‘ಸೂಪರ್ ಸ್ಟಾರ್’ ರಜನಿಕಾಂತ್ ನಟನೆಯ ‘ದರ್ಬಾರ್’ ಸಿನಿಮಾ ಬಾಕ್ಸ್ಆಫೀಸ್ನಲ್ಲಿ ಒಳ್ಳೆಯ ಗಳಿಕೆ ಮಾಡಲಿಲ್ಲ. ಕೊನೆಗೆ, ನಷ್ಟ ತುಂಬಿಕೊಡುವಂತೆ ವಿತರಕರು ತಲೈವನ ಮನೆಯ ಬಾಗಿಲು ಬಡಿದಿದ್ದೂ ಆಯಿತು. ಈ ನಡುವೆಯೇ ಸಿರುಥೈ ಶಿವ ನಿರ್ದೇಶನದ ‘ಅಣ್ಣಾತೆ’ ಚಿತ್ರದಲ್ಲಿ ರಜನಿ ಅಭಿನಯಿಸುತ್ತಿದ್ದಾರೆ. ಇದು ಅವರ ನಟನೆಯ 168ನೇ ಸಿನಿಮಾ.
ಇದರಲ್ಲಿ ಅವರಿಗೆ ನಟಿ ನಯನತಾರಾ ಜೋಡಿಯಾಗಿದ್ದಾರೆ. ಸನ್ ಪಿಕ್ಚರ್ ಇದಕ್ಕೆ ಬಂಡವಾಳ ಹೂಡಿದೆ. ಮೀನಾ, ಖುಷ್ಬೂ, ಪ್ರಕಾಶ್ ರಾಜ್, ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ.
ಕೊರೊನಾ ಸೋಂಕಿನ ಭೀತಿಯು ‘ಅಣ್ಣಾತೆ’ ಅರ್ಥಾತ್ ‘ಅಣ್ಣಯ್ಯ’ನಿಗೂ ತಟ್ಟಿದೆ. ಸದ್ಯಕ್ಕೆ ತಲೈವ ಶೂಟಿಂಗ್ನಿಂದ ಬಿಡುವು ಪಡೆದಿದ್ದಾರೆ. ಈ ನಡುವೇ ಅವರು ನಟಿಸಲಿರುವ ಮುಂದಿನ ಎರಡು ಸಿನಿಮಾಗಳೂ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಮುನ್ನುಡಿ ಬರೆದಿವೆ.
ರಜನಿಕಾಂತ್ ನಟನೆಯ 169ನೇ ಸಿನಿಮಾಕ್ಕೆ ಲೋಕೇಶ್ ಕನಗರಾಜ್ ಆ್ಯಕ್ಷನ್ ಕಟ್ ಹೇಳಲಿದ್ದು, ಕಮಲ್ ಹಾಸನ್ ಇದಕ್ಕೆ ಬಂಡವಾಳ ಹೂಡಲಿದ್ದಾರೆ ಎನ್ನಲಾಗಿದೆ. ಆದರೆ, ಈ ಚಿತ್ರದ ಸ್ಕ್ರಿಪ್ಟ್ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಪ್ರಸ್ತುತ ಲೋಕೇಶ್ ಅವರು ದಳಪತಿ ವಿಜಯ್ ನಟನೆಯ ‘ಮಾಸ್ಟರ್’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಮತ್ತೊಂದೆಡೆ ಛಾಯಾಗ್ರಹಣದಿಂದ ನಿರ್ದೇಶನದತ್ತ ಹೊರಳಿರುವ ರಾಘವ ಲಾರೆನ್ಸ್ ಅವರು ರಜನಿಯ 170ನೇ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ರಾಘವ ಅವರು ತಲೈವನ ಅಪ್ಪಟ ಅಭಿಮಾನಿಯೂ ಹೌದು. ಈಗಾಗಲೇ, ಕಥೆಯ ಎಳೆಯನ್ನು ಅವರು ಸೂಪರ್ ಸ್ಟಾರ್ಗೆ ಹೇಳಿದ್ದಾರಂತೆ. ಇದರ ಬಗ್ಗೆ ರಜನಿ ಕೂಡ ಕುತೂಹಲಭರಿತರಾಗಿದ್ದಾರೆ ಎಂಬುದು ಕಾಲಿವುಡ್ ಅಂಗಳದ ಹೊಸ ಸುದ್ದಿ. ಆದರೆ, ಈ ಸಿನಿಮಾದ ಬಗ್ಗೆ ರಜನಿ ಅಧಿಕೃತವಾಗಿ ಒಪ್ಪಿಗೆ ಸೂಚಿಸಿದ್ದಾರೆಯೇ ಎಂಬುದು ಇನ್ನೂ ಅಧಿಕೃತಗೊಂಡಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.