ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ತೆಲುಗಿನ ‘ಸರಿಲೇರು ನೀಕೆವ್ವರು’ ಸಿನಿಮಾದ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಇದರಲ್ಲಿ ಮಹೇಶ್ಬಾಬು ಮತ್ತು ಆಕೆಯ ಕೆಮಿಸ್ಟ್ರಿ ಯಶಸ್ವಿಯಾಗಿದೆ.
ವಿಜಯ ದೇವರಕೊಂಡ ಜೊತೆಗೆ ನಟಿಸಿದ್ದ ‘ಡಿಯರ್ ಕಾಮ್ರೇಡ್’ ಚಿತ್ರದ ಸೋಲಿನಿಂದ ದಿಕ್ಕೆಟ್ಟಿದ್ದ ಆಕೆಗೆ ಈ ಸಿನಿಮಾದ ಯಶಸ್ಸು ಹೊಸ ಹುರುಪು ತುಂಬಿದೆ. ಮತ್ತೊಂದೆಡೆ ಈ ಗೆಲುವೇ ಆಕೆಗೆ ತೆಲುಗಿನಲ್ಲಿ ಮತ್ತಷ್ಟು ಅವಕಾಶಗಳಿಗೆ ರತ್ನಗಂಬಳಿಯನ್ನೂ ಹಾಸಿದೆ.
ಪ್ರಸ್ತುತ ರಶ್ಮಿಕಾ ಅವರು ಅಲ್ಲು ಅರ್ಜುನ್ ಜೊತೆಗೆ ಹೊಸ ಚಿತ್ರದಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತಿದೆ. ಈ ಚಿತ್ರ ನಿರ್ದೇಶಿಸುತ್ತಿರುವುದು ಸುಕುಮಾರ್. ಈ ನಡುವೆಯೇ ನಟ ಅಕ್ಕಿನೇನಿ ನಾಗಚೈತನ್ಯ ನಟನೆಯ ಹೊಸ ಚಿತ್ರ ‘ನಾಗೇಶ್ವರರಾವ್’ದಲ್ಲಿ ನಟಿಸುವಂತೆ ಆಕೆಗೆ ಆಫರ್ ಬಂದಿದೆಯಂತೆ.
ತೆಲುಗಿನಲ್ಲಿ ಆಕೆಗೆ ಭದ್ರನೆಲೆ ಒದಗಿಸಿದ ಚಿತ್ರ ‘ಗೀತ ಗೋವಿಂದಂ’. ಇದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಪರಶುರಾಮ್ ಅವರೇ ‘ನಾಗೇಶ್ವರರಾವ್’ ಚಿತ್ರವನ್ನೂ ನಿರ್ದೇಶಿಸುತ್ತಿದ್ದಾರೆ. ಅವರೇ ಈ ಚಿತ್ರದಲ್ಲಿ ನಟಿಸುವಂತೆ ರಶ್ಮಿಕಾಗೆ ಕೋರಿದ್ದಾರಂತೆ. ಶೀಘ್ರವೇ, ಈ ಚಿತ್ರದ ಶೂಟಿಂಗ್ ಶುರುವಾಗಲಿದೆ. ಆದರೆ, ಇದರಲ್ಲಿ ನಟಿಸುವ ಬಗ್ಗೆ ಇನ್ನೂ ಆಕೆ ಯಾವುದೇ ಒಪ್ಪಿಗೆ ನೀಡಿಲ್ಲವಂತೆ. ಟಾಲಿವುಡ್ನಲ್ಲಿ ರಶ್ಮಿಕಾಗೆ ಗಟ್ಟಿನೆಲೆ ಕಲ್ಪಿಸಿದ್ದು, ಪರಶುರಾಮ್. ಹಾಗಾಗಿಯೇ, ರಶ್ಮಿಕಾ ಸಮ್ಮತಿಸುವ ನಿರೀಕ್ಷೆಯಿದೆ ಎನ್ನುವುದು ಆಕೆಯ ಅಭಿಮಾನಿಗಳ ಲೆಕ್ಕಾಚಾರ.
ತಮಿಳಿನ ‘ಸುಲ್ತಾನ್’ ಚಿತ್ರದಲ್ಲಿ ನಟಿಸಲು ರಶ್ಮಿಕಾ ಸಿದ್ಧತೆ ನಡೆಸಿದ್ದಾರೆ. ಇದಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಬಕ್ಕಿಯರಾಜ್ ಕಣ್ಣನ್. ಕನ್ನಡದಲ್ಲಿಯೂ ಧ್ರುವ ಸರ್ಜಾ ನಟನೆಯ ‘ಪೊಗರು’ ಸಿನಿಮಾಕ್ಕೂ ಆಕೆಯೇ ನಾಯಕಿ. ಇದರಲ್ಲಿ ಆಕೆಯದು ಶಿಕ್ಷಕಿಯ ಪಾತ್ರ. ಮಾರ್ಚ್ ಅಂತ್ಯಕ್ಕೆ ಈ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮತ್ತೊಂದೆಡೆ ನಿತಿನ್ ನಾಯಕರಾಗಿರುವ ತೆಲುಗಿನ ‘ಭೀಷ್ಮ’ ಚಿತ್ರಕ್ಕೂ ಅವರೇ ಹೀರೊಯಿನ್. ರೊಮ್ಯಾಂಟಿಕ್ ಕಾಮಿಡಿ ಚಿತ್ರ ಇದು. ಫೆ. 21ರಂದು ಥಿಯೇಟರ್ಗೆ ಲಗ್ಗೆ ಇಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.