ಸದ್ಯ ‘ಕಾಂತಾರ ಚಾಪ್ಟರ್ 1’ ಬಿಡುಗಡೆ ಸಿದ್ಧತೆಯಲ್ಲಿರುವ ನಟ ರಿಷಬ್ ಶೆಟ್ಟಿ ಮತ್ತೊಂದು ತೆಲುಗು ಚಿತ್ರ ಒಪ್ಪಿಕೊಂಡಿದ್ದಾರೆ. ಯುವ ನಿರ್ದೇಶಕ ಅಶ್ವಿನ್ ಗಂಗರಾಜು ರಿಷಬ್ ಅವರ ಎರಡನೇ ತೆಲುಗು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ರಿಷಬ್ ಅವರ ಮೊದಲ ತೆಲುಗು ಚಿತ್ರ ‘ಜೈ ಹನುಮಾನ್’ ಈಗಾಗಲೇ ಘೋಷಣೆಗೊಂಡಿದ್ದು, ಪ್ರಶಾಂತ್ ವರ್ಮಾ ನಿರ್ದೇಶಿಸಲಿದ್ದಾರೆ.
ಅಶ್ವಿನ್ ಗಂಗರಾಜು ‘ಬಾಹುಬಲಿ’ ಚಿತ್ರದ ಬರಹಗಾರರಾಗಿ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದವರು. 2021ರಲ್ಲಿ ‘ಆಕಾಶವಾಣಿ’ ಎಂಬ ಕಂಟೆಂಟ್ ಆಧಾರಿತ ಸಿನಿಮಾ ನಿರ್ದೇಶಿಸಿದ್ದರು. ಇದೀಗ 18ನೇ ಶತಮಾನದ ಕ್ರಾಂತಿಕಾರಿ ಕಥೆಯನ್ನು ಹೇಳಲು ಸಿದ್ಧರಾಗಿದ್ದಾರೆ. ರಿಷಬ್ ಕ್ರಾಂತಿಕಾರಿ ಯುವಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರದ ಫಸ್ಟ್ಲುಕ್ ಬಿಡುಗಡೆಗೊಂಡಿದೆ. ಸ್ವಾತಂತ್ರ ಪೂರ್ವದ ಐತಿಹಾಸಿಕ ಕಥೆಯನ್ನು ಹೊಂದಿರುವ ಚಿತ್ರ ಎಂಬುದು ಪೋಸ್ಟರ್ನಿಂದ ಮೇಲ್ನೋಟಕ್ಕೆ ತಿಳಿಯುತ್ತಿದೆ.
‘ಕಾಂತಾರ ಚಾಪ್ಟರ್ 1’ ಈ ವರ್ಷ ಅ.2ರಂದು ತೆರೆಗೆ ಬರಲಿದೆ. ಅದಾದ ಬಳಿಕ ರಿಷಬ್ ‘ಜೈ ಹನುಮಾನ್’ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಇದರ ಜತೆಗೆ ಬಾಲಿವುಡ್ನ ‘ಛತ್ರಪತಿ ಶಿವಾಜಿ’ ಚಿತ್ರದಲ್ಲಿಯೂ ನಟಿಸಿದ್ದಾರೆ. ಇವೆರಡು ಚಿತ್ರಗಳ ಬಳಿಕ ಅಶ್ವಿನ್ ನಿರ್ದೇಶನದ ಚಿತ್ರ ಸೆಟ್ಟೇರಲಿದೆ. ತೆಲುಗಿನ ಜನಪ್ರಿಯ ನಿರ್ಮಾಪಕ ನಾಗವಂಶಿ ತಮ್ಮ ಸಿತಾರ ಎಂಟರ್ಟೈನ್ಮೆಂಟ್ ಅಡಿಯಲ್ಲಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಈ ವಾರ ತೆರೆ ಕಾಣುತ್ತಿರುವ ವಿಜಯ್ ದೇವರಕೊಂಡ ಅಭಿನಯದ ‘ಕಿಂಗ್ಡಮ್’ ಸೇರಿದಂತೆ ಸಾಕಷ್ಟು ದೊಡ್ಡ ಬಜೆಟ್ ಸಿನಿಮಾಗಳನ್ನು ನಿರ್ಮಿಸಿರುವ ಸಂಸ್ಥೆಯಿದು. ರಿಷಬ್ ಚಿತ್ರ ಸಂಸ್ಥೆಯ 36ನೇ ಸಿನಿಮಾವಾಗಿದ್ದು, ಇದು ಸಹ ದೊಡ್ಡ ಬಜೆಟ್ನಲ್ಲಿ ನಿರ್ಮಾಣಗೊಳ್ಳುತ್ತಿರುವ ಸಿನಿಮಾ ಎನ್ನಲಾಗಿದೆ. ತೆಲುಗು ಮತ್ತು ಕನ್ನಡದಲ್ಲಿ ಈ ಸಿನಿಮಾ ನಿರ್ಮಾಣಗೊಳ್ಳಲಿದ್ದು, ಉಳಿದ ಭಾಷೆಗಳಿಗೆ ಡಬ್ ಆಗಲಿದೆ.
ರಿಷಬ್ ಶೆಟ್ಟಿ ‘ಕಾಂತಾರ’ ಯಶಸ್ಸಿನ ಬಳಿಕ ಐತಿಹಾಸಿಕ, ಪೌರಾಣಿಕ ಪಾತ್ರಗಳನ್ನೇ ಆಯ್ದುಕೊಳ್ಳುತ್ತಿದ್ದಾರೆ. ಬಾಲಿವುಡ್ನಲ್ಲಿ ‘ಕೃಷ್ಣದೇವರಾಯ’ ಸಿನಿಮಾ ಮಾಡಲು ಇವರು ಮುಂದಾಗಿದ್ದಾರೆ ಎಂಬ ವದಂತಿಯೂ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.