ನೈಜ ಘಟನೆಯ ಚಿತ್ರಗಳನ್ನು ಇಷ್ಟಪಡುವ ಜನರಿಗೆ ‘ಪ್ರೇಮನ್’ ಚಿತ್ರ ಮನತಣಿಸಲು ಸಜ್ಜಾಗಿದೆ. ಈ ಚಿತ್ರ ಮಾರ್ಚ್ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಇತ್ತೀಚೆಗಷ್ಟೇ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಕೆಲವೇ ಗಂಟೆಗಳಲ್ಲಿ ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿರುವುದು ಚಿತ್ರತಂಡದ ಖುಷಿ ಹೆಚ್ಚಿಸಿದೆ.
ಬೆಂಗಳೂರು ನ್ಯಾಷನಲ್ ಕಾಲೇಜಿನಲ್ಲಿ 2000ನೇ ಸಾಲಿನಲ್ಲಿ ನಡೆದ ಘಟನೆಯೊಂದನ್ನು ಕುಂದಾಪುರದಲ್ಲಿ ನಡೆದಂತೆ ಚಿತ್ರಿಸಲಾಗಿದೆ. ಹೊರ ರಾಜ್ಯದಲ್ಲಿ ನಡೆದ ಘಟನೆಯೊಂದನ್ನೂ ಕ್ಲೈಮಾಕ್ಸ್ಗೆ ಬಳಸಲಾಗಿದೆ. ಸೆಸ್ಪೆನ್ಸ್, ಥ್ರಿಲ್ಲರ್ ಕತೆಯಾಗಿರುವುದರಿಂದ ಚಿತ್ರದ ಸಾರವನ್ನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಅಡಿಬರಹದಲ್ಲಿ ‘ಕೊನೆಯಾಗದ ಪ್ರೀತಿ’ ಎಂದು ಹೇಳಿಕೊಂಡಿರುವುದರಿಂದ ಇದೊಂದು ಪ್ರೇಮಕಥೆ ಎಂದು ಊಹಿಸಬಹುದಾಗಿದೆ. ಮಲಯಾಳಂನ ಯಶಸ್ವಿ ಚಿತ್ರ ‘ಪ್ರೇಮಂ’ನ ಛಾಯೆ ಇದ್ದರೂ ಚಿತ್ರದ ಕತೆ ಬೇರೆಯದೇ ಇದೆ ಎನ್ನುವುದು ಚಿತ್ರತಂಡದ ಸಮಜಾಯಿಷಿ.
ಶಿವರಾಜ್ ಮಧುಗಿರಿ ಈ ಚಿತ್ರ ನಿರ್ದೇಶಿಸಿದ್ದಾರೆ. ಜತೆಗೆ ಸಂಭಾಷಣೆ ಕೂಡ ಬರೆದಿದ್ದಾರೆ. ನಾಯಕನಾಗಿ ಕಾಲೇಜು ಹುಡುಗನ ಪಾತ್ರದಲ್ಲಿ ನಟಿಸಿರುವ ವಿಷ್ಣುತೇಜ ನೀನಾಸಂ ಚಿತ್ರದ ರಚನೆ, ಚಿತ್ರಕತೆ ಹಾಗೂ ಸಂಭಾಷಣೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಪದ್ಮಶ್ರೀ ಮತ್ತು ಯಶಸ್ವಿನಿ ವಿಷ್ಣುತೇಜ ಜತೆಗೆ ತೆರೆ ಹಂಚಿಕೊಂಡಿದ್ದಾರೆ.
ಪ್ರಧಾನ ಖಳನಾಯಕನಾಗಿ ಪಾರ್ಥ ಕಾಣಿಸಿಕೊಂಡಿದ್ದು, ಇವರೊಂದಿಗೆ ನಾಗೇಂದ್ರ ಷಾ, ರಮೇಶ್ ಪಂಡಿತ್, ಸುನೇತ್ರ ಪಂಡಿತ್, ರವಿ ಭಟ್, ಮಜಾಭಾರತ ಖ್ಯಾತಿಯ ಚಿಲ್ಲರ್ಮಂಜು, ಧನಿಕಾ ನಟಿಸಿದ್ದಾರೆ.
ನಾಗೇಂದ್ರ ಪ್ರಸಾದ್, ಕಿನ್ನಾಳ್ ರಾಜ್ ಸಾಹಿತ್ಯದ ಮೂರು ಹಾಡುಗಳಿಗೆ ರಾಧಾಕೃಷ್ಣ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ದೇವು, ಸಂಕಲನ ಸುರೇಶ್ ಅರಸ್, ಸಾಹಸ ಕೌರವ ವೆಂಕಟೇಶ್, ನೃತ್ಯ ಕೆ.ಪಿ. ಶ್ರೀಕಾಂತ್ ಅವರದು. ಶ್ರೀ ಭೈರವೇಶ್ವರ ಕಂಬೈನ್ಸ್ ಬ್ಯಾನರ್ನಡಿ ಗಂಗಮ್ಮ ಶಿವಣ್ಣ ಬಿ.ಜಿ. ಬಂಡವಾಳ ಹೂಡಿದ್ದು, ಪಾರ್ಥ (ನಂದೀಶ್) ಸಹನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.