ್ ಲಾಂಛನದಡಿ ನಂದೀಶ್ ಎಂ.ಸಿ. ಗೌಡ ಹಾಗೂ ಜತಿನ್ ಜಿ. ಪಟೇಲ್ ಇದಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಎರಡು ಹಾಡುಗಳಿಗೆ ಗಣೇಶ್ ನಾರಾಯಣ್ ಸಂಗೀತ ನೀಡಿದ್ದಾರೆ. ಗೌತಮ್ ಮನು ಛಾಯಾಗ್ರಹಣ ಅವರ ಛಾಯಾಗ್ರಹಣವಿದೆ. ರವಿಚಂದ್ರನ್ ಮತ್ತು ಗಣೇಶ್ ಅವರ ಸಂಕಲನವಿದೆ.ಬಾಲ ರಾಜವಾಡಿ, ವಿಜಯಶ್ರೀ, ಗಣೇಶ್ ನಾರಾಯಣ್, ರವಿಕುಮಾರ್, ಶೊಭನ್, ಕಿಶೋರ್, ಅಶ್ವಿನಿ ತಾರಾಗಣದಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.