‘ಕ್ರೇಜಿಸ್ಟಾರ್’ ರವಿಚಂದ್ರನ್ ಅವರ ಏಕೈಕ ಪುತ್ರಿ ಗೀತಾಂಜಲಿ ಅವರ ವಿವಾಹ ಮೇ 28 ಮತ್ತು 29ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಗೀತಾಂಜಲಿ ಅವರು ಉದ್ಯಮಿ ಅಜಯ್ ಅವರ ಕೈ ಹಿಡಿಯಲಿದ್ದಾರೆ.
ಈಗಾಗಲೇ, ರವಿಚಂದ್ರನ್ ದಂಪತಿಯು ಖುದ್ದಾಗಿ ಮದುವೆಯ ಕರೆಯೋಲೆಯನ್ನು ಸಂಬಂಧಿಕರು, ಸ್ನೇಹಿತರಿಗೆ ತಲುಪಿಸಲು ಆರಂಭಿಸಿದ್ದಾರೆ. ಅಂದಹಾಗೆ ಗೀತಾಂಜಲಿ ಮತ್ತು ಅಜಯ್ ವಿವಾಹಕ್ಕೆ 3D ಆಮಂತ್ರಣ ಪತ್ರಿಕೆ ಮುದ್ರಿಸಿರುವುದು ಚಂದನವನದ ಗಮನ ಸೆಳೆದಿದೆ. ಒಂದು ಆಮಂತ್ರಣ ಪತ್ರಿಕೆಯ ಬೆಲೆ ₹ 3 ಸಾವಿರ ಎನ್ನಲಾಗಿದೆ. ಈ ಆಮಂತ್ರಣ ಪತ್ರಿಕೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಮಂತ್ರಣ ಪತ್ರಿಕೆಯಲ್ಲಿ ಕ್ರೇಜಿಸ್ಟಾರ್ ಅವರ ಸುಂದರವಾದ ಫೋಟೊವಿದೆ. ಮದುವೆಯ ವಿವರ ಮತ್ತ ಕುಟುಂಬದ ಸದಸ್ಯರ ಹೆಸರು ಮುದ್ರಿಸಲಾಗಿದೆ.
ಸಿನಿಮಾ ನಟ–ನಟಿಯರು, ಕಲಾವಿದರ ಮಕ್ಕಳ ಮದುವೆಯು ಸಾರ್ವಜನಿಕವಾಗಿ ನಡೆದಾಗ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಜಮಾಯಿಸುವುದು ಸರ್ವೇ ಸಾಮಾನ್ಯ. ಇದರ ಪರಿಣಾಮ ದೂರದ ಸ್ಥಳಗಳಿಂದ ಬರುವ ನಟ, ನಟಿಯರು ನವ ವಧು–ವರರಿಗೆ ಶುಭ ಕೋರಲು ಪ್ರಯಾಸಪಡಬೇಕಾದ ಸ್ಥಿತಿ ಎದುರಾಗಲಿದೆ. ಹಾಗಾಗಿ, ಕ್ರೇಜಿಸ್ಟಾರ್ ಅವರು ತನ್ನ ಪುತ್ರಿಯ ವಿವಾಹಕ್ಕೆ ಆಪ್ತರು ಮತ್ತು ಕುಟುಂಬದ ಸದಸ್ಯರಿಗಷ್ಟೇ ಆಹ್ವಾನ ನೀಡುತ್ತಾರೆಯೇ? ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಕಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.