ನಟ ರೋಜರ್ ನಾರಾಯಣ್ ಅವರು ಹೊಸ ಸಿನಿಮಾ ಮಾಡುತ್ತಿದ್ದಾರೆ. ಇದರಲ್ಲಿ ಅವರೇ ನಾಯಕ ನಟ. ಚಿತ್ರದ ಹೆಸರು ಕಾರ್ಕಿ. ಆದರೆ ಚಿತ್ರಕ್ಕೂ ಶೀರ್ಷಿಕೆಗೂ ಸಂಬಂಧ ಇಲ್ಲವಂತೆ!
‘ಕಾರ್ಕಿ’ ಚಿತ್ರದ ಮುಹೂರ್ತ ಕಾರ್ಯಕ್ರಮ ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನಡೆಯಿತು. ಮುಹೂರ್ತದ ನಂತರ, ಸಿನಿಮಾ ತಂಡ ಸುದ್ದಿಗಾರರ ಎದುರು ಬಂದು ಕುಳಿತಿತು. ಲೋಕೇಶ್ ಪ್ರಭು ಅವರು ಈ ಚಿತ್ರಕ್ಕೆ ಆ್ಯಕ್ಷನ್–ಕಟ್ ಹೇಳುತ್ತಿದ್ದಾರೆ.
‘ಚಿತ್ರದ ಶೀರ್ಷಿಕೆಗೂ, ಚಿತ್ರಕ್ಕೂ ಸಂಬಂಧ ಇಲ್ಲ. ಆದರೆ, ಶೀರ್ಷಿಕೆಯು ಚೆನ್ನಾಗಿದೆ ಎಂಬ ಕಾರಣಕ್ಕೆ ಅದನ್ನು ಆಯ್ಕೆ ಮಾಡಿಕೊಳ್ಳಲಾಯಿತು’ ಎಂದರು ಪ್ರಭು. ಇದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ.
‘ನಗರದ ಸಂಸ್ಕೃತಿ ಅಳವಡಿಸಿಕೊಂಡಿರುವ ಯುವಕರ ಜೀವನದಲ್ಲಿ ಒಂದು ದಿನದಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದು ಸಿನಿಮಾ ಕಥೆ’ ಎಂದು ವಿವರಿಸಿದರು. ಚಿತ್ರದ ಕಥೆಯು ಆ ಯುವಕರ ಜೀವನ ಶೈಲಿಯ ಬಗ್ಗೆಯೂ ಒಂದಿಷ್ಟು ಮಾತುಗಳನ್ನು ಹೇಳುತ್ತದೆಯಂತೆ.
ಈ ಸಿನಿಮಾ ಚಿತ್ರೀಕರಣವು ಬೆಂಗಳೂರು, ದಾಂಡೇಲಿ ಮತ್ತು ಯಲ್ಲಾಪುರದಲ್ಲಿ ನಡೆಯಲಿದೆ. ‘ಇದರಲ್ಲಿ ಸೈಕಲಾಜಿಕಲ್ ಥ್ರಿಲ್ಲರ್ ಅಂಶ ಕೂಡ ಅಡಕವಾಗಿದೆ. ಇದೊಂದು ಹೊಸ ಬಗೆಯ ಸಿನಿಮಾ’ ಎಂದರು ನಾರಾಯಣ್. ಆಧುನಿಕ ಬದುಕಿನಲ್ಲಿ ನಡೆಯುವ ಘಟನೆಯೊಂದು, ಎಲ್ಲ ಸಂದರ್ಭಗಳಲ್ಲೂ ಕಾಡುತ್ತಿರುತ್ತದೆ. ಅದು ಸಿನಿಮಾ ಕಥೆ ಎಂದರು ನಾರಾಯಣ್.
ಈ ಚಿತ್ರದಲ್ಲಿ ಮೂವರು ನಾಯಕಿಯರು ಇದ್ದಾರೆ. ಪಾವನಾ, ರಿಹಾಂಶಿ ಮತ್ತು ಐಶ್ವರ್ಯಾ ಅವರು ಆ ಪಾತ್ರಗಳನ್ನು ನಿಭಾಯಿಸಲಿದ್ದಾರೆ. ಪಾವನಾ ಅವರದ್ದು ಪೂರ್ವಿ ಎನ್ನುವ ಪಾತ್ರ. ಇದು ‘ದಿಟ್ಟ ಮನಸ್ಸಿನ, ಸಾಹಸ ಪ್ರವೃತ್ತಿಯ, ಪ್ರ್ಯಾಕ್ಟಿಕಲ್ ಆಗಿ ಆಲೋಚಿಸುವ’ ಪಾತ್ರ ಎಂದರು ಪಾವನಾ.
ಕವಿ ಎನ್ನುವ ಪಾತ್ರವನ್ನು ರಿಹಾಂಶಿ ಅಭಿನಯಿಸುತ್ತಿದ್ದಾರೆ. ಐಶ್ವರ್ಯಾ ಅವರನ್ನು ಅಹಲ್ಯಾ ಎನ್ನುವ ಪಾತ್ರ. ‘ಇದು ಹೊಸ ತಲೆಮಾರಿನವರ ಸಿನಿಮಾ. ಅವರು ಹೇಗೆ ಆಲೋಚಿಸುತ್ತಾರೆ, ಹೇಗೆ ವರ್ತಿಸುತ್ತಾರೆ, ಪರಿಸ್ಥಿತಿಗಳನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದು ಸಿನಿಮಾದಲ್ಲಿ ಇದೆ’ ಎಂದರು ಐಶ್ವರ್ಯಾ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.