ADVERTISEMENT

ರಾಬರ್ಟ್‌ ರಾಣಿಯ ಮಾತು

ಕೆ.ಎಂ.ಸಂತೋಷ್‌ ಕುಮಾರ್‌
Published 18 ಮಾರ್ಚ್ 2020, 6:15 IST
Last Updated 18 ಮಾರ್ಚ್ 2020, 6:15 IST
ಆಶಾ ಭಟ್‌
ಆಶಾ ಭಟ್‌   
""
""

ಬಾಲಿವುಡ್‌ನ ‘ಜಂಗ್ಲಿ’ ಸಿನಿಮಾದಲ್ಲಿ ವಿದ್ಯುತ್‌ ಜಮ್ಬಾಲ್‌ ಜತೆಗೆ ತೆರೆ ಹಂಚಿಕೊಂಡಿದ್ದ ಕರ್ನಾಟಕ ಮೂಲದ ‘ಬ್ಯೂಟಿ ಪ್ಯಾಜೆಂಟ್‌’ ಆಶಾ ಭಟ್‌, ದರ್ಶನ್‌ ನಟನೆಯ ‘ರಾಬರ್ಟ್’ನ ರಾಣಿ. ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿರುವ ಇವರಿಗೆ ಕನ್ನಡದ ಸಿನಿರಸಿಕರ ಹೃದಯಲ್ಲಿ ಜಾಗ ಗಿಟ್ಟಿಸುವ ಹಂಬಲ.

‘ಸಿನಿಮಾ ಶೂಟಿಂಗ್‌ ಬೇಗನೆ ಮುಗಿದುಹೋಯಿತು’ ಎನ್ನುವ ಬೇಸರದಲ್ಲಿರುವ ಆಶಾ ‘ಪ್ರಜಾಪ್ಲಸ್‌’ ಜತೆ ಮಾತಿಗೆ ಸಿಕ್ಕಿದ್ದರು.

‘ಇದೊಂದು ಲಾಂಗ್‌ ಜರ್ನಿ, ಶೂಟಿಂಗ್‌ ಅನುಭವ ಸಖತ್‌ ಆಗಿತ್ತು. ಹಿಂದಿಯಲ್ಲಿ ಮೊದಲು ಅವಕಾಶ ಬಂದಿದ್ದರಿಂದ ಬಾಲಿವುಡ್‌ನಲ್ಲಿ ನಟಿಸಿದೆ. ನನ್ನ ತಾಯ್ನಾಡಿನ ಪ್ರೇಕ್ಷಕರನ್ನು ಮನರಂಜಿಸುವ ಅವಕಾಶ ಈ ಸಿನಿಮಾ ಮೂಲಕ ಸಿಗುತ್ತಿರುವುದಕ್ಕೆ ನಿರ್ದೇಶಕ ತರುಣ್‌ ಸುಧೀರ್‌ ಮತ್ತು ನಾಯಕ ನಟ ದರ್ಶನ್‌ ಸರ್‌ ತಂಡವನ್ನು ಕೃತಜ್ಞತೆಯಿಂದ ನೆನೆಯುತ್ತೇನೆ. ಇವರೆಲ್ಲರ ಜೊತೆ ಸೆಟ್‌ನಲ್ಲಿ ಕಳೆದ ಪ್ರತಿ ಕ್ಷಣವನ್ನೂ ನಾನು ಮಿಸ್‌ ಮಾಡಿಕೊಳ್ಳುತ್ತೇನೆ’ ಎಂದು ಮಾತು ಸೇರಿಸಿದರು.

ADVERTISEMENT

ರಾಬರ್ಟ್‌ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಗುಟ್ಟು ಬಿಟ್ಟುಕೊಡದಿರುವ ಈ ಚೆಲುವೆ, ‘ನನ್ನ ಪಾತ್ರ ಅತೀ ಮುಖ್ಯವಾದದ್ದು. ಪಾತ್ರದ ಹೆಸರು, ಚಿತ್ರದ ಕಥೆ ಒಂದಕ್ಕೊಂದು ಬೆಸೆದುಕೊಂಡಿರುವುದರಿಂದ ನಾನು ಈಗಲೇ ಏನೂ ಹೇಳುವುದಿಲ್ಲ. ಸೆಪ್ಟೆಂಬರ್‌ನಿಂದಲೂ ಶೂಟಿಂಗ್‌ನಲ್ಲಿದ್ದೇನೆ ಎಂದರೆ ಪಾತ್ರದ ಮಹತ್ವವನ್ನು ನೀವೆ ಊಹಿಸಿ. ತರುಣ್‌ ಸರ್‌ ಒಪ್ಪಿಗೆ ಕೊಡುವವರೆಗೂ ಪಾತ್ರದ ಬಗ್ಗೆ ಬಾಯಿಬಿಡುವುದಿಲ್ಲ. ದರ್ಶನ್‌ ಸರ್‌ ಮತ್ತು ನಾವೆಲ್ಲರೂ ಚಿತ್ರೀಕರಣದ ವೇಳೆ ಮೊಬೈಲ್‌ ಕೂಡ ನೋಡಿಲ್ಲವೆಂದರೆ ಚಿತ್ರ ಮತ್ತು ಪಾತ್ರಗಳ ಬಗ್ಗೆ ಎಷ್ಟೊಂದು ಗುಟ್ಟು ಕಾಯ್ದುಕೊಂಡಿದ್ದೇವೆ ಎನ್ನುವುದನ್ನು ಊಹಿಸಿ’ ಎಂದು ಮಾತು ವಿಸ್ತರಿಸಿದರು.

ರಾಬರ್ಟ್‌ಗೆ ರಾಣಿಯಾಗುವ ಅವಕಾಶ ಸಿಕ್ಕ ಬಗ್ಗೆ ಮಾತು ಹೊರಳಿಸಿದ ಇವರು,ತರುಣ್‌ ಸರ್‌ ಒಂದು ದಿನ ನನಗೆ ಕರೆ ಮಾಡಿ, ಕಥೆಯ ಒಂದು ಎಳೆ ಮತ್ತು ಸ್ಕ್ರಿಪ್ಟ್‌ ನಿರೂಪಿಸಿದರು.ಪಾತ್ರದ ಬಗ್ಗೆಯೂ ತಿಳಿಸಿದಾಗ ಇಂತಹ ಅವಕಾಶ ಬಿಡಬಾರದೆಂದು ಮರು ದಿನವೇ ಒಪ್ಪಿಗೆ ನೀಡಿದೆ ಎಂದರು ಆಶಾ.

ಸಿನಿಮಾ ರಂಗದಿಂದ ಏನು ಕಲಿತುಕೊಂಡಿರಿ ಎಂದರೆ,ಎಲ್ಲಕ್ಕಿಂತ ಮುಖ್ಯವಾಗಿ ತಾಳ್ಮೆಯನ್ನು ಈ ರಂಗ ಕಲಿಸಿದೆ. ಜತೆಗೆ ನಮಗೆ ನೆರವು ನೀಡಿದವರನ್ನು ಎಂದಿಗೂ ಮರೆಯಬಾರದೆನ್ನುವ ಉಪಕಾರ ಸ್ಮರಣೆಯನ್ನು ಕಲಿಸಿದೆ. ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ಕಷ್ಟಪಡುವವರಿಗೆ ನೆರವು ನೀಡಬೇಕು ಎನ್ನುವುದನ್ನು ಕಲಿಸಿದೆ. ನಾನು ಈ ಸ್ಥಾನಕ್ಕೆ ಎಷ್ಟು ಕಷ್ಟಪಟ್ಟು ಬಂದಿದ್ದೇನೆ ಎನ್ನುವುದು ನನಗೆ ಗೊತ್ತಿದೆ. ನನ್ನಂತೆ ರೂಪದರ್ಶಿಯಾಗುವ ಮತ್ತು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಬೇಕೆನ್ನುವವರಿಗೆ ನನ್ನ ಕೈಲಾದ ನೆರವು, ಮಾರ್ಗದರ್ಶನ ಕೊಡುತ್ತೇನೆ ಎನ್ನಲು ಅವರು ಮರೆಯಲಿಲ್ಲ.

ಭದ್ರಾವತಿಯ ಚೆಲುವೆ

ಆಶಾ ಭಟ್ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರು. ಸದ್ಯ ಮುಂಬೈನಲ್ಲಿ ನೆಲೆ ನಿಂತಿದ್ದಾರೆ. ಆರ್‌ವಿಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ವಿದ್ಯಾರ್ಥಿನಿಯಾಗಿದ್ದಾಗಲೇ ಫ್ಯಾಷನ್ ಲೋಕ ಇವರನ್ನು ಕೈಬೀಸಿ ಕರೆಯಿತು.2014ರಲ್ಲಿ ಪೊಲೆಂಡ್‌ನಲ್ಲಿ ನಡೆದ ಮಿಸ್ ಸುಪ್ರಾ ಇಂಟರ್ ನ್ಯಾಷನಲ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಮಿಸ್ ಸುಪ್ರಾ ಇಂಟರ್ ನ್ಯಾಷನಲ್ ಕಿರೀಟ ಮುಡಿಗೇರಿಸಿಕೊಂಡ ಮೊದಲ ಭಾರತೀಯ ನಾರಿ ಎನ್ನುವ ಹೆಗ್ಗಳಿಕೆ ಇವರದ್ದು.ರೂಪದರ್ಶಿಯಾಗಿಜಾಹೀರಾತು ಪ್ರಪಂಚಕ್ಕೆ ಅಡಿ ಇಟ್ಟರು. ಎಂಜಿನಿಯರಿಂಗ್‌ ಶಿಕ್ಷಣ ಮುಗಿಯುತ್ತಿದ್ದಂತೆ ಬಾಲಿವುಡ್‌ನಿಂ‌ದ ಸಿನಿ ಪಯಣ ಆರಂಭಿಸಿದರು. ಈಗ ಸ್ಯಾಂಡಲ್‌ವುಡ್‌ಗೂ ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.