ಬೆಂಗಳೂರು:ಕೋವಿಡ್ ಲಾಕ್ಡೌನ್ನಿಂದಾಗಿ ಸಮಸ್ಯೆಯಲ್ಲಿ ಸಿಲುಕಿ ತೀವ್ರ ಸಂಕಷ್ಟ ಎದುರಿಸುತ್ತಿರುವ ಕುಟುಂಬಗಳಿಗೆ ತುಳು ಚಿತ್ರರಂಗದ ನಟ ರೂಪೇಶ್ ಶೆಟ್ಟಿ ಹಾಗೂ ಅವರ ತಂಡ ಆಹಾರ ಕಿಟ್ಗಳನ್ನು ವಿತರಿಸುತ್ತಿದೆ.
ಕಳೆದ ವರ್ಷ ಲಾಕ್ಡೌನ್ ಸಂದರ್ಭದಲ್ಲಿಯೂ ಅನೇಕ ನಿರಾಶ್ರಿತರಿಗೆ ಆಹಾರ ಸರಬರಾಜು ಮಾಡುವ ಮೂಲಕ ರೂಪೇಶ್ ಶೆಟ್ಟಿ ನೆರವಾಗಿದ್ದರು. ಈ ಬಾರಿ ಸಂಕಷ್ಟದಲ್ಲಿರುವ ಕುಟುಂಬದ ಸದಸ್ಯರು ತಮ್ಮ ತಂಡಕ್ಕೆ ಕರೆ ಮಾಡಿದರೆ, ಅವರಿಗೆ ಅಗತ್ಯವಿರುವ ಆಹಾರ ಸಾಮಾಗ್ರಿಗಳ ರೇಷನ್ ಕಿಟ್ ಹಾಗೂ ತರಕಾರಿ ಕಿಟ್ಗಳನ್ನು ಅವರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ಮಂಗಳೂರಿನ ಕಾವೂರು, ಕೋಡಿಕಲ್, ಬೋಳೂರು, ಉರ್ವ, ಬಜಾಲ್, ಜಲ್ಲಿಗುಡ್ಡೆ, ಫೈಸಲ್ನಗರ, ಸುರತ್ಕಲ್, ಕೊಡಿಯಾಲ್ ಬೈಲ್, ಕುದ್ರೋಳಿ, ಮಂಗಳಾದೇವಿ ಸೇರಿದಂತೆ ನಗರದಾದ್ಯಂತ ಸುಮಾರು ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಸಹಾಯ ಹಸ್ತ ಚಾಚಿದ್ದಾರೆ. ಇವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
‘ಉಡುಪಿ ಜಿಲ್ಲೆಯ ಹಲವು ಭಾಗಗಳಿಂದಲೂ ಸಹಾಯಕ್ಕಾಗಿ ಕರೆಗಳು ಬರುತ್ತಿದ್ದು ಮುಂದಿನ ದಿನಗಳಲ್ಲಿ ಅಲ್ಲೂ ಜನರಿಗೆ ನೆರವಾಗುತ್ತೇವೆ. ಪ್ರತಿಯೊಬ್ಬರೂ ತಮ್ಮ ಪರಿಸರದಲ್ಲಿ ಸಂಕಷ್ಟ ಅನುಭವಿಸುತ್ತಿರುವ ಬಡ ಕುಟುಂಬಗಳಿಗೆ ನೆರವಾಗಬೇಕು’ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ. ರೂಪೇಶ್ ಶೆಟ್ಟಿ ಅವರ ಈ ಕಾರ್ಯಕ್ಕೆ ಅನಿಲ್ ಶೆಟ್ಟಿ, ದೀಕ್ಷಿತ್ ಆಳ್ವ, ಮಂಜುನಾಥ್ ಅತ್ತಾವರ್, ಲವಿತ್ ಕೊಟ್ಟಾರಿ, ನಿತೇಶ್ ಕುಲಾಲ್, ವಜ್ರೇಶ್ ಸನಿಲ್, ರಾಜ ಮಾಣಿ, ನಿಖಿಲ್ ಬೇಕಲ್ ಮೊದಲಾದವರು ಕೈಜೋಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.