ADVERTISEMENT

ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿರುವ ಬಾಲಕನಿಗೆ ಧೈರ್ಯ ಹೇಳಿದ ರಜನಿ

​ಪ್ರಜಾವಾಣಿ ವಾರ್ತೆ
Published 23 ಮೇ 2020, 8:05 IST
Last Updated 23 ಮೇ 2020, 8:05 IST
ರಜನಿಕಾಂತ್
ರಜನಿಕಾಂತ್   

ಬೆಂಗಳೂರು: ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿರುವ ಬಾಲಕನೊಬ್ಬನಿಗೆ ದೂರವಾಣಿ ಕರೆ ಮಾಡಿರುವ ಸೂಪರ್‌ಸ್ಟಾರ್ ರಜನಿಕಾಂತ್, ಆ ಬಾಲಕನಿಗೆ ಧೈರ್ಯ ಹೇಳುವ ಕೆಲಸ ಮಾಡಿದ್ದಾರೆ. ‘ಹುಷಾರಾದ ನಂತರ ಚೆನ್ನೈಗೆ ಬಾ. ನಾವಿಬ್ಬರೂ ಭೇಟಿಯಾಗೋಣ’ ಎಂದೂ ಆ ಬಾಲಕನಲ್ಲಿ ಹೇಳಿದ್ದಾರೆ.

ಕ್ಯಾನ್ಸರ್‌ಗೆ ತುತ್ತಾಗಿರುವ ಈ ಬಾಲಕನ ಹೆಸರು ಕೆವಿನ್. ಈತ ಈಗ ಬೆಂಗಳೂರಿನ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಾಲಕನಿಗೆ ರಜನಿಕಾಂತ್ ಜೊತೆ ಮಾತನಾಡುವ ಆಸೆ ಇತ್ತು. ಈ ಆಸೆ ಈಡೇರುವಂತೆ ಮಾಡಿದ್ದು ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯ.

‘ಬಾಲಕ ಕೆವಿನ್ ವಿಚಾರ ನನಗೆ ನನ್ನ ಸಂಬಂಧಿಕರಿಂದ ಗೊತ್ತಾಯಿತು. ರಜನಿಕಾಂತ್ ಅವರು ನಮಗೆ ಸಂಬಂಧಿ ಕೂಡ ಹೌದು. ಹಾಗಾಗಿ, ಬಾಲಕನ ಆಸೆ ಈಡೇರಿಸೋಣ ಎಂದು ನಾನು ರಜನಿಕಾಂತ್ ಅವರಿಗೆ ಕರೆ ಮಾಡಿ, ವಿಷಯ ತಿಳಿಸಿದೆ. ಅವರು ನನ್ನ ಮಾತಿಗೆ ಸ್ಪಂದಿಸಿ, ಬಾಲಕನಿಗೆ ಕರೆ ಮಾಡಿದ್ದರು’ ಎಂದು ಸಿಂಧ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಹುಡುಗನ ತಂದೆಯ ಹೆಸರು ಮುತ್ತುರಾಮನ್. ಇವರು ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

‘ಕೆವಿನ್ ಪರವಾಗಿ ತಾವು ಪ್ರಾರ್ಥಿಸುವುದಾಗಿ ರಜನಿಕಾಂತ್ ಹೇಳಿದ್ದಾರೆ. ಕೆವಿನ್‌ನ ಆರೋಗ್ಯ ಹಾಗೂ ಅವನಿಗೆ ನೀಡುತ್ತಿರುವ ಚಿಕಿತ್ಸೆಯ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.