ADVERTISEMENT

ಸಾಧು ಕೋಕಿಲ ವಿರುದ್ಧ ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪ: ಹೈಕೋರ್ಟ್‌ ನೋಟಿಸ್

ಸರಸ್ವತಿಪುರಂ ಪೊಲೀಸರಿಗೆ ಹೈಕೋರ್ಟ್‌ ನೋಟಿಸ್

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2019, 15:28 IST
Last Updated 23 ಅಕ್ಟೋಬರ್ 2019, 15:28 IST
   

ಬೆಂಗಳೂರು: ‘ನಟ ಸಾಧು ಕೋಕಿಲ ಅವರು ಮೈಸೂರಿನ ಸಲೂನ್‌ನಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರ ಘನತೆಗೆ ಧಕ್ಕೆ ತಂದಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ಸರಸ್ವತಿಪುರಂ ಪೊಲೀಸ್‌ ಠಾಣಾಧಿಕಾರಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

‘ದೋಷಾರೋಪ ಪಟ್ಟಿಯಿಂದ ನನ್ನ ಹೆಸರು ಕೈಬಿಡಬೇಕು’ ಎಂದು ಕೋರಿ ಸಾಧು ಕೋಕಿಲ ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಪಿ.ಬಿ.ಭಜಂತ್ರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸಾಧು ಕೋಕಿಲ ಪರ ವಕೀಲ ಎಚ್.ಎಸ್.ಚಂದ್ರಮೌಳಿ, ‘ಅರ್ಜಿದಾರರ ವಿರುದ್ಧದ ಆರೋಪಗಳಿಗೆ ಯಾವುದೇ ಸಾಕ್ಷ್ಯಾಧಾರ ಇಲ್ಲ. ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಇದು ಅವರ ತೇಜೋವಧೆ ಮಾಡುವ ಯತ್ನವಾಗಿದೆ. ಆದ್ದರಿಂದ ಈ ಕುರಿತಂತೆ ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕು’ ಎಂದು ಕೋರಿದರು.

ADVERTISEMENT

ನ್ಯಾಯಪೀಠವು, ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದ್ದು, ವಿಚಾರಣೆ ಮುಂದೂಡಿದೆ.

ಪ್ರಕರಣವೇನು?: ‘ಸರಸ್ವತಿ ಪುರಂ ಪೊಲೀಸ್‌ ಠಾಣೆ ಸರಹದ್ದಿನ ಬೋಗಾದಿ ರಿಂಗ್ ರೋಡ್ ಬಳಿಯ ಸ್ವಾಮಿ ಆರ್ಕೇಡ್‌ ಕಟ್ಟಡದಲ್ಲಿನ ಲೈಕ್ ಟ್ರೆಂಡ್‌ ಫ್ಯಾಮಿಲಿ ಸಲೂನ್‌ನಲ್ಲಿ ಅದರ ಮಾಲೀಕರು ಹುಡುಗಿಯರನ್ನು ಇಟ್ಟುಕೊಂಡು ಮಸಾಜ್‌ ಮಾಡುವ ನೆಪದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ’ ಎಂಬ ಖಚಿತ ಮಾಹಿತಿ ಆಧರಿಸಿ ಪೊಲೀಸರು 2017ರ ಡಿಸೆಂಬರ್ 20ರಂದು ಸಲೂನ್‌ ಮೇಲೆ ದಾಳಿ ನಡೆಸಿದ್ದರು.

ದಾಳಿ ವೇಳೆ ಸಲೂನ್‌ ಮಾಲೀಕ ರಾಜೇಶ್ ಹಾಗೂ ಒಬ್ಬ ಮಹಿಳಾ ಸಿಬ್ಬಂದಿ ಇದ್ದರು. ಮಹಿಳಾ ಸಿಬ್ಬಂದಿ ವಿಚಾರಣೆ ನಡೆಸಿದಾಗ ಆಕೆ ನೀಡಿದ ಹೇಳಿಕೆಯನ್ನು ದಾಖಲಿಸಿಕೊಂಡು ಸಾಧು ಕೋಕಿಲ ವಿರುದ್ಧ ದೂರು ದಾಖಲಿಸಿದ್ದರು.

ಹೇಳಿಕೆಯಲ್ಲೇನಿತ್ತು?: ‘ಪಾರ್ಲರ್‌ಗೆ ಬಂದಂತಹ ಪುರುಷರ ಗುಪ್ತ ಅಂಗಗಳಿಗೆ ಮಸಾಜ್‌ ಮಾಡಲು ನನಗೆ ಹೇಳಿದರು. ಆ ಪಾರ್ಲರ್‌ನಲ್ಲಿ ಸಾಧು ಕೋಕಿಲ ಮತ್ತು ಮಂಡ್ಯ ರಮೇಶ್‌ ಅವರ ಗುಪ್ತ ಅಂಗಗಳಿಗೂ ಮಸಾಜ್‌ ಮಾಡಬೇಕಾಗಿತ್ತು’ ಎಂದು ಮಹಿಳೆ ವಿಚಾರಣೆ ವೇಳೆ ಪೊಲೀಸರಿಗೆ ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.