ದಿವಂಗತ ನಟ ರಿಷಿ ಕಪೂರ್ ಪತ್ನಿ ನೀತೂ ಸಿಂಗ್ ಮತ್ತು ಪುತ್ರ, ನಟ ರಣಬೀರ್ ಕಪೂರ್ ಅವರಿಗೂ ಕೊರೊನಾ ಸೋಂಕು ತಗುಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ, ಕಪೂರ್ಕುಟುಂಬ ಈ ವದಂತಿಯನ್ನು ಸಾರಾಸಗಟಾಗಿ ತಳ್ಳಿ ಹಾಕಿದೆ.
‘ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ಇದು ಜನರ ಗಮನ ಸೆಳೆಯುವ ಕ್ಷುಲ್ಲಕ ತಂತ್ರ. ಇಂಥ ಸುಳ್ಳುಸುದ್ದಿ ಹಬ್ಬಿಸುವ ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸಬೇಕಿದೆ’ ಎಂದು ರಣಬೀರ್ ಕಪೂರ್ ಸಹೋದರಿ ರಿದ್ಧಿಮಾ ಕಪೂರ್ ಸಹಾನಿ ಇನ್ಸ್ಟಾಗ್ರಾಂನಲ್ಲಿ ಹರಿಹಾಯ್ದಿದ್ದಾರೆ.
ಅಮಿತ್ ವಶಿಷ್ಠ ಎಂಬುವರು ಮಾಡಿದ್ದ ಟ್ವೀಟ್ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ. ಇತ್ತೀಚೆಗೆ ಜನ್ಮದಿನ ಆಚರಿಸಿಕೊಂಡ ನೀತೂ ಸಿಂಗ್ ಅವರ ನಿವಾಸದಲ್ಲಿ ನಡೆದ ಬರ್ತ್ಡೇ ಪಾರ್ಟಿಗೆ ನಟ ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಬಂದಿದ್ದರು. ಅವರಿಂದ ನೀತೂ ಸಿಂಗ್ ಮತ್ತು ರಣಬೀರ್ ಕಪೂರ್ ಅವರಿಗೂ ಸೋಂಕು ತಗುಲಿದೆ. ಈ ಪಾರ್ಟಿಯಲ್ಲಿದ್ದ ಬಾಲಿವುಡ್ ಸ್ಟಾರ್ ನಿರ್ದೇಶಕ ಕರಣ್ ಜೋಹರ್ಗೂ ಸೋಂಕು ತಗುಲಿದೆ ಎಂದು ವಶಿಷ್ಠ ಪೋಸ್ಟ್ ಮಾಡಿದ್ದರು. ಇದಾದ ನಂತರ ಹರಡಿದ್ದ ವದಂತಿಗಳಿಗೆ ರಿದ್ಧಿಮಾ ಈಗ ತೆರೆ ಎಳೆದಿದ್ದಾರೆ.
ಅಗಸ್ತ್ಯ ನಂದಾ ಅವರು ಅಮಿತಾಭ್ –ಜಯಾ ದಂಪತಿ ಪುತ್ರಿ ಶ್ವೇತಾ ಬಚ್ಚನ್ ನಂದಾ ಅವರ ಪುತ್ರ. ಬಚ್ಚನ್ ಕುಟುಂಬದ ಸದಸ್ಯರಿಗೆ ಸೋಂಕು ದೃಢಪಟ್ಟ ನಂತರ ಈ ಸುದ್ದಿ ರಕ್ಕೆಪುಕ್ಕ ಪಡೆದಿತ್ತು. ಶ್ವೇತಾ, ಅವರ ಪತಿ, ಪುತ್ರಿ ಮತ್ತು ಪುತ್ರ ಕೋವಿಡ್–19 ಪರೀಕ್ಷೆ ಮಾಡಿಸಿಕೊಂಡಿದ್ದು, ಅವರಿಗೆ ಸೋಂಕು ಇಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.