ಎಸ್. ಸುಪ್ರೀತ್ ನಿರ್ದೇಶನದ, ರವಿಚಂದ್ರನ್ ಮುಖ್ಯಭೂಮಿಕೆಯಲ್ಲಿರುವ ಹೊಸ ಚಿತ್ರದ ಶೀರ್ಷಿಕೆ ಇತ್ತೀಚೆಗೆ ಅನಾವರಣಗೊಂಡಿತು. ಚಿತ್ರಕ್ಕೆ ‘ಪ್ಯಾರ್’ ಎಂದು ಹೆಸರಿಡಲಾಗಿದ್ದು, ಭರತ್ ಹಾಗೂ ರಾಶಿಕಾ ಶೆಟ್ಟಿ ನಾಯಕ, ನಾಯಕಿಯಾಗಿ ಬಣ್ಣಹಚ್ಚಿದ್ದಾರೆ.
ಎಸ್.ಎಂ. ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಚ್. ಎಸ್. ನಾಗಶ್ರೀ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸುಪ್ರೀತ್ ಕಥೆ, ಚಿತ್ರಕಥೆ ಬರೆದಿದ್ದಾರೆ. ‘ಪ್ರೀತಿಯ ಒಂದು ಭಾವನಾತ್ಮಕ ಪಯಣ’ ಎಂಬ ಅಡಿಬರಹ ಚಿತ್ರಕ್ಕಿದೆ. ‘ಪ್ರೀತಿಗೆ ಇರುವ ಬೆಲೆಯೇ ಬೇರೆ ಎಂದು ಈ ಚಿತ್ರದ ಮೂಲಕ ಹೇಳಹೊರಟಿದ್ದಾರೆ. ನಾನಿಲ್ಲಿ ನಾಯಕಿಯ ತಂದೆಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದು ಪಾತ್ರದ ಬಗ್ಗೆ ರವಿಚಂದ್ರನ್ ಚುಟುಕಾಗಿ ಹೇಳಿದರು.
‘ಈಗಾಗಲೇ ಶೇ 80ರಷ್ಟು ಶೂಟಿಂಗ್ ಪೂರ್ಣಗೊಂಡಿದೆ. ಪ್ರೀತಿ ಪ್ರೇಮದ ಕಥೆಯ ಜೊತೆಗೆ ತಂದೆ ಮಗಳ ನಡುವಿನ ಭಾವನಾತ್ಮಕ ಸಂಬಂಧ ತೆರೆದಿಡುವಂಥ ಭಿನ್ನವಾದ ಕಥೆಯುಳ್ಳ ಸಿನಿಮಾವಿದು. ಕಾಶ್ಮೀರ, ರಾಜಸ್ಥಾನ, ಅಂಡಮಾನ್ ದ್ವೀಪ, ಮಂಗಳೂರು, ಚಿಕ್ಕಮಗಳೂರು, ಮೈಸೂರು ಹಾಗೂ ಬೆಂಗಳೂರು ಸುತ್ತಮುತ್ತ 70ಕ್ಕೂ ಹೆಚ್ಚು ದಿನಗಳ ಚಿತ್ರೀಕರಣ ನಡೆಸಿದ್ದೇವೆ. ತಂದೆಗೋಸ್ಕರ ಮಗಳು ಯಾವ ರೀತಿ ಪ್ರಾಣವನ್ನೇ ಮುಡಿಪಾಗಿಡುತ್ತಾಳೆ ಎಂಬುವುದನ್ನು ಚಿತ್ರದಲ್ಲಿ ತೋರಿಸಿದ್ದೇವೆ’ ಎಂದರು ಸುಪ್ರೀತ್.
ಚಿತ್ರಕ್ಕೆ ಕೆ.ಎಸ್. ಚಂದ್ರಶೇಖರ್ ಛಾಯಾಚಿತ್ರಗ್ರಹಣ, ಪಳನಿ ಡಿ. ಸೇನಾಪತಿ ಸಂಗೀತ ಸಂಯೋಜನೆಯಿದೆ. ಶ್ರೀನಿವಾಸಮೂರ್ತಿ, ವಿಜಯಸೂರ್ಯ, ಶಂಕರ್ ಅಶ್ವಥ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.