ADVERTISEMENT

ನಟ ಪುನೀತ್ ಪಾರ್ಥಿವ ಶರೀರದ ಅಂತಿಮ ಯಾತ್ರೆ: ಇಲ್ಲಿದೆ ಸಂಪೂರ್ಣ ಮಾಹಿತಿ

ಡಿಸಿಪಿಗಳಿಗೆ ಭದ್ರತೆಯ ಉಸ್ತುವಾರಿ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2021, 1:49 IST
Last Updated 31 ಅಕ್ಟೋಬರ್ 2021, 1:49 IST
   

ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ ಪಾರ್ಥಿವ ಶರೀರದ ಅಂತಿಮ ಯಾತ್ರೆ ಸಾಗುವ ಮಾರ್ಗದಲ್ಲಿ ಬಿಗಿ ಭದ್ರತೆ ಕೈಗೊಳ್ಳಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಯಾತ್ರೆ ಸಾಗುವ ಪ್ರತಿ ರಸ್ತೆಯಲ್ಲೂ ಭದ್ರತೆ ಉಸ್ತುವಾರಿಯನ್ನು ಒಬ್ಬೊಬ್ಬ ಡಿಸಿಪಿಗೆ ವಹಿಸಲಾಗಿದೆ.

ಕಂಠೀರವ ಕ್ರೀಡಾಂಗಣದಿಂದ ಕಂಠೀರವ ಸ್ಟುಡಿಯೊ ಬಳಿ ಇರುವ ಡಾ. ರಾಜ್‌ಕುಮಾರ್ ಸ್ಮಾರಕದವರೆಗೆ ಯಾತ್ರೆ ಸಾಗಲಿದೆ. ಇದಕ್ಕಾಗಿ ಭಾನುವಾರ ಬೆಳಿಗ್ಗೆ 5 ಗಂಟೆಯಿಂದಲೇ ಪ್ರತಿಯೊಂದು ರಸ್ತೆಯನ್ನು ಪೊಲೀಸರು ತಮ್ಮ ಸುಪರ್ದಿಗೆ ಪಡೆಯಲಿದ್ದಾರೆ. 12 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗುತ್ತಿದೆ.

‘ಪಾರ್ಥಿವ ಶರೀರವನ್ನು ತೆರೆದ ವಾಹನದಲ್ಲಿ ಕೊಂಡೊಯ್ಯಲಾಗುವುದು. ಮೆರವಣಿಗೆ ಸಾಗುವ ರಸ್ತೆಗಳನ್ನು ವಲಯಗಳಾಗಿ ವಿಂಗಡಿಸಲಾಗಿದೆ. ಪ್ರತಿ ವಲಯದ ಭದ್ರತೆ ಜವಾಬ್ದಾರಿಯನ್ನು ಡಿಸಿಪಿಗಳಿಗೆ ವಹಿಸಲಾಗಿದೆ. ಅವರ ಮುಂದಾಳತ್ವದಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘ಯಾತ್ರೆ ಸಾಗುವ ಸಂದರ್ಭದಲ್ಲಿ ಸಾರ್ವಜನಿಕರ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗುವುದು. ಇದರಿಂದ ದಟ್ಟಣೆ ಉಂಟಾಗುವ ಸಾಧ್ಯತೆ ಇದ್ದು, ಸಾರ್ವಜನಿಕರು ಸಹಕರಿಸಬೇಕು’ ಎಂದೂ ಕೋರಿದ್ದಾರೆ.

ಸ್ಟುಡಿಯೊದಲ್ಲೂ ಭದ್ರತೆ: ಪುನೀತ್ ಅಂತ್ಯಕ್ರಿಯೆ ನಡೆಯಲಿರುವ ಕಂಠೀರವ‌ ಸ್ಟುಡಿಯೊ ಬಳಿಯೂ‌ ಭದ್ರತೆ ಬಿಗಿಯಾಗಿದೆ. ಜನರನ್ನು ನಿಯಂತ್ರಿಸಲು ಬ್ಯಾರಿಕೇಡ್‌ಗಳನ್ನು ನಿಲ್ಲಿಸಲಾಗಿದೆ.

ಯಾತ್ರೆಗೆ ಪೊಲೀಸ್ ಬಲ

ಕಾನೂನು ಸುವ್ಯವಸ್ಥೆ ಪೊಲೀಸರು - 8,000

ಸಂಚಾರ ಪೊಲೀಸರು - 3,000

ಕೆಎಸ್‌ಆರ್‌ಪಿ ತುಕಡಿಗಳು - 60

ಸಿಎಆರ್/ಡಿಎಆರ್ ತುಕಡಿಗಳು - 35

ಆರ್‌ಎಎಫ್‌ ಕಂಪನಿ - 2

ಡಿಸಿಪಿ/ಎಸ್ಪಿಗಳು - 19

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.