ಸೈಫ್, ಮೊಹಮ್ಮದ್
ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿರುವ ಆರೋಪಿಯನ್ನು ಸೈಫ್ ಅವರ ಮನೆಗೆ ಕರೆತಂದು ಘಟನೆಯ ಮರುಸೃಷ್ಟಿ ಮಾಡಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಂಧಿತ ಆರೋಪಿಯನ್ನು ನ್ಯಾಯಾಲಯ ಐದು ದಿನ ಪೊಲೀಸ್ ವಶಕ್ಕೆ ನೀಡಿದೆ.
ಹಲ್ಲೆ ನಡೆಸಿದ ಆರೋಪಿಯ ಹೆಸರು ಬಾಂಗ್ಲಾ ಮೂಲದ ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್, ಈತ ಬಾಂಗ್ಲಾದೇಶದ ಪ್ರಜೆ ಎಂದು ಪೊಲೀಸರು ಮಾಧ್ಯಮ ಪ್ರತಿನಿಧಿಗಳಿಗೆ ಭಾನುವಾರ ತಿಳಿಸಿದ್ದರು. ಈತ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ ತನ್ನ ಹೆಸರನ್ನು ವಿಜಯ್ ದಾಸ್ ಎಂದು ಬದಲಿಸಿಕೊಂಡಿದ್ದ ಎಂದು ಮಾಹಿತಿ ನೀಡಿದ್ದರು. ಸೈಫ್ ಅವರ ನಿವಾಸಕ್ಕೆ ಶೆಹಜಾದ್ ಕಳ್ಳತನದ ಉದ್ದೇಶದಿಂದ ಜನವರಿ 16ರ ನಸುಕಿನಲ್ಲಿ ಸೈಫ್ ಅವರ ಮನೆ ಪ್ರವೇಶಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಶೀಘ್ರದಲ್ಲೇ ಆರೋಪಿಯನ್ನು ಸೈಫ್ ಅವರ ಸದ್ಗುರು ಶರಣ್ ಅವರ ಅಪಾರ್ಟ್ಮೆಂಟ್ಗೆ ಕರೆತಂದು ಘಟನೆಯನ್ನು ಮರುಸೃಷ್ಟಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಸೈಫ್ ಅವರ ಮನೆಗೆ ನುಗ್ಗಿದ್ದ ಮೊಹಮ್ಮದ್ನನ್ನು ಸೈಫ್ ಅವರು ಹಿಡಿಯಲು ಹೋಗಿದ್ದರು. ಈ ವೇಳೆ ಮೊಹಮ್ಮದ್ ಸೈಫ್ ಅವರಿಗೆ ಚಾಕುವಿನಿಂದ ಐದಾರು ಕಡೆಗೆ ಇರಿದ್ದ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಸೈಫ್ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೈಫ್ ಅವರ ಮೇಲೆ ಹಲ್ಲೆ ನಡೆಸಿದ ನಂತರ ಆರೋಪಿಯು ಬೆಳಿಗ್ಗೆ 7 ಗಂಟೆಯವರೆಗೆ ಬಾಂದ್ರಾ ಪಶ್ಚಿಮದ ಪಟವರ್ಧನ ಗಾರ್ಡನ್ ಬಸ್ ನಿಲ್ದಾಣದಲ್ಲಿ ಮಲಗಿದ್ದ. ನಂತರ ರೈಲಿನ ಮೂಲಕ ವರ್ಲಿ ತಲುಪಿದ್ದ.
ತಾನು ಹಲ್ಲೆ ಮಾಡಿದ್ದು ಬಾಲಿವುಡ್ನ ಖ್ಯಾತ ನಟನೊಬ್ಬನ ಮೇಲೆ ಎಂಬುದು ದಾಳಿಕೋರನಿಗೆ ಗೊತ್ತೇ ಇರಲಿಲ್ಲ. ಸುದ್ದಿವಾಹಿನಿಗಳಲ್ಲಿ ಪ್ರಸಾರವಾದ ವರದಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್ಗಳನ್ನು ಗಮನಿಸಿದ ನಂತರವೇ ಆತನಿಗೆ ತಾನು ಖ್ಯಾತ ನಟನ ಮೇಲೆ ಹಲ್ಲೆ ಮಾಡಿರುವುದು ಗೊತ್ತಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಅದಾಗ್ಯೂ ಸೈಫ್ ಮೇಲೆ ಈತ ದಾಳಿ ಮಾಡು ನಿಖರ ಕಾರಣ ಏನೇಂಬುದನ್ನು ತಿಳಿಯಲು ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.