‘ಸೆಕೆಂಡ್ ಹಾಫ್’ ಚಿತ್ರದಲ್ಲಿ ಪೊಲೀಸ್ ಪೇದೆಯಾಗಿ ಕಾಣಿಸಿಕೊಂಡಿದ್ದ ನಟಿ ಪ್ರಿಯಾಂಕ ಉಪೇಂದ್ರ, ಇನ್ನಷ್ಟೇ ಬಿಡುಗಡೆಯಾಗಬೇಕಾಗಿರುವ ‘ಉಗ್ರಾವತಾರ’ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ಈ ರೀತಿ ತರೆಹವಾರಿ ಪಾತ್ರಗಳನ್ನು ನಿರ್ವಹಿಸುತ್ತಿರುವ ಪ್ರಿಯಾಂಕ ಈ ಬಾರಿ ಡಿಟೆಕ್ಟಿವ್ ಪಾತ್ರವೊಂದಕ್ಕೆ ಬಣ್ಣಹಚ್ಚಲಿದ್ದಾರೆ.
ತ್ರಿವಿಕ್ರಮ ರಘು ನಿರ್ದೇಶನದ ಚೊಚ್ಚಲ ಚಿತ್ರದಲ್ಲಿ ಪ್ರಿಯಾಂಕ ಅವರು ಡಿಟೆಕ್ಟಿವ್ ತೀಕ್ಷ್ಣ ಎಂಬ ಪಾತ್ರವನ್ನು ಮಾಡಲಿದ್ದಾರೆ. ಚಿತ್ರದ ಶೀರ್ಷಿಕೆಯನ್ನು ಶೀಘ್ರದಲ್ಲೇ ಘೋಷಣೆ ಮಾಡುವುದಾಗಿ ಚಿತ್ರತಂಡವು ತಿಳಿಸಿದೆ. ತ್ರಿವಿಕ್ರಮ ರಘು ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರವನ್ನು ಗೌತಮ್ ಸಿನಿಮಾಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಶ್ರೀದೇವಿ ಚಾಮುಂಡಿ ಸಿನಿ ಕ್ರಿಯೇಷನ್ಸ್ ನಿರ್ಮಾಣ ಮಾಡುತ್ತಿದೆ.
‘ಚಿತ್ರದ ನಾಯಕಿ, ಹೆಚ್ಚು ಬುದ್ದಿಶಕ್ತಿಯುಳ್ಳವಳು. ಎಲ್ಲರ ಮನಸ್ಸನ್ನು ಗ್ರಹಿಸುವ ಸಾಮರ್ಥ್ಯ ಹೊಂದಿರುತ್ತಾಳೆ. ಅಪರಾಧಿಗಳನ್ನು ಚಾಣಾಕ್ಷತನದಿಂದ ಹೇಗೆ ಪತ್ತೆಹಚ್ಚುತ್ತಾಳೆ ಎನ್ನುವುದೇ ಚಿತ್ರಕಥೆ. ಪ್ರಿಯಾಂಕ ಅವರು ಎಲ್ಲೂ ಈ ರೀತಿಯ ಪಾತ್ರ ಮಾಡಿಲ್ಲ. ಕನ್ನಡ ಮತ್ತು ತೆಲುಗು ಭಾಷೆಗೆ ಹೊಂದುವಂತಹ ಶೀರ್ಷಿಕೆ ಇಡಲಾಗುವುದು. ಮುಹೂರ್ತ ದಿನದಂದು ಶೀರ್ಷಿಕೆ ಅನಾವರಣಗೊಳಿಸುತ್ತೇವೆ’ ಎನ್ನುತ್ತಾರೆ ರಘು. ಮನುದಾಸಪ್ಪ ಛಾಯಾಗ್ರಹಣ ಚಿತ್ರಕ್ಕಿದ್ದು, ಬೆಂಗಳೂರು, ಮೂಡಿಗೆರೆ, ಚಿಕ್ಕಮಗಳೂರು ಮತ್ತು ಉಪ್ಪಿನಂಗಡಿ ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರತಂಡವು ನಿರ್ಧರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.