ಮಾರ್ಚ್ 17ರಂದು ‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬ. ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಲು ಅಪ್ಪು ಅಭಿಮಾನಿಗಳು ಸಿದ್ಧತೆಯಲ್ಲಿ ಮುಳುಗಿದ್ದಾರೆ. ಆದರೆ, ಪುನೀತ್ ಮಾತ್ರ ‘ನಾನು ಮಾರ್ಚ್ 16ರ ರಾತ್ರಿ ಊರಿನಲ್ಲಿ ಇರುವುದಿಲ್ಲ. ದಯವಿಟ್ಟು ಮನೆಯ ಹತ್ತಿರ ಬರಬೇಡಿ. 17ರಂದು ಬೆಳಿಗ್ಗೆ ಬರುತ್ತೇನೆ. ನಿಮ್ಮೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ನನ್ನ ಪುಣ್ಯ’ ಎಂದು ಟ್ವೀಟ್ ಮಾಡಿದ್ದಾರೆ.
ಅಂದಹಾಗೆ ಅಭಿಮಾನಿಗಳಿಗೆ ಅಪ್ಪು ಉಪಯುಕ್ತ ಸಲಹೆಯನ್ನೂ ನೀಡಿದ್ದಾರೆ. ‘ಹಾರ, ಕೇಕ್, ಹೂಗುಚ್ಛಗಳನ್ನು ತರಬೇಡಿ. ಇದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡುತ್ತೀರಿ. ಪ್ರೀತಿ, ವಿಶ್ವಾಸದಿಂದ ಅದನ್ನು ತಂದಿರುತ್ತೀರಿ. ಅದು ನನಗೆ ತಲುಪದೇ ಇದ್ದಾಗ ನಿಮಗೆ ಬೇಸರವಾಗುತ್ತದೆ. ನೀವು ಎಲ್ಲಿಂದಲೋ ಬಂದು ನನ್ನನ್ನು ನೋಡಿಕೊಂಡು ಹೋಗುವುದೇ ನನಗೆ ದೊಡ್ಡ ಉಡುಗೊರೆ. ನನ್ನ ಜೀವನದಲ್ಲಿ ಇದನ್ನು ನಾನು ಯಾವತ್ತೂ ಮರೆಯುವುದಿಲ್ಲ. ಅದೇ ನನಗೆ ನೀವು ನೀಡುವ ದೊಡ್ಡ ಗಿಫ್ಟ್. ಹಾಗಾಗಿ, ಆ ಹಣವನ್ನು ನೀವೇ ಒಳ್ಳೆಯ ಕಾರ್ಯಕ್ಕೆ ಖರ್ಚು ಮಾಡಿಕೊಳ್ಳಿ. ಇಷ್ಟು ವರ್ಷಗಳ ಕಾಲ ನೀವು ನಮ್ಮನ್ನು ಬೆಳೆಸಿದ್ದಕ್ಕೆ ತುಂಬಾ ಧನ್ಯವಾದಗಳು’ ಎಂದು ಅಪ್ಪು ಟ್ವೀಟರ್ನಲ್ಲಿ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಹೇಳಿದ್ದಾರೆ.
‘ನಟಸಾರ್ವಭೌಮ ಚಿತ್ರ ನೋಡಿ ನೀವು ಇಷ್ಟಪಟ್ಟಿದ್ದೀರಿ. ಬೆಂಬಲ ನೀಡಿದ್ದೀರಿ. ಇನ್ನು ಮುಂದೆಯೂ ಒಳ್ಳೆಯ ಸಿನಿಮಾಗಳನ್ನು ನಿಮಗೆ ಕೊಡುತ್ತೇನೆ’ ಎಂದು ಭರವಸೆ ನೀಡಿದ್ದಾರೆ ಅಪ್ಪು.
‘ನಿಮ್ಮ ಪ್ರೀತಿ, ವಿಶ್ವಾಸ ನಮ್ಮ ಕುಟುಂಬ ಮತ್ತು ಚಿತ್ರರಂಗದ ಮೇಲೆ ಇದೇ ರೀತಿ ಇರಲಿ’ ಎಂದು ಅಭಿಮಾನಿಗಳಿಗೆ ಕೋರಿದ್ದಾರೆ.
ಪುನೀತ್ ನಟನೆಯ ‘ಯುವರತ್ನ’ ಚಿತ್ರದ ಶೂಟಿಂಗ್ ಈಗಾಗಲೇ ಆರಂಭಗೊಂಡಿದೆ. ಈ ಚಿತ್ರದ ಫಸ್ಟ್ಲುಕ್ ಕೂಡ ಅವರ ಹುಟ್ಟುಹಬ್ಬದ ದಿನದಂದೇ ಬಿಡುಗಡೆಯಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.