ADVERTISEMENT

ತಮಿಳಿನಲ್ಲಿ ನಟಿಸುತ್ತಿಲ್ಲ ಎಂದ ಪೂಜಾ ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 20:15 IST
Last Updated 2 ಏಪ್ರಿಲ್ 2020, 20:15 IST
ನಟಿ ಪೂಜಾ ಹೆಗ್ಡೆ
ನಟಿ ಪೂಜಾ ಹೆಗ್ಡೆ   

ಪೂಜಾಹೆಗ್ಡೆದಕ್ಷಿಣ ಭಾರತದ ಬಹುಬೇಡಿಕೆಯ ನಟಿ. ಕರುನಾಡಿನಿಂದ ಹೋಗಿ ಟಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿದ ಹೆಗ್ಗಳಿಕೆ ಆಕೆಯದ್ದು. ಬಾಲಿವುಡ್‌ನಲ್ಲೂ ನಟಿಸಿ ಆಕೆ ಸೈ ಎನಿಸಿಕೊಂಡಿದ್ದಾರೆ. ತೆಲುಗಿನ ‘ಅಲಾ ವೈಕುಂಠಪುರಮುಲೋ’ ಚಿತ್ರ ಸೂಪರ್‌ ಹಿಟ್‌ ಆದ ಬಳಿಕ ಆಕೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ನಡುವೆಯೇ ಆಕೆ ಕಾಲಿವುಡ್‌ನಲ್ಲಿ ನಟ ಸೂರ್ಯ ಜೊತೆಗೆ ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಡಿತ್ತು.

ನಿರ್ದೇಶಕ ಹರಿ ಆ್ಯಕ್ಷನ್‌ ಕಟ್‌ ಹೇಳಲಿರುವ ಈ ಸಿನಿಮಾಕ್ಕೆಪೂಜಾಹೆಗ್ಡೆಯೇ ನಾಯಕಿಯಾಗಲಿದ್ದಾರೆ ಎನ್ನಲಾಗಿತ್ತು.ಆದರೆ, ಆಕೆಯೇ ಟ್ವಿಟರ್‌ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.‘ತಮಿಳಿನಲ್ಲಿನಾನು ಸಾಕಷ್ಟು ಕಥೆಗಳನ್ನು ಕೇಳುತ್ತಿರುವುದು ನಿಜ. ಆದರೆ, ಇಲ್ಲಿಯವರೆಗೂ ಯಾವುದೇ ಸಿನಿಮಾವನ್ನೂ ಒಪ್ಪಿಕೊಂಡಿಲ್ಲ. ಸೂರ್ಯ ನಟನೆಯ ಹೊಸ ಚಿತ್ರದಲ್ಲೂ ಅಭಿನಯಿಸುತ್ತಿಲ್ಲ. ಆದರೆ, ಕಾಲಿವುಡ್‌ನಲ್ಲಿ ಈ ವರ್ಷ ಸಿನಿಮಾದಲ್ಲಿ ನಟಿಸುವುದು ಮಾತ್ರ ದಿಟ’ ಎಂದು ಟ್ವೀಟ್‌ ಮಾಡಿದ್ದಾರೆ.

ಪೂಜಾಹೆಗ್ಡೆವೃತ್ತಿಬದುಕು ಆರಂಭಿಸಿದ್ದು ತಮಿಳಿನ ‘ಮುಗಮೂಡಿ’ ಚಿತ್ರದ ಮೂಲಕ. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಾಣಲಿಲ್ಲ. ಅದಾದ ಬಳಿಕವೇ ಆಕೆ ಬಣ್ಣದಲೋಕದಲ್ಲಿ ಅದೃಷ್ಟ ಹುಡುಕಿಕೊಂಡು ತೆಲುಗು ಚಿತ್ರರಂಗದತ್ತ ಗುಳೆ ಹೊರಳಿದ್ದು.

ADVERTISEMENT

ಅಲ್ಲು ಅರ್ಜುನ್‌ ಜೊತೆಗೆ ನಟಿಸಿದ ‘ಡಿಜೆ’, ಜೂನಿಯರ್‌ ಎನ್‌ಟಿಆರ್ ಜೊತೆಗೆ ತೆರೆ ಹಂಚಿಕೊಂಡ ‘ಅರವಿಂದ ಸಮಿತೆ ವೀರ ರಾಘವ’ ಚಿತ್ರಗಳ ಯಶಸ್ಸು ಆಕೆಗೆ ಟಾಲಿವುಡ್‌ನಲ್ಲಿ ಭದ್ರನೆಲೆ ಒದಗಿಸಿತು. ಮಹೇಶ್‌ಬಾಬು ನಾಯಕರಾಗಿದ್ದ ‘ಮಹರ್ಷಿ’ ಚಿತ್ರದಲ್ಲಿನ ಆಕೆಯ ನಟನೆ ಜನರ ಮನಗೆದ್ದಿತು. ಈಗ ‘ಅಲಾ ವೈಕುಂಠಪುರಮುಲೋ’ ಚಿತ್ರದ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಆಕೆ ಬಾಲಿವುಡ್‌ನಲ್ಲೂ ಸಲ್ಮಾನ್‌ಖಾನ್‌ ಜೊತೆಗೆ ‘ಕಭಿ ಈದ್‌ ಕಭಿ ದಿವಾಳಿ’ ಚಿತ್ರದಲ್ಲಿ ನಟಿಸಲು ಅಣಿಯಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.