ADVERTISEMENT

ರಾಜವೀರ ಮದಕರಿನಾಯಕ: ದರ್ಶನ್‌ಗೆ ರಮ್ಯಾ ನಾಯಕಿಯಲ್ಲ...

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 8:56 IST
Last Updated 29 ಜನವರಿ 2020, 8:56 IST
‘ರಾಜವೀರ ಮದಕರಿನಾಯಕ’ ಸಿನಿಮಾದ ಪೋಸ್ಟರ್‌
‘ರಾಜವೀರ ಮದಕರಿನಾಯಕ’ ಸಿನಿಮಾದ ಪೋಸ್ಟರ್‌   

ನಟ ದರ್ಶನ್ ‘ರಾಜವೀರ ಮದಕರಿನಾಯಕ’ ಚಿತ್ರದಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತು. ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿರುವುದು ಎಸ್‌.ವಿ. ರಾಜೇಂದ್ರಸಿಂಗ್‌ ಬಾಬು. ಕಳೆದ ವರ್ಷದ ಡಿಸೆಂಬರ್‌ನಲ್ಲಿಯೇ ಇದರ ಮುಹೂರ್ತ ನೆರವೇರಿತ್ತು. ಈಗ ಕೇರಳದ ತ್ರಿಶೂರ್‌ ಜಿಲ್ಲೆಯ ಚಾಲುಕುಡಿ ಜಲಪಾತ ಪ್ರದೇಶದಲ್ಲಿ ಸಿನಿಮಾದ ಮೊದಲ ಹಂತದ ಶೂಟಿಂಗ್‌ ನಡೆಸಲು ಚಿತ್ರತಂಡ ಸಿದ್ಧತೆ ನಡೆಸಿದೆ. ಇಲ್ಲಿ ಮದಕರಿನಾಯಕನ ಗುರುಕುಲದ ಸೆಟ್‌ ಹಾಕಲಾಗುತ್ತದೆಯಂತೆ.

ಎಸ್‌.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ–ದಿ ಬಿಗಿನಿಂಗ್‌’ ಚಿತ್ರದ ಶೂಟಿಂಗ್‌ ನಡೆದಿದ್ದು ಇಲ್ಲಿಯೇ. ಪ್ರಸ್ತುತ ಈ ಪ್ರದೇಶದಲ್ಲಿ ಇಂಗ್ಲಿಷ್‌ ಚಿತ್ರವೊಂದರ ಶೂಟಿಂಗ್ ನಡೆಯುತ್ತಿದೆಯಂತೆ. ಈ ಚಿತ್ರೀಕರಣ ಪೂರ್ಣಗೊಂಡ ಬಳಿಕ ಮದಕರಿನಾಯಕ ಚಿತ್ರದ ಸೆಟ್‌ ನಿರ್ಮಾಣವಾಗಲಿದೆ. ‘ಮುನಿರತ್ನ ಕುರುಕ್ಷೇತ್ರ’ ಚಿತ್ರಕ್ಕೆ ಸೆಟ್‌ ನಿರ್ಮಿಸಿದ್ದ ಹೈದರಾಬಾದ್‌ನ ಕಿರಣ್‌ ಅವರೇ ಇದಕ್ಕೂ ಕಲಾ ನಿರ್ದೇಶನ ಮಾಡಲಿದ್ದಾರೆ.

ನಟಿ ಹಾಗೂ ರಾಜಕಾರಣಿ ರಮ್ಯಾ ಈ ಚಿತ್ರದಲ್ಲಿ ದರ್ಶನ್‌ ಅವರಿಗೆ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆಕೆ ನಟಿಸುತ್ತಿಲ್ಲ ಎಂದು ಚಿತ್ರತಂಡ ಹೇಳಿದೆ. ‘ಇದೊಂದು ಸುಳ್ಳು ಸುದ್ದಿ. ಇಂತಹ ಸುದ್ದಿಗಳನ್ನು ಯಾರು ಹಬ್ಬಿಸುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ದರ್ಶನ್‌ ಅವರ ಎತ್ತರಕ್ಕೆ ಸೂಕ್ತವಾದ ನಾಯಕಿಯ ಹುಡುಕಾಟ ನಡೆದಿದೆ. ಪಾತ್ರವರ್ಗ ಆಯ್ಕೆಯು ಇನ್ನೂ ಅಂತಿಮಗೊಂಡಿಲ್ಲ’ ಎಂದು ನಿರ್ದೇಶಕ ಎಸ್‌.ವಿ. ರಾಜೇಂದ್ರಸಿಂಗ್‌ ಬಾಬು ಸ್ಪಷ್ಟಪಡಿಸಿದ್ದಾರೆ.

ADVERTISEMENT

ಇದರಲ್ಲಿ ನಟಿ ಸುಮಲತಾ ಅಂಬರೀಷ್‌ ರಾಜಮಾತೆಯಾಗಿ ಬಣ್ಣ ಹಚ್ಚಲಿದ್ದಾರೆ. ಸಾಹಿತಿ ಬಿ.ಎಲ್‌. ವೇಣು ಅವರ ಕಾದಂಬರಿ ಆಧಾರಿತ ಚಿತ್ರ ಇದು. ಹಂಸಲೇಖ ಸಂಗೀತ ಸಂಯೋಜಿಸಿದ್ದಾರೆ. ರಾಕ್‌ಲೈನ್‌ ವೆಂಕಟೇಶ್‌ ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.