ಬಾಲಿವುಡ್ ನಟ ಸೈಫ್ ಅಲಿ ಖಾನ್ ವಿರುದ್ಧ ದೂರು ದಾಖಲಾಗಿದೆ. ಆದಿಪುರುಷ್ ಸಿನಿಮಾಕ್ಕೆ ಸಂಬಂಧಿಸಿದ ಸಂದರ್ಶನವೊಂದರಲ್ಲಿ ಸೈಫ್ ರಾವಣನನ್ನು ‘ಮಾನವೀಯ ಗುಣವುಳ್ಳವನು’ ಎಂದು ಕರೆದಿದ್ದರು. ಈ ಸಂದರ್ಶನದ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಹಲವರು ಅಕ್ಷೇಪ ವ್ಯಕ್ತಪಡಿಸಿದ್ದರು. ತಕ್ಷಣಕ್ಕೆ ಎಚ್ಚೆತ್ತುಕೊಂಡ ಸೈಫ್ ಕ್ಷಮೆ ಕೇಳಿದ್ದರು.
ಆದರೆ ಈಗ ಸೈಫ್ ಹೇಳಿಕೆಯ ವಿರುದ್ಧ ಉತ್ತರಪ್ರದೇಶದ ಜೌನ್ಪುರದ ವಕೀಲರೊಬ್ಬರು ದೂರುದಾಖಲಿಸಿದ್ದಾರೆ.
ಓಂ ರಾವತ್ ನಿರ್ದೇಶನದ ಆದಿಪುರುಷ್ನಲ್ಲಿ ಸೈಫ್ ಲಂಕೇಶ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಮಾಯಣವನ್ನು ಆಧರಿಸಿದ ಈ ಸಿನಿಮಾದಲ್ಲಿ ದಕ್ಷಿಣದ ಖ್ಯಾತ ನಟ ಪ್ರಭಾಸ್ ರಾಮನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.
‘ಡಿಸೆಂಬರ್ 6 ರಂದು ಸೈಫ್ ತಮ್ಮ ಸಂದರ್ಶನದಲ್ಲಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು. ಅದರಲ್ಲಿ ರಾವಣನನ್ನು ಹೊಗಳಿದ ಸೈಫ್ ರಾವಣ ತನ್ನ ತಂಗಿ ಶೂರ್ಪನಖಿಯ ಮೂಗನ್ನು ಲಕ್ಷ್ಮಣ ಕತ್ತರಿಸಿದ ಎಂಬ ಕೋಪಕ್ಕೆ ಸೀತೆಯನ್ನು ಅಪಹರಿಸಿದ ಎಂದು ರಾವಣನ ಪರವಾಗಿ ಮಾತನಾಡಿದ್ದಾರೆ’ ಎಂದು ವಕೀಲರು ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದಾರೆ.
ಈ ಪ್ರಕರಣವು ಎಸಿಜೆಎಂ ನ್ಯಾಯಾಲಯದಲ್ಲಿದ್ದು ಡಿಸೆಂಬರ್ 23 ಅನ್ನು ಮುಂದಿನ ವಿಚಾರಣೆಗೆ ದಿನಾಂಕ ನಿಗದಿಪಡಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.