ಹೈದರಾಬಾದ್ ಜೈಲಿನಿಂದ ಬಿಡುಗಡೆಯಾಗಿ ಮನೆಗೆ ಬಂದ ನಟ ಅಲ್ಲು ಅರ್ಜುನ್ ಅವರು ಶನಿವಾರ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದು ಹೀಗೆ
–ಪಿಟಿಐ ಚಿತ್ರ
ಹೈದರಾಬಾದ್: ನಟ ಅಲ್ಲು ಅರ್ಜುನ್ ಅವರನ್ನು ರಾತ್ರಿಯಿಡೀ ಜೈಲಿನಲ್ಲಿ ಕಳೆಯುವಂತೆ ಮಾಡಿದ್ದು ಅಕ್ರಮ ಎಂದು ಹೇಳಿರುವ ಅವರ ಪರ ವಕೀಲರು, ಕಾನೂನು ಹೋರಾಟ ನಡೆಸುವುದಾಗಿ ಶನಿವಾರ ತಿಳಿಸಿದರು.
‘ತೆಲಂಗಾಣ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದ್ದ ಪ್ರತಿಯನ್ನು ನೀಡಿದರೂ ಜೈಲಿನ ಅಧಿಕಾರಿಗಳು ಪ್ರಕ್ರಿಯೆಗಳು ಪೂರ್ಣಗೊಳಿಸಲು ವಿಳಂಬ ಮಾಡಿದರು. ಇದರಿಂದ ಅಲ್ಲು ಅರ್ಜುನ್ ಶುಕ್ರವಾರ ರಾತ್ರಿಯಿಡೀ ಜೈಲಿನಲ್ಲಿ ಕಳೆಯುವಂತಾಯಿತು. ಇದರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇವೆ’ ಎಂದು ಅವರ ಪರ ವಕೀಲ ಅಶೋಕ್ ರೆಡ್ಡಿ ತಿಳಿಸಿದರು.
‘ಅಲ್ಲು ಅವರನ್ನು ಅಕ್ರಮವಾಗಿ ಬಂಧನದಲ್ಲಿ ಇಡಲಾಗಿತ್ತು’ ಎಂದು ಅವರು ಹೇಳಿದರು.
ಕಾಲ್ತುಳಿತದಿಂದ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಬಂಧನಕ್ಕೆ ಒಳಗಾಗಿದ್ದ ತೆಲುಗು ನಟ, ‘ಪುಷ್ಪ’ ಸಿನಿಮಾ ಖ್ಯಾತಿಯ ಅಲ್ಲು ಅರ್ಜುನ್ ಅವರು ಶನಿವಾರ ಜೈಲಿನಿಂದ ಬಿಡುಗಡೆಯಾದರು.
ಚಿಕ್ಕಡಪಲ್ಲಿ ಪೊಲೀಸರು ಶುಕ್ರವಾರ ಮಧ್ಯಾಹ್ನದ ನಂತರ ಅಲ್ಲು ಅರ್ಜುನ್ ಅವರ ಜ್ಯುಬಿಲಿ ಹಿಲ್ಸ್ನಲ್ಲಿರುವ ಮನೆಗೆ ಹೋಗಿ ಅವರನ್ನು ಬಂಧಿಸಿ, ಸ್ಥಳೀಯ ಕೋರ್ಟ್ಗೆ ಹಾಜರುಪಡಿಸಿದ್ದರು. ಕೋರ್ಟ್ ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಬಳಿಕ, ತೆಲಂಗಾಣ ಹೈಕೋರ್ಟ್ ಸಂಜೆಯ ಹೊತ್ತಿಗೆ ನಾಲ್ಕು ವಾರಗಳ ಮಧ್ಯಂತರ ಜಾಮೀನನ್ನು ಮಂಜೂರು ಮಾಡಿತು. ಜಾಮೀನಿನ ಪ್ರತಿ ತಡರಾತ್ರಿಯವರೆಗೂ ಜೈಲಿನ ಅಧಿಕಾರಿಗಳಿಗೆ ತಲುಪದ ಕಾರಣ, ಅಲ್ಲು ಅರ್ಜುನ್ ಅವರು ಶುಕ್ರವಾರ ರಾತ್ರಿ ಜೈಲಿನಲ್ಲೇ ಕಳೆದರು.
‘ಅವರು ಜೈಲಿನಿಂದ ಬಿಡುಗಡೆಯಾದರು’ ಎಂದು ಅವರ ಪರ ವಕೀಲ ಅಶೋಕ್ ರೆಡ್ಡಿ ತಿಳಿಸಿದರು.
ಮನೆಗೆ ಬಂದ ಬಳಿಕ ಅಭಿಮಾನಿಗಳು, ಬೆಂಬಲಿಗರಿಗೆ ಅಲ್ಲು ಅರ್ಜುನ್ ಧನ್ಯವಾದ ಸಲ್ಲಿಸಿದರು. ಚಿತ್ರರಂಗದ ಹಲವು ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು, ತಾಂತ್ರಿಕ ವರ್ಗದ ಸಿಬ್ಬಂದಿ ಭೇಟಿಯಾಗಿ ಅವರಿಗೆ ಧೈರ್ಯ ತುಂಬಿದರು.
ನೇರ ಸಂಬಂಧವಿಲ್ಲ: ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಲ್ಲು ಅರ್ಜುನ್, ‘ಮಹಿಳೆ ಮೃತಪಟ್ಟಿದ್ದಕ್ಕೂ ನನಗೂ ನೇರ ಸಂಬಂಧವಿಲ್ಲ. ನಾನು ಕುಟುಂಬದ ಸದಸ್ಯರ ಜೊತೆ ಥಿಯೇಟರ್ ಒಳಗೆ ಸಿನಿಮಾ ನೋಡುತ್ತಿದ್ದೆ. ಹೊರಗಡೆ ಅವಘಡ ಸಂಭವಿಸಿದೆ. ಇದೂ ಆಕಸ್ಮಿಕವಾಗಿ ನಡೆದಿದ್ದು, ಯಾವುದೇ ದುರುದ್ದೇಶ ಹೊಂದಿರಲಿಲ್ಲ. ಸಂತ್ರಸ್ತ ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡಲು ಸಿದ್ಧನಿದ್ದೇನೆ’ ಎಂದರು.
‘ನಾನು ಈ ದೇಶದ ಕಾನೂನು ಪಾಲಿಸುತ್ತೇನೆ. ವಿಚಾರಣೆಗೆ ಸಹಕಾರ ನೀಡುತ್ತೇನೆ. ಘಟನೆ ದುರದೃಷ್ಟಕರ. ಸದ್ಯಕ್ಕೆ ಕಾನೂನು ಕ್ರಮದ ಕುರಿತು ಹೆಚ್ಚು ಮಾತನಾಡುವುದಿಲ್ಲ’ ಎಂದು ಹೇಳಿದರು.
‘ನನ್ನ ಕುಟುಂಬದ ಪಾಲಿಗೆ ಅತ್ಯಂತ ಸವಾಲಿನ ಸಮಯವಾಗಿದೆ’ ಎಂದರು.
ಸಂಧ್ಯಾ ಚಿತ್ರಮಂದಿರದಲ್ಲಿ ‘ಪುಷ್ಪ 2: ದಿ ರೂಲ್’ ಸಿನಿಮಾದ ಪ್ರೀಮಿಯರ್ ಪ್ರದರ್ಶನ
ನಡೆಯುತ್ತಿದ್ದಾಗ ಉಂಟಾದ ನೂಕುನುಗ್ಗಲು ಮತ್ತು ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣದಲ್ಲಿ ಅವರನ್ನು ಶುಕ್ರವಾರ ಬಂಧಿಸಲಾಗಿತ್ತು.
ಅಲ್ಲು ಅರ್ಜುನ್ ಅವರು ಆ ಸಂದರ್ಭದಲ್ಲಿ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆಗೂಡಿ ಸಿನಿಮಾ ವೀಕ್ಷಿಸಿದ್ದರು. ತಮ್ಮ ನೆಚ್ಚಿನ ನಟನನ್ನು ನೋಡಲು ಸಾವಿರಾರು ಜನರು ನುಗ್ಗಿ ಬಂದ ಕಾರಣ ಕಾಲ್ತುಳಿತ ಉಂಟಾಗಿತ್ತು. 35 ವರ್ಷದ ರೇವತಿ ಎಂಬ ಮಹಿಳೆ ಮೃತಪಟ್ಟರೆ ಅವರ ಮಗ 9 ವರ್ಷದ ಶ್ರೀತೇಜ್ ಗಾಯಗೊಂಡಿದ್ದಾನೆ. ಚಿಕ್ಕಡಪಲ್ಲಿ ಪೊಲೀಸರು ಸಂಧ್ಯಾ ಚಿತ್ರಮಂದಿರ, ಅಲ್ಲು ಅರ್ಜುನ್ ಮತ್ತು ಅವರ ಭದ್ರತಾ ಸಿಬ್ಬಂದಿ ಮೇಲೆ ಈ ಕಾಲ್ತುಳಿತದ ಬಳಿಕ ದೂರು ದಾಖಲಿಸಿಕೊಂಡಿದ್ದಾರೆ.
ಸಾರ್ವಜನಿಕ ಸುರಕ್ಷತೆ ಕಾಯ್ದುಕೊಳ್ಳುವಲ್ಲಿ ವೈಫಲ್ಯ ಮತ್ತು ನಿರ್ಲಕ್ಷ್ಯ ತೋರಲಾಗಿದೆ ಎಂದು ಪ್ರಕರಣ ದಾಖಲಿಸಲಾಗಿದೆ.
20 ವರ್ಷಗಳಲ್ಲಿ 30 ಸಲ ಅದೇ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದೇನೆ. ಎಂದೂ ಇಂತಹ ಅವಘಡ ಸಂಭವಿಸಿರಲಿಲ್ಲಅಲ್ಲು ಅರ್ಜುನ್ ನಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.